Homeಮುಖಪುಟಗ್ರಾಮೀಣ ಭಾರತಕ್ಕೆ ಬೇಕಿದೆ ಹೊಸ ’ಎಂಎಸ್‌ಪಿ’ - ’ಗರಿಷ್ಠ ಬೆಂಬಲ ನೀತಿ’

ಗ್ರಾಮೀಣ ಭಾರತಕ್ಕೆ ಬೇಕಿದೆ ಹೊಸ ’ಎಂಎಸ್‌ಪಿ’ – ’ಗರಿಷ್ಠ ಬೆಂಬಲ ನೀತಿ’

- Advertisement -
- Advertisement -

ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡಿರುವುದು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ಹೊಂದಾಣಿಕೆತನ, ಕಟಿಬದ್ಧತೆ ಮತ್ತು ಪ್ರಾಮಾಣಿಕತೆ ಯಶಸ್ಸು ಸಾಧಿಸಿರುವುದು ಒಂದು ಚಾರಿತ್ರಿಕ ವಿದ್ಯಮಾನವೇ ಸರಿ. ಈ ಆರಂಭಿಕ, ಗಮನಾರ್ಹ ಗೆಲುವು ಮುಂದೆ ಹೇಗೆ ಪೂರ್ಣ ರೂಪದಲ್ಲಿ ತೆರೆದುಕೊಳ್ಳುತ್ತದೆ ಹಾಗೂ ಅದು ಕೃಷಿ ನೀತಿಗಳ ಮೇಲೆ ಮಾತ್ರವಲ್ಲದೆ ಪ್ರಜಾತಂತ್ರ ಮತ್ತು ಬಂಡವಾಳವಾದಗಳ ನಡುವಿನ ಜಿದ್ದಾಜಿದ್ದಿನ ಸಂಘರ್ಷದ ಮೇಲೆ ಕೂಡ ಏನು ಪ್ರಭಾವ ಉಂಟುಮಾಡುತ್ತದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಇದು, ಈ ಚಳವಳಿಯು ಮೂರು ಕೃಷಿ ಕಾಯ್ದೆಗಳ ಬದಲು ಏನನ್ನು ಡಿಮ್ಯಾಂಡ್ ಮಾಡುತ್ತದೆ ಎಂಬುದನ್ನು ಅವಲಂಬಿಸಿದೆ. ಬಹುಮುಖ್ಯ ಕೃಷಿ ಉತ್ಪನ್ನಗಳಿಗೆ ’ಕನಿಷ್ಠ ಬೆಂಬಲ ಬೆಲೆ’(ಎಂಎಸ್‌ಪಿ)ಯ ಬೇಡಿಕೆಯು ಚಳವಳಿ ಮತ್ತು ಸರ್ಕಾರದ ನಡುವಿನ ’ಮಾತುಕತೆ’ಗಳ ಉದ್ದಕ್ಕೂ ಬಗೆಹರಿಯದೆ ಉಳಿದಿದ್ದ ಒಂದು ಕಗ್ಗಂಟು ಆಗಿತ್ತು; ಎಂಎಸ್‌ಪಿಯನ್ನು ಕಾಯ್ದೆಬದ್ಧಗೊಳಿಸಬೇಕು, ಇನ್ನೂ ವಿಸ್ತರಿಸಬೇಕು ಹಾಗೂ ಹೆಚ್ಚು ಮಾಡಬೇಕು ಎಂದು ಚಳವಳಿಯ ನಾಯಕರು ಆಗ್ರಹಿಸುತ್ತಾ ಬಂದರೆ, ಸರ್ಕಾರವು ಇಂಥ ಯಾವುದೇ ಕೇಳಿಕೆಯನ್ನು ಸಾರಾಸಗಟು ತಳ್ಳಿಹಾಕಿತ್ತು. ಎಂಎಸ್‌ಪಿ ವಿಚಾರವು ಪ್ರಧಾನವಾಗಿ ವೆಚ್ಚಕ್ಕನುಗುಣವಾಗಿ ಬೆಲೆ ನಿರ್ಧರಿಸುವುದಕ್ಕೆ ಸಂಬಂಧಿಸಿದ್ದು; ಒಂದು ಉದ್ಯಮ, ವಹಿವಾಟು ಅಥವಾ ಜೀವನೋಪಾಯವಾಗಿ ಕೃಷಿಯ ಮೌಲ್ಯಮಾಪನಕ್ಕೆ ಇದೇ ಆಧಾರವಾಗಿರಬೇಕಾದುದು ಸೂಕ್ತವಾದದ್ದು. ಜೊತೆಗೆ ಅದರಾಚೆಗೂ ಯೋಚಿಸುವುದು ಅಗತ್ಯವಿದೆ.

