ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮನುವಾದಿ ಕಾರ್ಯಸೂಚಿಗೆ ಸಾರ್ವಜನಿಕ ಬೆಂಬಲವಿದೆಯೇ ಎಂದು ಪರೀಕ್ಷಿಸಲು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೇರ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸವಾಲು ಹಾಕಿದ್ದಾರೆ.
ನಾಗ್ಪುರದ ರೇಶಿಂಬಾಗ್ ಮೈದಾನದಲ್ಲಿ ಭೀಮ್ ಆರ್ಮಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಆಜಾದ್, ಹೊಸ ಪೌರತ್ವ ಕಾನೂನು (ಸಿಎಎ), ನಾಗರಿಕರ ರಾಷ್ಟ್ರೀಯ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಆರ್ಎಸ್ಎಸ್ನ “ಹಿಡನ್ ಅಜೆಂಡಾಗಳಾಗಿವೆ” ಎಂದು ಆರೋಪಿಸಿದ್ದಾರೆ.
“ನಾನು ಆರ್ಎಸ್ಎಸ್ ಮುಖ್ಯಸ್ಥರಿಗೆ ಸಲಹೆಯನ್ನು ನೀಡಲು ಬಯಸುತ್ತೇನೆ … ಸುಳ್ಳಿನ ಮುಸುಕನ್ನು ತೆಗೆದು ನಿಮ್ಮ ಕಾರ್ಯಸೂಚಿಯೊಂದಿಗೆ ನೇರ ಚುನಾವಣೆಗಳಲ್ಲಿ ಸ್ಪರ್ಧಿಸಿ. ಇದು ಪ್ರಜಾಪ್ರಭುತ್ವ .. ಆಗ ಈ ದೇಶ ನಡೆಯುತ್ತಿರುವುದು ನಿಮ್ಮ ಮನುಸ್ಮೃತಿಯಿಂದಲೋ ಅಥವಾ ಸಂವಿಧಾನದಿಂದಲೋ ಎಂದು ಜನರು ತಿಳಿಸುತ್ತಾರೆ ಎಂದು ಆಜಾದ್ ಹೇಳಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗೆ ಹೆದರಿ ಸ್ಥಳೀಯ ಪೊಲೀಸರು ಅನುಮತಿಯನ್ನು ನಿರಾಕರಿಸಿದ ನಂತರ, ಬಾಂಬೆ ಹೈಕೋರ್ಟ್ನ ನಾಗ್ಪುರ ನ್ಯಾಯಪೀಠವು ಭೀಮ್ ಆರ್ಮಿಯು ತನ್ನ ಕಾರ್ಯಕರ್ತರ ಸಭೆಯನ್ನು ರೇಶಿಂಬಾಗ್ ಮೈದಾನದಲ್ಲಿ ನಡೆಸಲು ಅನುಮತಿ ನೀಡಿತು.
ನಾಗ್ಪುರ ಪೊಲೀಸರ ವಾದವನ್ನು ಉಲ್ಲೇಖಿಸಿದ ಆಜಾದ್, ಎರಡು ಸಿದ್ಧಾಂತಗಳು ಯಾವಾಗಲೂ ಘರ್ಷಣೆಗೆ ಒಳಗಾಗುತ್ತವೆ. ನಾವು ಸಂವಿಧಾನವನ್ನು ನಂಬುವಾಗ, ಅವರು ಮನುಸ್ಮೃತಿಯನ್ನು ನಂಬುತ್ತಾರೆ. ಈ ದೇಶವು ಸಂವಿಧಾನದ ಮೇಲೆ ಮಾತ್ರ ನಡೆಯುತ್ತದೆ ಮತ್ತು ಬೇರೆ ಯಾವುದೇ ಸಿದ್ಧಾಂತದ ಮೇಲೆ ಅಲ್ಲ. ಈ ದೇಶದಲ್ಲಿ ಆರ್ಎಸ್ಎಸ್ ಮೇಲೆ ನಿಷೇಧ ಹೇರಿದರೆ ಮಾತ್ರ ಮನುವಾದ ಕೊನೆಗೊಳ್ಳುತ್ತದೆ ಎಂದಿದ್ದಾರೆ.
ಆರ್ಎಸ್ಎಸ್ ಬಿಜೆಪಿಯನ್ನು ನಡೆಸುತ್ತಿರುವುದರಿಂದ ಪ್ರಧಾನ ಮಂತ್ರಿಗಳು ಸಂಘದ ಮುಖ್ಯಸ್ಥರನ್ನು ಭೇಟಿಯಾಗಿ ಕೈಮುಗಿದು ತಮ್ಮ ಕಾರ್ಯಕ್ರಮಗಳನ್ನು ವಿವರಿಸುತ್ತಾರೆ ಎಂದು ಅವರು ಹೇಳಿದರು.
“ಅವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ ಆದರೆ ಮನುಸ್ಮೃತಿಯ ಕಾರ್ಯಸೂಚಿಯನ್ನು ಜಾರಿಗೊಳಿಸುತ್ತಾರೆ” ಎಂದ ಅವರು, ಆರ್ಎಸ್ಎಸ್ ಹಿಂಬಾಗಿಲ ಮೂಲಕ ಮೀಸಲಾತಿ ವ್ಯವಸ್ಥೆಯನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
“ನಮ್ಮ ಜನರು ಸರ್ಕಾರಿ ಉದ್ಯೋಗಗಳಲ್ಲಿ ಇನ್ನೂ ಪ್ರಮುಖ ಹುದ್ದೆಗಳನ್ನು ಪಡೆಯಬೇಕಿದೆ. ಒಂದು ದಿನ, ನಮ್ಮ ಪ್ರಧಾನಿ ಮತ್ತು ಇತರ ರಾಜ್ಯಗಳಲ್ಲಿ ಸರ್ಕಾರಗಳನ್ನು ನಾವು ರಚಿಸುತ್ತೇವೆ. ಆಗ ನಾವು ನಿಮಗೆ ಮೀಸಲಾತಿ ನೀಡುತ್ತೇವೆ. ಸಮಾಜದ ಇತರ ವರ್ಗಗಳಿಗೂ ಸಹ ಮೀಸಲಾತಿ ನೀಡುತ್ತೇವೆ “ನಾವು ನೀಡುವವರಾಗುತ್ತೇವೆಯೇ ಹೊರತು ತೆಗೆದುಕೊಳ್ಳುವವರಲ್ಲ” ಎಂದು ಆಜಾದ್ ಹೇಳಿದರು.
ಮೀಸಲಾತಿ ವ್ಯವಸ್ಥೆ ಕುರಿತು ಚರ್ಚೆ ನಡೆಸಲು ಆರ್ಎಸ್ಎಸ್ ಮುಖ್ಯಸ್ಥರಿಗೆ ಸವಾಲು ಕೂಡ ಹಾಕಿದ್ದಾರೆ. ಅಲ್ಲದೇ “ಜನರ ಹಿತದೃಷ್ಟಿಯಿಂದ” ರಾಜ್ಯದಲ್ಲಿ ಎನ್ಪಿಆರ್ಗೆ ಅವಕಾಶ ನೀಡದಂತೆ ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಆಜಾದ್ ಮನವಿ ಮಾಡಿದರು.