ರಾಜಸ್ಥಾನದ ಅಜ್ಮೀರ್ನ ವಿಶೇಷ ನ್ಯಾಯಾಲಯವು 1993ರಲ್ಲಿ ರೈಲುಗಳಲ್ಲಿ ನಡೆದ ಸರಣಿ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಕರೀಮ್ ‘ತುಂಡಾ’ನನ್ನು ದೋಷಮುಕ್ತಗೊಳಿಸಿದೆ. ಪ್ರಕರಣ ಇತರ ಇಬ್ಬರು ಆರೋಪಿಗಳಾದ ಇರ್ಫಾನ್(70) ಮತ್ತು ಹಮೀದುದ್ದೀನ್ (44)ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ತುಂಡಾ ವಿರುದ್ಧ ಆರೋಪವನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಕಾರಣ ನ್ಯಾಯಾಲಯ ಖುಲಾಸೆಗೊಳಿಸಿದೆ ಎಂದು ವರದಿಗಳು ಹೇಳಿವೆ.
ಬಾಬ್ರಿ ಮಸೀದಿ ಧ್ವಂಸಗೊಂಡ ಒಂದು ವರ್ಷದ ಬಳಿಕ, 1993 ಡಿಸೆಂಬರ್ 5 ಮತ್ತು 6ರಂದು ಲಕ್ನೋ, ಕಾನ್ಪುರ, ಹೈದರಾಬಾದ್, ಸೂರತ್ ಮತ್ತು ಮುಂಬೈ ನಗರಗಳಲ್ಲಿ ಸರಣಿ ಬಾಂಬ್ ಸ್ಪೋಟ ನಡೆದಿತ್ತು.
ಪ್ರಕರಣ ಸಂಬಂಧ ಭೂಗತ ದೊರೆ ದಾವೂದ್ ಇಬ್ರಾಹಿಂನ ಆಪ್ತನಾಗಿರುವ ಅಬ್ದುಲ್ ಕರೀಮ್ ತುಂಡಾ, ಆತನ ಸಹಚರರಾದ ಇರ್ಫಾನ್ ಅಲಿಯಾಸ್ ಪಪ್ಪು, ಹಮಿದುದ್ದೀನ್ ಆರೋಪಿಗಳೆಂದು ಪರಿಗಣಿಸಿದ ನ್ಯಾಯಾಲಯ ವಿಚಾರಣೆ ಆರಂಭಿಸಿತ್ತು. ವಿಚಾರಣೆ ಮುಕ್ತಾಯಗೊಳಿಸಿದ ಅಜ್ಮೀರ್ನ ನ್ಯಾಯಾಲಯ ತುಂಡಾನನ್ನು ದೋಷಮುಕ್ತಗೊಳಿಸಿದೆ.
ಪ್ರಸ್ತುತ 80 ವರ್ಷದ ಕರೀಂ ತುಂಡಾ, ತನ್ನ ಬಾಂಬ್ ತಯಾರಿಕೆಯ ಕೌಶಲ್ಯಕ್ಕಾಗಿ ‘ಡಾ ಬಾಂಬ್’ ಎಂದ ಕುಖ್ಯಾತಿ ಪಡೆದಿದ್ದಾನೆ. ಇಂದು ನ್ಯಾಯಾಲಯಕ್ಕೆ ಗಾಲಿ ಖುರ್ಚಿಯಲ್ಲಿ ಪೊಲೀಸರು ಕರೆ ತಂದಿದ್ದರು. ದೋಷಮುಕ್ತಗೊಂಡ ಬಳಿಕ, ನ್ಯಾಯಾಲಯ ಮತ್ತು ತನ್ನ ವಕೀಲರಿಗೆ ತುಂಡಾ ಧನ್ಯವಾದ ಹೇಳಿದ್ದಾನೆ.
ತುಂಡಾನನ್ನು ಖುಲಾಸೆಗೊಳಿಸಿರುವ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಇರ್ಫಾನ್ ಮತ್ತು ಹಮೀದುದ್ದೀನ್ ಕೂಡ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.
ಕರೀಮ್ ತುಂಡಾ ವಿರುದ್ಧ 40ನೇ ವಯಸ್ಸಿನಲ್ಲಿ ಭಯೋತ್ಪಾದನೆ ಆರೋಪ ಕೇಳಿ ಬಂದಿತ್ತು. ಅದಕ್ಕೂ ಮೊದಲು ಆತ ಬಡಗಿಯಾಗಿ ಕೆಲಸ ಮಾಡುತ್ತಿದ್ದ. 1993ರ ಮುಂಬೈ ಸ್ಫೋಟದ ಆತನ ಹೆಸರು ಎಲ್ಲೆಡೆ ಕುಖ್ಯಾತಿ ಪಡೆಯಿತು. ಬಾಂಬ್ ತಯಾರಿಕೆಯ ವೇಳೆ ನಡೆದ ಸ್ಫೋಟದಲ್ಲಿ ತುಂಡಾ ತನ್ನ ಎಡಗೈಯನ್ನು ಕಳೆದುಕೊಂಡಿದ್ದಾನೆ. ಆತ ಲಷ್ಕರ್-ಎ-ತೊಯ್ಬಾ, ಇಂಡಿಯನ್ ಮುಜಾಹಿದ್ದೀನ್, ಜೈಶ್-ಎ-ಮೊಹಮ್ಮದ್ ಮತ್ತು ಬಬ್ಬರ್ ಖಾಲ್ಸಾ ಸೇರಿದಂತೆ ಅನೇಕ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೆಲಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಚುನಾವಣಾ ಬಾಂಡ್ ಖರೀದಿಸಲು ಆರೆಸ್ಸೆಸ್ನವರು ಎನ್ನಲಾದ ವ್ಯಕ್ತಿಗಳಿಗೆ ರೂ. 2.5 ಕೋಟಿ ನೀಡಿದ್ದ ಮಾಜಿ ನ್ಯಾಯಾಧೀಶರಿಗೆ ವಂಚನೆ