ಬಹುತೇಕ ಗ್ರಾಮೀಣ ಭಾರತವು ಪರಸ್ಪರ ವೈರುಧ್ಯಗಳಿಂದ ಕೂಡಿದ ಕೃಷಿ ನೀತಿಗಳ ಕಹಿ ಫಲವನ್ನು ಅನುಭವಿಸುತ್ತಾ ಬಂದಿದ್ದು, ಗ್ರಾಮೀಣವನ್ನು ಆರ್ಥಿಕವಾಗಿ ಬಹುಪಾಲು ಕಡೆಗಣಿಸಿ ರಾಜಕೀಯವಾಗಿ ಓಟಿಗೋಸ್ಕರ ಮಾತ್ರ ಬೇಕಾದಂತೆ ಬಳಸಿಕೊಳ್ಳಲಾಗಿದೆ. ಆದ್ದರಿಂದ ’ಗರಿಷ್ಠ ಬೆಂಬಲ ನೀತಿ’ಯ ಪ್ಯಾಕೇಜನ್ನು ಕೇಳಲು ಇದೀಗ ಸಕಾಲವಾಗಿದೆ. ಅದೇ ಹೊತ್ತಿನಲ್ಲಿ, ಒಟ್ಟಾರೆ ರಾಜಕೀಯಾರ್ಥಿಕ ನೀತಿಗಳು ಗ್ರಾಮೀಣ ಭಾರತದ ಮೇಲೆ ಹೇರಿರುವ ಬಹುಬಗೆಯ ಕಾಯಿಲೆಗಳಿಗೆಲ್ಲ ಕೃಷಿ ಉತ್ಪನ್ನಗಳ ಬೆಲೆ ನಿಗದಿ, ಮಾರಾಟ ಮತ್ತು ವಿತರಣೆ ಎನ್ನುವುದು ಸಿದ್ಧೌಷಧವಾಗಲು ಸಾಧ್ಯವಿಲ್ಲ ಎಂಬ ಗ್ರಹಿಕೆಯ ಜೊತೆಗೇ ಇದು ಮೂಡಿಬರಬೇಕಿದೆ. ವ್ಯವಸ್ಥೆಯೊಳಗೆ ಅಂತರ್ಗತವಾಗಿರುವ ಅಸಮಾನತೆಗಳು, ಸಾಂಸ್ಥಿಕ ಮತ್ತು ಆಡಳಿತಾತ್ಮಕ ಕೊರತೆಗಳು ಹಾಗೂ ಗ್ರಾಮೀಣ ಭಾರತವನ್ನು ರಾಜಕೀಯವಾಗಿ ವಿರೂಪಗೊಳಿಸಿರುವ ನೀತಿಗಳು-ನಡೆಗಳು – ಇವೆಲ್ಲವನ್ನೂ ಸಮಗ್ರವಾಗಿ, ಸರ್ವಾಂಗೀಣವಾಗಿ ಅಡ್ರೆಸ್ ಮಾಡುವಂಥ ನೀತಿಗಳು ಮಾತ್ರವೇ ಗ್ರಾಮೀಣ ಭಾರತಕ್ಕೊಂದು ಹೊಸ ಜೀವದಾನ ನೀಡಬಲ್ಲ ಉತ್ತರವಾಗಲು ಸಾಧ್ಯ.

