ತಮ್ಮ ಕರ್ತವ್ಯದ ಕೊನೆಯ ದಿನವಾದ ಜನವರಿ 31ರಂದು ಜ್ಞಾನವಾಪಿ ಮಸೀದಿಯ ನೆಲ ಮಹಡಿಯಲ್ಲಿ(ವ್ಯಾಸ್ ಜಿ ಕಾ ತೆಹ್ಖಾನಾ) ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿ ತೀರ್ಪು ಪ್ರಕಟಿಸಿದ್ಧ ನಿವೃತ್ತ ನ್ಯಾಯಾಧೀಶ ವಾರಣಾಸಿ ಎ ಕೆ ವಿಶ್ವೇಶ ಅವರನ್ನು ಉತ್ತರ ಪ್ರದೇಶ ಸರ್ಕಾರ ಸ್ಥಾಪಿಸಿರುವ ಲಕ್ನೋದ ಡಾ. ಶಕುಂತಳಾ ಮಿಶ್ರಾ ನ್ಯಾಷನಲ್ ರಿಹ್ಯಾಬಿಲಿಟೇಶನ್ ವಿಶ್ವವಿದ್ಯಾಲಯಕ್ಕೆ ಲೋಕ್ಪಾಲ್ ಆಗಿ ಸರ್ಕಾರ ನೇಮಿಸಿದೆ.
ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶ ಹೊಂದಿರುವ ಈ ವಿಶ್ವವಿದ್ಯಾಲಯದ ಒಂಬುಡ್ಸ್ಮನ್ ಆಗಿ ನಿವೃತ್ತ ನ್ಯಾಯಾಧೀಶ ವಿಶ್ವೇಶ ಅವರು ಕಾರ್ಯನಿರ್ವಹಿಸಲಿದ್ದು, ಮೂರು ವರ್ಷಗಳ ಅಧಿಕಾರವಧಿಯಲ್ಲಿ ಅವರು ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ.
ಜನವರಿ 31ರಂದು, ಜ್ಞಾನವಾಪಿ ಮಸೀದಿ ಸಂಕೀರ್ಣದ ಒಳಗೆ ಮುಚ್ಚಿದ ನೆಲಮಾಳಿಗೆ (ವ್ಯಾಸ್ ಜಿ ಕಾ ತೆಹ್ಖಾನಾ)ಯಲ್ಲಿ ಹಿಂದೂಗಳು ಪೂಜಾ ವಿಧಿವಿಧಾನಗಳನ್ನು ನಡೆಸಲು ಅವಕಾಶ ನೀಡಿ ನ್ಯಾಯಾಧೀಶ ವಿಶ್ವೇಶ ಅವರು ಆದೇಶಿಸಿದ್ದರು. ಮುಂದಿನ 7 ದಿನಗಳಲ್ಲಿ ಹಿಂದೂಗಳ ಪೂಜೆಗೆ ಸೂಕ್ತ ವ್ಯವಸ್ಥೆಗಳನ್ನು ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದರು. ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ನೆಲಮಾಳಿಗೆಯಲ್ಲಿ(ತೆಹ್ಖಾನಾ) ಪೂಜೆ ಮಾಡುವ ಹಕ್ಕನ್ನು ಕೋರಿ ಹಿಂದೂಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಈ ಆದೇಶ ನೀಡಲಾಗಿತ್ತು. ಈ ಸ್ಥಳದಲ್ಲಿ ನಡೆಯುತ್ತಿದ್ದ ಪೂಜೆಯನ್ನು 1993 ರಲ್ಲಿ ನಿಲ್ಲಿಸಲಾಯಿತು ಎಂದು ಹೇಳಲಾಗ್ತಿದೆ.
ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತವಾಗಿರುವ ಕಾಲೇಜುಗಳು ಅಥವಾ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಕುಂದುಕೊರತೆಗಳ ಪರಿಹಾರಕ್ಕಾಗಿ ಒಂಬುಡ್ಸ್ಮನ್ಗಳನ್ನು ನೇಮಿಸಬೇಕು ಎಂಬ ಯುಜಿಸಿಯ ಕಡ್ಡಾಯ ನಿಯಮದ ಪ್ರಕಾರ ನಿವೃತ್ತ ನ್ಯಾಯಧೀಶ ವಾರಣಾಸಿ ಎ ಕೆ ವಿಶ್ವೇಶ ಅವರನ್ನು ನೇಮಕ ಮಾಡಲಾಗಿದೆ. ಯುಜಿಸಿ ಸುತ್ತೋಲೆ ಪ್ರಕಾರ, ಲೋಕಪಾಲರು, ನಿವೃತ್ತ ಉಪಕುಲಪತಿಗಳು, ನಿವೃತ್ತ ಪ್ರಾಧ್ಯಾಪಕರು ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ಈ ಹುದ್ದೆಗೆ ನೇಮಿಸಬಹುದು.
ಇದನ್ನೂ ಓದಿ: 1993ರ ಸರಣಿ ಸ್ಫೋಟ ಪ್ರಕರಣ: ಪ್ರಮುಖ ಆರೋಪಿ ಅಬ್ದುಲ್ ಕರೀಮ್ ʼತುಂಡಾʼ ಖುಲಾಸೆ