ಹರ್ಯಾಣ ಬಿಜೆಪಿ ಸರ್ಕಾರದ ರಾಜ್ಯ ಸಚಿವ ಮತ್ತು ಭಾರತ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಮಹಿಳಾ ಜೂನಿಯರ್ ಅಥ್ಲೆಟಿಕ್ ಕೋಚ್ ನ್ನು ಹರಿಯಾಣ ಕ್ರೀಡಾ ಇಲಾಖೆ ಅಮಾನತುಗೊಳಿಸಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಮಹಿಳಾ ಕೋಚ್, ಸಚಿವ ಸಂದೀಪ್ ಸಿಂಗ್ ವಿರುದ್ಧ ಕೇಂದ್ರಾಡಳಿತ ಪ್ರದೇಶ ಚಂಡೀಗಢದಲ್ಲಿ ಡಿಸೆಂಬರ್ 2022ರಲ್ಲಿಎಫ್ ಐಆರ್ ದಾಖಲಿಸಿದ್ದರು.
ಕೋಚ್ ಅಮಾನತು ಆದೇಶಕ್ಕೆ ಕಾರಣಗಳನ್ನು ಕ್ರೀಡಾ ಇಲಾಖೆ ಬಹಿರಂಗಪಡಿಸಿಲ್ಲ. ಆದರೆ ದೂರು ನೀಡಿದ ಕೋಚ್ ಪ್ರಕರಣದ ಒಪ್ಪಂದವನ್ನು ಮಾಡಿಕೊಳ್ಳಲು ಮತ್ತು ಪ್ರಕರಣವನ್ನು ಇತ್ಯರ್ಥಗೊಳಿಸಲು ನಿರಾಕರಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಪಂಚಕುಲದಲ್ಲಿನ ಜಿಲ್ಲಾ ಕ್ರೀಡಾ ಅಧಿಕಾರಿ ಕಚೇರಿಯಲ್ಲಿ ಫೊಸ್ಟಿಂಗ್ ನಲ್ಲಿದ್ದ ಜೂನಿಯರ್ ಅಥ್ಲೆಟಿಕ್ ಕೋಚ್ ನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಆಗಸ್ಟ್ 11ರ ಆದೇಶದಲ್ಲಿ ಕ್ರೀಡಾ ಇಲಾಖೆಯ ನಿರ್ದೇಶಕ ಯಶೇಂದ್ರ ಸಿಂಗ್ ತಿಳಿಸಿದ್ದಾರೆ.
ಸಚಿವರ ವಿರುದ್ಧ ಎಫ್ಐಆರ್ ದಾಖಲಿಸಿದ ಏಳು ತಿಂಗಳ ನಂತರ ಕ್ರೀಡಾ ಇಲಾಖೆ ಈ ಕ್ರಮ ಕೈಗೊಳ್ಳಲು ಕಾರಣ ಏನು ಎಂದು ತಿಳಿಯಲು ಸಿಂಗ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಪ್ರತಿಕ್ರಿಯೆಗೆ ಅವರು ಲಭ್ಯವಾಗಿಲ್ಲ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅಮಾನತಾದ ಮಹಿಳಾ ಕೋಚ್, ಹೌದು, ನನ್ನನ್ನು ಅಮಾನತುಗೊಳಿಸಲಾಗಿದೆ. ರಾಜಿ ಮಾಡಿಕೊಳ್ಳಲು ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ನನ್ನ ಅಮಾನತಿಗೆ ಕಾರಣಗಳನ್ನು ನನಗೆ ತಿಳಿಸಲಾಗಿಲ್ಲ. ಅವರು ಈ ಕ್ರಮವನ್ನು ಏಕೆ ತೆಗೆದುಕೊಂಡಿದ್ದಾರೆಂದು ನನಗೆ ತಿಳಿದಿಲ್ಲ. ಇದು ಸರ್ಕಾರವು ನನ್ನ ಮೇಲೆ ಒತ್ತಡ ಹೇರಲು ಬಳಸಿದ ಇನ್ನೊಂದು ಮಾರ್ಗವಾಗಿದೆ, ಆದರೆ ನಾನು ಮಣಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಮಣಿಪುರ ಹಿಂಸಾಚಾರ: ಗವರ್ನರ್ ಸಲಹೆಯನ್ನು ಸರಕಾರ ಪರಿಗಣಿಸಿಲ್ಲ: ಬೃಂದಾ ಕಾರಟ್