ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ (ಕೆಎಸ್ಸಿಬಿಸಿ) ಅಧ್ಯಕ್ಷರಾಗಿದ್ದ ಹೆಚ್ ಕಾಂತರಾಜು ತಮ್ಮ ಅವಧಿಯಲ್ಲಿ ನಡೆಸಿರುವ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ(ಜಾತಿ ಗಣತಿ) ವರದಿಯ ಸಲ್ಲಿಕೆ ತಡೆಗೆ ಕೋರಿದ್ದ ಅರ್ಜಿಯ ವಿಚಾರಣೆಯನ್ನು ನಾಳೆ ನಡೆಸುವುದಾಗಿ ಕರ್ನಾಟಕ ಹೈಕೋರ್ಟ್ ಗುರುವಾರ ಹೇಳಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಓದನಹಳ್ಳಿಯ ವಕೀಲ ಓ.ಕೆ.ರಘು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ರಘು ಪರ ವಕೀಲ ಅಭಿಷೇಕ್ ಕುಮಾರ್, ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠದ ಮೆಮೊ ಸಲ್ಲಿಸಿದರು.
ಈ ಹಿನ್ನೆಲೆಯಲ್ಲಿ ನಾಳೆ ಅರ್ಜಿ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿತು. ಮಧ್ಯಂತರ ಅರ್ಜಿಯಲ್ಲಿ ಲೋಕಸಭಾ ಚುನಾವಣೆ ಶೀಘ್ರದಲ್ಲೇ ಘೋಷಣೆ ಆಗಲಿದೆ. ಹೀಗಾಗಿ ಜಯ ಪ್ರಕಾಶ್ ಹೆಗ್ಡೆ ವರದಿ ಮಂಡಿಸಲು ಮುಂದಾಗಿದ್ದಾರೆ. ಇದರ ಹಿಂದೆ ರಾಜಕೀಯ ದುರುದ್ದೇಶ ಇವೆ. ಹಾಗಾಗಿ ವರದಿ ಬಹಿರಂಗವಾಗಲು ಅವಕಾಶ ನೀಡದಂತೆ ನಿರ್ಬಂಧಿಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಂತರಾಜು ಅವರ ನೇತೃತ್ವದ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ವರದಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಆದೇಶಿಸಬೇಕು. ಕರ್ನಾಟಕ ಹಿಂದುಳಿದ ವರ್ಗಗಳ (ತಿದ್ದುಪಡಿ) ಕಾಯಿದೆ 2014ರ ಸೆಕ್ಷನ್ 3ರ ಮೂಲಕ ಸೇರ್ಪಡಿಸಲಾಗಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಾಯಿದೆ 1995ರ ಸೆಕ್ಷನ್ 9(ಐ) ಅನ್ನು ರದ್ದುಪಡಿಸಬೇಕು. ಎಲ್ಲಾ ಸಮುದಾಯಗಳ ಜಾತಿ ಗಣತಿ ನಡೆಸುವಂತೆ 2014ರ ಜನವರಿ 23ರಂದು ಸರ್ಕಾರ ಮಾಡಿರುವ ಆದೇಶ ಅಸಾಂವಿಧಾನಿಕ ಎಂದು ಘೋಷಿಸಬೇಕು. ಸರ್ಕಾರದ ಆದೇಶದ ಅನ್ವಯ ಕಾಂತರಾಜು ಸಮಿತಿ ಮಾಡಿರುವ ಜಾತಿ ಗಣತಿ ಸಮೀಕ್ಷೆಯು ಸ್ವೇಚ್ಛೆಯಿಂದ ಕೂಡಿದ್ದು ಅಸಾಂವಿಧಾನಿಕ ಎಂದು ಆದೇಶಿಸಿಬೇಕು. ಕಾಂತರಾಜು ಸಮಿತಿ ಸಂಗ್ರಹಿಸಿರುವ ದತ್ತಾಂಶ ಆಧರಿಸಿ ಕ್ರಮವಹಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ತಿಳಿಸಿದೆ.
ಇದನ್ನೂ ಓದಿ : ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಸಿದ ಜಯ ಪ್ರಕಾಶ್ ಹೆಗ್ಡೆ