ಮೊದಲಿಗೆ, ಸಬ್ಸಿಡಿ ಆಧಾರಿತವಾಗಿ ಕೈಗಾರಿಕಾ-ರಾಸಾಯನಿಕ ಕೃಷಿಯನ್ನು ಉತ್ತೇಜಿಸುವ ’’ಹಸಿರು ಕ್ರಾಂತಿ’ಯ ಒಟ್ಟಾರೆ ಮಾದರಿಯಿಂದ ಹಂತಹಂತವಾಗಿ, ಆದರೆ ಸಾಕಷ್ಟು ಪ್ರಮಾಣದಲ್ಲಿ ಹಿಂದೆ ಸರಿಯುವುದು ಆಗಬೇಕು. ಆದರೆ, ’ಸುಸ್ಥಿರ’ ಕೃಷಿಗೆ ಪಲ್ಲಟಗೊಳ್ಳುವ ಮಾತು ಅಥವಾ ಪ್ರಯತ್ನವು ಪ್ರಧಾನಿಯವರು (ತನ್ನ ಭಾಷಣದಲ್ಲಿ) ಪ್ರಸ್ತಾಪಿಸಿದ ’ಝೀರೋ ಬಜೆಟ್ ಸಹಜ ಕೃಷಿ’ಯ ಮೂಲಕ ಆಗಲು ಸಾಧ್ಯವಾ ಎಂಬ ಬಗ್ಗೆ ಜಾಗರೂಕವಾಗಿ ಆಲೋಚಿಸಬೇಕು. ಭಾರತದ ಕೃಷಿ-ವಾತಾವರಣ-ಸಂಸ್ಕೃತಿಯ ವಲಯ(ಜ಼ೋನ್)ಗಳು ಬಹಳ ವೈವಿಧ್ಯಪೂರ್ಣವಾದಂಥವು; ’ಸಹಜ ಕೃಷಿ’ಯ ಯಾವುದೇ ಏಕೈಕ ಮಾದರಿಯು ಅವೆಲ್ಲಕ್ಕೂ ಸೂಕ್ತವಾಗುವುದು ಸಾಧ್ಯವಿಲ್ಲ. ಅದರ ಬದಲು, ಪ್ರಾದೇಶಿಕವಾಗಿ ವಿಕಾಸಗೊಂಡು ರೂಢಿಗತವಾಗಿರುವ ಸುಸ್ಥಿರ ಕೃಷಿ-ಸಂಸ್ಕೃತಿಗಳನ್ನು ಉಳಿಸಿಕೊಂಡು, ಅವುಗಳೊಳಗಿರುವ ಜೀತ, ಗೇಣಿ ಮುಂತಾದ ಸಾಮಾಜಿಕ ಅಸಮಾನತೆಗಳನ್ನು ತೊಡೆದುಹಾಕಿ, ಹೊಸ ವಾತಾವರಣದ ಪ್ರವೃತ್ತಿಗಳಿಗೆ ಸರಿಹೊಂದುವಂತೆ ರೂಪಿಸುವ ಒಂದು ಕಾಂಬಿನೇಶನ್ ಅಗತ್ಯವಿದೆ.

