ರಫಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಭಾರತೀಯ ಸೇನಾ ನಿವೃತ್ತ ಅಧಿಕಾರಿ ಕರ್ನಲ್ ವೈಭವ್ ಅನಿಲ್ ಕಾಳೆ ಮೃತಪಟ್ಟಿದ್ದು, ಇಸ್ರೇಲ್ ಗಾಝಾದಲ್ಲಿ ನಡೆಸುತ್ತಿರುವ ಹತ್ಯಾಕಾಂಡಕ್ಕೆ ಮೊದಲ ಬಾರಿಗೆ ಭಾರತೀಯನೋರ್ವ ಬಲಿಯಾಗಿದ್ದಾರೆ.
ವಿಶ್ವಸಂಸ್ಥೆಯ ಸುರಕ್ಷತೆ ಮತ್ತು ಭದ್ರತಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಸೇನೆಯ ನಿವೃತ್ತ ಕರ್ನಲ್ ವೈಭವ್ ಅನಿಲ್ ಕಾಳೆ (46) ಮೃತರು. ಇವರು ವಿಶ್ವಸಂಸ್ಥೆಯ ವಾಹನದಲ್ಲಿ ರಾಫಾದಲ್ಲಿರುವ ಯುರೋಪಿಯನ್ ಆಸ್ಪತ್ರೆಗೆ ಪ್ರಯಾಣಿಸುತ್ತಿದ್ದಾಗ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ಯುನೈಟೆಡ್ ನೇಷನ್ಸ್ ಡಿಪಾರ್ಟ್ಮೆಂಟ್ ಆಫ್ ಸೇಫ್ಟಿ ಅಂಡ್ ಸೆಕ್ಯುರಿಟಿ (ಡಿಎಸ್ಎಸ್) ನ ಸಿಬ್ಬಂದಿ ಸದಸ್ಯರಾಗಿರುವ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಕುಟುಂಬ ಪುಣೆಯಲ್ಲಿ ವಾಸಿಸುತ್ತಿದೆ. ಘಟನೆಯಲ್ಲಿ ಕಾಳೆ ಜತೆಗಿದ್ದ ಮತ್ತೋರ್ವ ಡಿಎಸ್ಎಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.
2022ರಲ್ಲಿ ಸೈನ್ಯದಿಂದ ನಿವೃತ್ತರಾದ ಅನಿಲ್ ಕಾಳೆ ಎರಡು ತಿಂಗಳ ಹಿಂದೆ ಯುಎನ್ಡಿಎಸ್ಎಸ್ಗೆ ಭದ್ರತಾ ಸಮನ್ವಯ ಅಧಿಕಾರಿಯಾಗಿ ಸೇರಿಕೊಂಡಿದ್ದರು ಮತ್ತು ಒಂದು ತಿಂಗಳ ಹಿಂದೆ ಗಾಝಾಗೆ ತೆರಳಿದ್ದರು. ವಿಶ್ವಸಂಸ್ಥೆಯ ವಾಹನದಲ್ಲಿ ನಾಮಫಲಕವಿದ್ದರೂ ದಾಳಿ ನಡೆಸಲಾಗಿದೆ. ಹಮಾಸ್-ಇಸ್ರೇಲ್ ಯುದ್ಧ ಘೋಷಣೆ ಬಳಿಕ ಸಂಭವಿಸಿದ ಜಾಗತಿಕ ಸಂಸ್ಥೆಯ ಮೊಟ್ಟಮೊದಲ ಅಂತರಾಷ್ಟ್ರೀಯ ಯೋಧನ ಸಾವು ಇದಾಗಿದೆ.
ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್, ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಮಾನವೀಯ ಕಾರ್ಯಕರ್ತರನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ.
ಇಸ್ರೇಲ್- ಗಾಝಾ ಮೇಲೆ ಕಳೆದ 8 ತಿಂಗಳಿನಿಂದ ದಾಳಿಯನ್ನು ನಡೆಸುತ್ತಿದ್ದು, ಮೃತರ ಸಂಖ್ಯೆ 35,000 ದಾಟಿದೆ. ಗಾಝಾದಲ್ಲಿ ಹತ್ಯಾಕಾಂಡ ಮುಂದುವರಿಸಿರುವ ಇಸ್ರೇಲ್, ಗಾಝಾದ ನಿರಾಶ್ರಿತರು ಆಶ್ರಯವನ್ನು ಪಡೆದುಕೊಂಡಿರುವ ರಫಾ ಮೇಲೆ ದಾಳಿಯನ್ನು ನಡೆಸುತ್ತಿದೆ. ಗಾಝಾದ ಉತ್ತರ ಪ್ರಾಂತವನ್ನು ಮರಳಿ ವಶಪಡಿಸಿಕೊಳ್ಳುವ ಜೊತೆಗೆ ದಕ್ಷಿಣ ಗಾಝಾದ ರಫಾ ನಗರದ ಮೇಲೆ ಆಕ್ರಮಣ ನಡೆಸುವ ಜಂಟಿ ಕಾರ್ಯಾಚರಣೆಯನ್ನು ಇಸ್ರೇಲ್ ತೀವ್ರಗೊಳಿಸಿದೆ.