ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಂಗಸಂಸ್ಥೆಯಾದ ಭಾರತೀಯ ಕಿಸಾನ್ ಸಂಘ (ಬಿಕೆಎಸ್) ಸೋಮವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ರೈತರ ರ್ಯಾಲಿಯನ್ನು ನಡೆಸಿದೆ.
ಭಾರತದ ರೈತರ ಪ್ರಸ್ತುತ ಸ್ಥಿತಿಗತಿಯ ವಿರುದ್ಧ ಬಿಕೆಎಸ್ ಬೇಸರ ವ್ಯಕ್ತಪಡಿಸಿದೆ. ಸರ್ಕಾರದ ಮುಂದೆ ಹಲವಾರು ಬೇಡಿಕೆಗಳನ್ನು ಇಟ್ಟಿದೆ. ಬಿಕೆಎಸ್ ಇದನ್ನು ‘ಕಿಸಾನ್ ಗರ್ಜನ ರ್ಯಾಲಿ’ ಎಂದು ಕರೆದಿದೆ.
‘‘ಸರ್ಕಾರವು ರೈತರ ಬೇಡಿಕೆಗೆ ಸಕಾಲದಲ್ಲಿ ಕಿವಿಗೊಡದಿದ್ದರೆ ತೊಂದರೆ ಎದುರಿಸಬೇಕಾಗುತ್ತದೆ” ಎಂದು ಬಿಕೆಎಸ್ ಹೊರಡಿಸಿದ ಕರಪತ್ರದಲ್ಲಿ ತಿಳಿಸಲಾಗಿದೆ.
ಭಾರತದ ಮೂಲೆಮೂಲೆಗಳಿಂದ ಸುಮಾರು 60,000 ರೈತರು ರಾಮಲೀಲಾ ಮೈದಾನದಲ್ಲಿ ಸೇರಿದ್ದಾಗಿ ಬಿಕೆಎಸ್ ತಿಳಿಸಿದೆ. ತಮ್ಮ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡುವಂತೆ ಒತ್ತಾಯಿಸುವುದಕ್ಕಾಗಿ ರೈತರು ಪ್ರತಿಭಟಿಸುತ್ತಿದ್ದಾರೆ ಎಂದು ಬಿಕೆಎಸ್ ತಿಳಿಸಿದೆ.
ಬಿಕೆಎಸ್ ಏಕೆ ಪ್ರತಿಭಟನೆ ನಡೆಸುತ್ತಿದೆ?
ಭಾರತೀಯ ಕಿಸಾನ್ ಸಂಘವು (ಬಿಕೆಸ್) ಆರ್ಎಸ್ಎಸ್ನ ಅಂಗಸಂಸ್ಥೆಯಾಗಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಬಿಕೆಎಸ್ ಕೆಲವೊಮ್ಮೆ ಪ್ರತಿಭಟಿಸಿದ ಉದಾಹರಣೆಗಳಿವೆ. ಆ ಮೂಲಕ ರೈತರನ್ನು ತನ್ನ ತೆಕ್ಕೆಯಲ್ಲಿ ಹಿಡಿದುಕೊಳ್ಳುವ ತಂತ್ರವನ್ನು ಆರ್ಎಸ್ಎಸ್ ರೂಪಿಸುತ್ತದೆ ಎಂಬ ವಾದವಿದೆ.
ಸೋಮವಾರ ನಡೆದ ರ್ಯಾಲಿಯಲ್ಲಿ ‘ಕೃಷಿ ಉಪಕರಣಗಳ ಮೇಲಿನ ಜಿಎಸ್ಟಿ ತೆರವು, ರೈತರಿಗೆ ಆರ್ಥಿಕ ನೆರವು ಹೆಚ್ಚಳ, ಕುಲಾಂತರಿ ಸಾಸುವೆ ನಿರಾಕರಣೆ, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ, ಸೂಕ್ತವಾದ ರಫ್ತು ನೀತಿ ಜಾರಿ’ಗಾಗಿ ಬಿಕೆಎಸ್ ಒತ್ತಾಯಿಸಿದೆ.
“ಕೃಷಿ ಉಪಕರಣಗಳು ಮತ್ತು ರಸಗೊಬ್ಬರಗಳ ಮೇಲಿನ ಶೇ.18ರಷ್ಟು ಜಿಎಸ್ಟಿಯಿಂದಾಗಿ ಕೃಷಿ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. ಹೀಗಿದ್ದರೂ ರೈತರಿಗೆ ಅರ್ಹವಾದ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ. ಹೀಗಾಗಿ ಈ ಜಿಎಸ್ಟಿ ತೆರವು ಮಾಡುವುದು ಅನಿವಾರ್ಯವಾಗಿದೆ” ಎಂದು ಬಿಕೆಎಸ್ ಪ್ರಧಾನ ಕಾರ್ಯದರ್ಶಿ ಮೋಹಿನಿ ಮೋಹನ್ ಮಿಶ್ರಾ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.
ಕಳೆದ ವಾರ ಬಿಕೆಎಸ್ನ ಕಾರ್ಯಕಾರಿ ಸಮಿತಿ ಸದಸ್ಯ ನಾನಾ ಆಖ್ರೆ ಅವರು ಮಾತನಾಡಿ, “ತಮ್ಮ ಕೃಷಿ ಉತ್ಪನ್ನಗಳ ಆದಾಯದ ಕೊರತೆಯಿಂದಾಗಿ ರೈತರು ಇಂದು ಅತ್ಯಂತ ನಿರಾಶೆಗೊಂಡಿದ್ದಾರೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ” ಎಂದಿದ್ದರು.
“ರೈತರ ಸಂಕಷ್ಟಗಳನ್ನು ಪರಿಹರಿಸುವ ಸಲುವಾಗಿ, ಎಲ್ಲಾ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ನೀಡಬೇಕೆಂದು ಬಿಕೆಎಸ್ ಒತ್ತಾಯಿಸುತ್ತದೆ. ಅಲ್ಲದೆ, ಕೃಷಿ ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಬಾರದು. ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಒದಗಿಸಲಾದ ಆರ್ಥಿಕ ಪರಿಹಾರವನ್ನು ಹೆಚ್ಚಿಸಬೇಕು” ಎಂದು ಒತ್ತಾಯಿಸಿದ್ದರು.