ಸಣ್ಣ, ಅತಿ ಸಣ್ಣ ರೈತರ ಬಗೆಗಿನ ಪ್ರಧಾನಿಯ ಕಳಕಳಿ ನೈಜವಾದುದೇ ಆಗಿದ್ದಲ್ಲಿ, ಭೂಮಿಯ ಸಮಾನ ಹಂಚಿಕೆ ಮಾತ್ರವಲ್ಲದೆ ನೀರಿನ ಸಂಪನ್ಮೂಲದ ಸಮಾನ ಹಂಚಿಕೆಯೂ ಆಗುವಂತೆ ನೋಡಿಕೊಳ್ಳಬೇಕು; ಅಷ್ಟೇ ಅಲ್ಲ, ನಾನಾ ಬಗೆಯ ಪರ್ಯಾಯ ಆರ್ಥಿಕ ವಿಧಾನಗಳು ಮತ್ತು ಬೆಂಬಲ ರಚನೆಗಳೂ ಸಮಾನವಾಗಿ ದಕ್ಕುವಂತಹ ನೀತಿಗಳನ್ನು ಸಹ ರೂಪಿಸಬೇಕು. (ಸಾಮಾನ್ಯವಾಗಿ ಗ್ರಾಮೀಣೇತರ ಫಲಾನುಭವಿಗಳ ಪಾಲಾಗುವ) ಸಬ್ಸಿಡಿಗಳು, ಸಾಲ ಮರುಪಾವತಿಯ ಮುಂದೂಡಿಕೆ, ಚುನಾವಣಾ ಸಮಯಗಳಲ್ಲಿ ಘೋಷಿಸುವ ಒಂದಷ್ಟು ಪುಕ್ಕಟೆ ಸವಲತ್ತುಗಳು ಮುಂತಾದುವುಗಳ ಬದಲು, ಮಣ್ಣು, ನೀರು, ಬೀಜ ಮತ್ತು ಕೃಷಿ-ಜೀವವೈವಿಧ್ಯಗಳನ್ನು ಪುನರುಜ್ಜೀವನಗೊಳಿಸುವಂಥ ’ಪುನರುಜ್ಜೀವನ ಕೃಷಿ’ಯ ವಿಸ್ತರಣೆಗೆ ಹಣಕಾಸು ಒದಗಿಸುವುದು ಅತ್ಯಗತ್ಯ. ಈ ಅಂಶಗಳನ್ನಾಧರಿಸಿ ಒಂದು ಸಮಗ್ರ ಕಾರ್ಯಕ್ರಮ ರೂಪಿಸಿದಲ್ಲಿ ಅದರಿಂದ ಸುಸ್ಥಿರ ಕೃಷಿಗೆ ಹೊರಳಿಕೊಳ್ಳುವುದರ ಜೊತೆಗೆ, ಹವಾಮಾನದ ವೈಪರೀತ್ಯ ಬದಲಾವಣೆಯನ್ನು ಕಡಿಮೆಗೊಳಿಸುವಂತಹ ಮತ್ತು ಅದಕ್ಕೆ ಹೊಂದಿಕೊಳ್ಳುವಂತಹ ವಿಧಾನಗಳನ್ನು ಅಭಿವೃದ್ಧಿಪಡಿಸಲೂ ಗ್ರಾಮೀಣ ಜನರಿಗೆ ಸಹಾಯಕವಾಗುತ್ತದೆ.

ಸಂಪನ್ಮೂಲಗಳು, ಶ್ರಮ, ಕೌಶಲ ಹಾಗೂ ಅನುಭವ-ಜ್ಞಾನಗಳನ್ನು ಪೂಲ್ ಮಾಡಿ, ಅದನ್ನೆಲ್ಲ ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟ ವ್ಯವಸ್ಥೆಯ ಸುಧಾರಣೆಗೆ ಬಳಸಲು ಸಾಧ್ಯವಾಗುವಂತೆ ಕೃಷಿ ಸಹಕಾರಿಗಳನ್ನು ರಚಿಸಿಕೊಳ್ಳಲು ರೈತರಿಗೆ ಬೆಂಬಲ ನೀಡಬೇಕು; ರೈತರಿಗೆ ಲಾಭ ಅಥವಾ ಉತ್ತಮ ಆದಾಯ ಗಗನ ಕುಸುಮವಾಗುವಂತೆ ಮಾಡಿರುವ ಎಲ್ಲಾ ಕಾರಣಗಳನ್ನು ಅಡ್ರೆಸ್ ಮಾಡುವಲ್ಲಿ ಇದು ಬಹಳಷ್ಟು ನೆರವಾಗಲಿದೆ. ಪರಿಸರಕ್ಕೆ ಸೂಕ್ತವಾದ ಬೆಳೆ ಪದ್ಧತಿಯನ್ನು ಪುನರುಜ್ಜೀವನಗೊಳಿಸುವಿಕೆ, ಸ್ಥಳೀಯವಾಗಿ ಸಂಗ್ರಹ ಮತ್ತು ವಿತರಣೆ, ಅಪೌಷ್ಟಿಕತೆಯನ್ನು ಹೋಗಲಾಡಿಸುವಂಥ ಸ್ಥಳೀಯ ಆಹಾರ ಪದ್ಧತಿಗಳನ್ನು ಉಳಿಸಿಕೊಳ್ಳುವಿಕೆ ಇವುಗಳ ದೃಷ್ಟಿಯಿಂದಲೂ ಸಹ ಕೃಷಿಯ ಪ್ಲಾನಿಂಗ್‌ಅನ್ನು ಪ್ರಜಾತಾಂತ್ರಿಕಗೊಳಿಸುವುದು ಮತ್ತು ವಿಕೇಂದ್ರೀಕರಿಸುವುದು ಅಗತ್ಯವಿದೆ. ಸ್ಥಳೀಯ ’ಬೀಜ ಬ್ಯಾಂಕ್’ಗಳ ಸ್ಥಾಪನೆಯು ಬಹಳ ಸಮಸ್ಯಾತ್ಮಕವಾಗಿರುವ ವ್ಯಾಪಾರೀ ಬೀಜೋದ್ಯಮದಿಂದ ರೈತರು ಬಚಾವಾಗುವುದಕ್ಕೆ ಮೂಲಾಧಾರವಾಗಲಿದೆ.

