ಜೈಪುರ –ಮುಂಬೈ ಎಕ್ಸ್ ಪ್ರೆಸ್ ವೇ ರೈಲಿನಲ್ಲಿ ನಾಲ್ವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಆರ್ ಪಿಎಫ್ ಪೇದೆ ಅದೇ ರೈಲಿನಲ್ಲಿ ಬುರ್ಖಾಧಾರಿ ಮಹಿಳೆಗೆ “ಜೈ ಮಾತಾ ದಿ” ಎಂದು ಘೋಷಣೆ ಕೂಗುವಂತೆ ಆಗ್ರಹಿಸಿದ್ದಾನೆ ಎಂದು ತನಿಖೆಯ ವೇಳೆ ಬಯಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಪ್ರಕರಣದ ಕುರಿತು ತನಿಖೆ ನಡೆಸುವ ಬೊರಿವಲಿ ರೈಲ್ವೇ ಪೊಲೀಸರು, ಸಂತ್ರಸ್ತ ಮಹಿಳೆಯನ್ನು ಗುರುತಿಸಿದ್ದಾರೆ. ಮತ್ತು ಮಹಿಳೆಯಿಂದ ಹೇಳಿಕೆಯನ್ನು ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ಮಹಿಳೆಯನ್ನು ನಿರ್ಣಾಯಕ ಸಾಕ್ಷಿಯನ್ನಾಗಿ ಮಾಡಲಾಗಿದೆ. ವರದಿಗಳ ಪ್ರಕಾರ, ರೈಲಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದೆ.
ಹತ್ಯೆ ಆರೋಪಿ ಚೌಧರಿ ಮೊದಲು B-3 ಕೋಚ್ ನಲ್ಲಿ ಬುರ್ಖಾ ಧರಿಸಿದ್ದ ಪ್ರಯಾಣಿಕ ಮಹಿಳೆಯನ್ನು ಗುರಿಯಾಗಿಸಿಕೊಂಡಿದ್ದ ಮತ್ತು ಗನ್ ನ್ನು ತೋರಿಸಿ ಎರಡೆರಡು ಬಾರಿ “ಜೈ ಮಾತಾ ದಿ” ಎಂದು ಕೂಗುವಂತೆ ಒತ್ತಾಯಿಸಿದ್ದಾನೆ ಎಂದು ತನಿಖೆಯ ವೇಳೆ ಬಹಿರಂಗವಾಗಿದೆ.
ಸಹಾಯಕ ಸಬ್ ಇನ್ಸ್ಪೆಕ್ಟರ್ ಟಿಕಾರಾಂ ಮೀನಾ ಮತ್ತು ಮೂವರು ಪ್ರಯಾಣಿಕರಾದ ಅಬ್ದುಲ್ ಕಾದರ್ ಮೊಹಮ್ಮದ್ ಹುಸೇನ್ ಭಾನ್ಪುರವಾಲಾ, ಸೈಯದ್ ಸೈಫುದ್ದೀನ್ ಮತ್ತು ಅಸ್ಗರ್ ಅಬ್ಬಾಸ್ ಶೇಖ್ ಅವರನ್ನು ಹತ್ಯೆ ಮಾಡಿದ ಪೇದೆ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದಲ್ಲದೆ ಪ್ರಕರಣದ ಬಳಿಕ ಆರೋಪಿ ಚೌದರಿಯ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಆರೋಪಿಗೆ ಯಾವುದೇ ಮಾನಸಿಕ ಅಸ್ವಸ್ಥತೆ ಇಲ್ಲ ಎನ್ನುವುದನ್ನು ದೃಢಪಡಿಸಿದ್ದಾರೆ.
ಇದನ್ನು ಓದಿ: ಮಣಿಪುರ, ಹರಿಯಾಣದಂತೆ ದೇಶದೆಲ್ಲೆಡೆ ಸಂಘರ್ಷ ಮುಂದುವರಿದರೆ ಭಾರತ ಹೇಗೆ ವಿಶ್ವಗುರುವಾಗುತ್ತದೆ?: ಕೇಜ್ರಿವಾಲ್