ದೇಶದಲ್ಲಿ ದಲಿತರು ಮತ್ತು ಮುಸ್ಲಿಮರ ‘ದಯನೀಯ ಸ್ಥಿತಿ’ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳು ‘ಕಹಿ ಸತ್ಯ’ದಿಂದ ಕೂಡಿವೆ ಎಂದು ಬಿಎಸ್ಪಿ ಮುಖ್ಯಸ್ಥರಾದ ಮಾಯಾವತಿ ಹೇಳಿದ್ದಾರೆ.
“ಹಿಂದೆ ಅಧಿಕಾರ ನಡೆಸಿರುವ ಕಾಂಗ್ರೆಸ್, ಬಿಜೆಪಿ ಮತ್ತು ಕೇಂದ್ರದ ಇತರ ಪಕ್ಷಗಳು ಈ ಸ್ಥಿತಿಗೆ ಕಾರಣವಾಗಿವೆ” ಎಂದು ಅವರು ಟೀಕಿಸಿದ್ದಾರೆ.
ಹಿಂದಿಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, “ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಅಮೆರಿಕ ಪ್ರವಾಸದ ಸಮಯದಲ್ಲಿ ಮಾತನಾಡಿದ್ದಾರೆ. ಕೋಟ್ಯಂತರ ದಲಿತರು ಮತ್ತು ಮುಸ್ಲಿಮರ ಶೋಚನೀಯ ಸ್ಥಿತಿ, ಭಾರತದಲ್ಲಿ ಅವರ ಜೀವನ, ಧರ್ಮದ ಅಭದ್ರತೆಯ ಬಗ್ಗೆ ತಿಳಿಸಿದ್ದಾರೆ. ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್, ಬಿಜೆಪಿ ಮತ್ತು ಇತರ ಪಕ್ಷಗಳೇ ಇದಕ್ಕೆ ಸಂಪೂರ್ಣ ಹೊಣೆಯಾಗಿರುವುದು ಕಹಿ ಸತ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿರಿ: ಪ್ರಧಾನಿ ಮೋದಿ ಭಾರತೀಯ ಸಮಾಜದ ಕತ್ತು ಹಿಸುಕುತ್ತಿದ್ದಾರೆ: ರಾಹುಲ್ ಗಾಂಧಿ
“ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಕಾಂಗ್ರೆಸ್ ಅಥವಾ ಬಿಜೆಪಿ ಸರ್ಕಾರ ಯಾವುದೇ ಇರಲಿ, ವಂಚಿತ ಸಮುದಾಯಗಳ ಮೇಲಿನ ಅನ್ಯಾಯ, ದೌರ್ಜನ್ಯ, ಶೋಷಣೆ ಸಾಮಾನ್ಯ ಸಂಗತಿಯಾಗಿದೆ. ಬಹುಸಂಖ್ಯಾತ ವರ್ಗದವರಿಂದ ಇವುಗಳು ನಡೆಯುತ್ತಿವೆ. ಉತ್ತರಪ್ರದೇಶದಲ್ಲಿ ಬಿಎಸ್ಪಿ ಸರ್ಕಾರವಿದ್ದಾಗ ಕಾನೂನು ಸುವ್ಯವಸ್ಥೆ ಸ್ಥಾಪಿಸಲಾಗಿತ್ತು. ಎಲ್ಲರಿಗೂ ನ್ಯಾಯವನ್ನು ಒದಗಿಸಲಾಗಿತ್ತು” ಎಂದು ಅವರು ಹೇಳಿದ್ದಾರೆ.
ರಾಜಕೀಯ ಮತ್ತು ಚುನಾವಣಾ ಸ್ವಹಿತಾಸಕ್ತಿಗಾಗಿ ನಡೆದ ಅಸಂಖ್ಯಾತ ಕೋಮುಗಲಭೆಗಳು, ಜಾತಿವಾದಿ ಘಟನೆಗಳ (ಪ್ರಚೋದಿತ) ಕರಾಳ ಇತಿಹಾಸವಿದೆ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
“ಮುಂಬರುವ ಮೂರು-ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸಲಾಗುವುದು” ಎಂದು ಗುರುವಾರ ರಾಹುಲ್ ಗಾಂಧಿ ಹೇಳಿದ್ದರು.
“ಮುಸ್ಲಿಂ ಲೀಗ್ ಪಕ್ಷವು ಸಂಪೂರ್ಣ ಜಾತ್ಯತೀತ ಪಕ್ಷವಾಗಿದೆ, ಮುಸ್ಲಿಂ ಲೀಗ್ನಲ್ಲಿ ಜಾತ್ಯತೀತವಲ್ಲದ ಯಾವುದೂ ಇಲ್ಲ” ಎಂದಿರುವ ಅವರು ಕೇರಳದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಜೊತೆಗಿನ ಕಾಂಗ್ರೆಸ್ ಮೈತ್ರಿಯನ್ನು ಸಮರ್ಥಿಸಿಕೊಂಡಿದ್ದಾರೆ. ರಾಹುಲ್ ಗಾಂಧಿಯವರು ಪ್ರಸ್ತುತ ಅಮೆರಿಕ ಪ್ರವಾಸದಲ್ಲಿದ್ದಾರೆ.