ಗ್ರಾಮೀಣ ಕೃಷಿ ಬದುಕಿಗೂ, ನಗರದ ಕೈಗಾರಿಕೆ ಆಧಾರಿತ ಬದುಕಿಗೂ ನಡುವಿನ ಬಹುಕಾಲದ ಕಂದರ ಇನ್ನೂ ಮುಂದುವರಿಯುವುದು ಸರ್ವಥಾ ಸಮರ್ಥನೀಯವಲ್ಲ. ಗ್ರಾಮೀಣ ಸಂಪನ್ಮೂಲಗಳು, ಕೌಶಲಗಳು ಹಾಗೂ ಉದ್ಯೋಗಗಳನ್ನು ಕಾಪಾಡಿಕೊಳ್ಳಬಲ್ಲ ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಸಂಸ್ಕರಣ ಕೇಂದ್ರಗಳನ್ನು ಉತ್ತೇಜಿಸುವುದು ನಿರುದ್ಯೋಗ ಮತ್ತು ವಲಸೆಯ ಕಠಿಣ ಸಮಸ್ಯೆಗೆ ಉತ್ತರವಾಗುತ್ತದೆ. ಆರೋಗ್ಯ, ಶಿಕ್ಷಣ ಮತ್ತು ಜೀವನೋಪಾಯಗಳ ದುರವಸ್ಥೆ ಗ್ರಾಮೀಣ ಭಾರತದ ಹೆಗ್ಗುರುತಾಗಿದೆ; ಇದಕ್ಕೆ ಕಾರಣವಾದ ಹಳೆಯ ತಪ್ಪುಗಳನ್ನು ಮತ್ತು ನಿರ್ಲಕ್ಷ್ಯದಿಂದ ಉಂಟಾಗಿರುವ ಅಸಮಾಧಾನಗಳನ್ನು ಅಡ್ರೆಸ್ ಮಾಡಬಲ್ಲ ಹೊಸ ಆರ್ಥಿಕ ಏರ್ಪಾಡೊಂದನ್ನು ಗ್ರಾಮೀಣ ಭಾರತಕ್ಕೆ ನೀಡಬೇಕು. ಪಂಚಾಯತಿಗಳು, ಅಂಗನವಾಡಿಗಳು, ಶಾಲೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಂಥ ಪ್ರಮುಖ ಸಾರ್ವಜನಿಕ ಸಂಸ್ಥೆಗಳಿಗೆ ತುರ್ತಾಗಿ ಕಾಯಕಲ್ಪ ನೀಡಿ, ಅವುಗಳನ್ನು ಪರಿಣಾಮಕಾರಿ ಮತ್ತು ಜನತೆಗೆ ಹೊಣೆಗಾರರಾದ ಸಾರ್ವಜನಿಕ ಸಂಸ್ಥೆಗಳನ್ನಾಗಿ ಮಾಡಬೇಕು.

