ಪತಂಜಲಿ ಸಂಸ್ಥೆಯ ಬಾಬಾ ರಾಮ್ದೇವ್ ಅವರ ಅಶ್ಲೀಲ ಪೋಸ್ಟರ್ಗಳನ್ನು ಮಾಡಿದ ಆರೋಪದ ಮೇಲೆ ಡೆಹ್ರಾಡೂನ್ ಮೂಲದ ಇಬ್ಬರು ವ್ಯಂಗ್ಯಚಿತ್ರಕಾರರ ವಿರುದ್ಧ ಉತ್ತರಾಖಂಡ ಪೊಲೀಸರು ಮಂಗಳವಾರ ಎಫ್ಐಆರ್ ದಾಖಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ವ್ಯಂಗ್ಯಚಿತ್ರಕಾರರಾದ ಗಜೇಂದ್ರ ರಾವತ್ ಮತ್ತು ಹೇಮಂತ್ ಮಾಳವಿಯಾ ವಿರುದ್ಧ ಪತಂಜಲಿ ಯೋಗಪೀಠದ ಕಾನೂನು ಕೋಶದಿಂದ ದೂರು ದಾಖಲಿಸಿದ ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಕಂಖಾಲ್ ಪೊಲೀಸ್ ಠಾಣೆಯ ಉಸ್ತುವಾರಿ ಮುಖೇಶ್ ಚೌಹಾಣ್ ಹೇಳಿದ್ದಾರೆ.
ಪತಂಜಲಿ ಯೋಗಪೀಠ ತನ್ನ ದೂರಿನಲ್ಲಿ, “ಈ ಇಬ್ಬರು ವ್ಯಂಗ್ಯಚಿತ್ರಕಾರರು ಯೋಗ ಗುರುವಿನ ಪ್ರತಿಷ್ಠೆಯನ್ನು ಹಾಳುಮಾಡುವ ಪೋಸ್ಟರ್ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ” ಎಂದು ಆರೋಪಿಸಿದೆ. “ಇಬ್ಬರು ಕಲಾವಿದರನ್ನು ಬಂಧಿಸಲಾಗಿಲ್ಲ, ಪೊಲೀಸರು ಇನ್ನೂ ಅವರನ್ನು ಹುಡುಕುತ್ತಿದ್ದಾರೆ” ಎಂದು ಪಿಟಿಐ ವರದಿ ಮಾಡಿದೆ.
ರಾವತ್ ಮತ್ತು ಮಾಳವಿಯಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಹಿಳೆಯ ವಸ್ತ್ರದ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದ ರಾಮದೇವ್
“ಮಹಿಳೆಯರು ಏನನ್ನೂ ಧರಿಸದಿದ್ದರೂ ಚೆನ್ನಾಗಿ ಕಾಣುತ್ತಾರೆ” ಎಂದು ಪತಂಜಲಿ ಸಂಸ್ಥೆಯ ಬಾಬಾ ರಾಮದೇವ್ ಇತ್ತೀಚೆಗೆ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
“ಮಹಿಳೆಯರು ಸೀರೆಯಲ್ಲಿ, ಸಲ್ವಾರ್ ಸೂಟ್ಗಳಲ್ಲಿ ಮತ್ತು ಏನೂ ಧರಿಸದಿದ್ದರೂ ಚೆನ್ನಾಗಿ ಕಾಣುತ್ತಾರೆ” ಎಂದು ರಾಮದೇವ್ ಹೇಳಿದ್ದು, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಈ ಹೇಳಿಕೆಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದರು.
ಥಾಣೆಯಲ್ಲಿ ನಡೆದ ಯೋಗ ಶಿಬಿರದಲ್ಲಿ ಮಾತನಾಡಿದ್ದ ರಾಮ್ದೇವ್ ಅವರು, “ಸೀರೆ, ಸಲ್ವಾರ್ ಸೂಟ್ಗಳಲ್ಲಿ ಮತ್ತು ಏನನ್ನೂ ಧರಿಸದಿದ್ದರೂ ಮಹಿಳೆಯರು ಚೆನ್ನಾಗಿ ಕಾಣುತ್ತಾರೆ” ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು.
ಈ ಶಿಬಿರದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನಾವೀಸ್ ಉಪಸ್ಥಿತರಿದ್ದರು. ರಾಮ್ದೇವ್ ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಈ ವಿಡಿಯೋವನ್ನು ಶೇರ್ ಮಾಡಿಕೊಂಡು, ಬಾಬಾ ರಾಮದೇವ್ ಹೇಳಿಕೆಯನ್ನು ಖಂಡಿಸಿದ್ದರು.
“ಮಹಾರಾಷ್ಟ್ರದ ಉಪಮುಖ್ಯಮಂತ್ರಿಯವರ ಪತ್ನಿಯ ಮುಂದೆ ಸ್ವಾಮಿ ರಾಮ್ದೇವ್ ಅವರು ಮಹಿಳೆಯರ ಬಗ್ಗೆ ನೀಡಿದ ಹೇಳಿಕೆಗಳು ಅಸಭ್ಯ ಮತ್ತು ಖಂಡನೀಯ. ಈ ಹೇಳಿಕೆಯಿಂದ ಎಲ್ಲಾ ಮಹಿಳೆಯರಿಗೆ ನೋವಾಗಿದೆ, ಬಾಬಾ ರಾಮದೇವ್ ಅವರು ದೇಶದ ಎದುರು ಕ್ಷಮೆಯಾಚಿಸಬೇಕು” ಎಂದು ಅವರು ಟ್ವೀಟ್ ಮಾಡಿದ್ದರು.
ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಸಂಸದ ಶ್ರೀಕಾಂತ್ ಶಿಂಧೆ ಕೂಡ ಉಪಸ್ಥಿತರಿದ್ದರು.
ವಿವಾದದ ಬಳಿಕ ರಾಮದೇವ್ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಮುಂದೆ ಔಪಚಾರಿಕವಾಗಿ ಕ್ಷಮೆಯಾಚಿಸಿದ್ದರು. ತಮ್ಮ ಮಾತುಗಳನ್ನು ಸಂದರ್ಭಕ್ಕೆ ತಕ್ಕಂತೆ ತಿರುಚಲಾಗಿದೆ ಎಂದೂ ಹೇಳಿದ್ದರು.