ಈ ಹೊಸ ಗುರಿಗಳನ್ನೂ ಸಾಧ್ಯತೆಗಳನ್ನೂ ಸಾಕಾರಗೊಳಿಸಬೇಕಿದ್ದಲ್ಲಿ ಆಡಳಿತಾತ್ಮಕ ಮತ್ತು ಸರ್ಕಾರಿ ಯಂತ್ರಾಂಗದ ತುರ್ತು ಸುಧಾರಣೆ ಆಗಬೇಕು; ಆ ಮೂಲಕ ಪ್ರಭುತ್ವಕ್ಕೂ ಪ್ರಜೆಗಳಿಗೂ ನಡುವಿನ ವ್ಯವಹಾರವನ್ನು ಅಧಿಕಾರಶಾಹಿಯಿಂದ ಮುಕ್ತವಾಗಿಸಿ, ಗ್ರಾಮೀಣ ಜನತೆಯನ್ನು ’ಅರ್ಜಿ ಹಿಡಿದುಕೊಂಡು, ಬೇಡಿಕೆ ಮುಂದಿಟ್ಟುಕೊಂಡು ಕಚೇರಿ ಅಲೆಯುವವರಂತೆ’ ನೋಡದೆ, ನಾಗರಿಕರಂತೆ ಕಾಣುವ ವಾತಾವರಣವನ್ನು ರೂಪಿಸಬೇಕು. ವ್ಯವಸ್ಥೆಯೊಳಗೆ ಅಂತರ್ಗತವಾಗಿರುವ ಅಸಮಾನತೆಗಳು ಮತ್ತು ಅನಾನುಕೂಲತೆಗಳಿಂದ ಉಂಟಾಗಿರುವ ಸಾಲುಸಾಲು ಸಮಸ್ಯೆಗಳಿಗೆ ಮುಲಾಮು ಹಚ್ಚುವ ಧೋರಣೆ ಕೈಬಿಟ್ಟು, ಜಾತಿ, ಜನಾಂಗೀಯ, ಜೆಂಡರ್ ಮತ್ತು ವರ್ಗ ಅಸಮಾನತೆಗಳ ಮೂಲ ಕಾರಣಗಳನ್ನು ಅಡ್ರೆಸ್ ಮಾಡುವಂತಹ ನೀತಿಗಳನ್ನು ರೂಪಿಸಿ ಜಾರಿಗೊಳಿಸುವ ಅಗತ್ಯವಿದೆ.

ಇಂದಿನ ಆಳುವ ಸರ್ಕಾರವು ಹಳೆಯ ನಂಬಿಕೆಗಳನ್ನು ಸಮ್ಮತಗೊಳಿಸಲು ಸಂಸ್ಕೃತಿ-ಪರಂಪರೆಗಳನ್ನು ವೈಭವೀಕರಿಸಿ ಬಳಕೆ ಮಾಡುತ್ತಿರುವುದರಿಂದ, ವೈವಿಧ್ಯಮಯವೂ ಶ್ರೀಮಂತವೂ ಆದ ನಮ್ಮ ಕೃಷಿ-ಸಂಸ್ಕೃತಿಗಳು ನಮ್ಮ ನಾಗರಿಕತೆಯ ಅಸ್ಮಿತೆಯ ತಳಹದಿಗಳಾಗಿದ್ದವು ಮತ್ತು ಈಗಲೂ ಆಗಬಲ್ಲವು ಎಂಬುದನ್ನು ಆಳುವ ಸರ್ಕಾರ ಮಾತ್ರವಲ್ಲ, ನಾವು ಕೂಡ ಮಾನ್ಯ ಮಾಡುವುದು ಸೂಕ್ತವೇ ಆಗುತ್ತದೆ. ಕಾರ್ಪೊರೆಟೀಕೃತ, ಕೈಗಾರಿಕೀಕೃತ ವಿದೇಶೀ ಕೃಷಿ ಮಾದರಿಗಳ ವಿನಾಶಕಾರಿ ಪರಿಣಾಮಗಳು ಜಗತ್ತಿನಾದ್ಯಂತ ವ್ಯಾಪಕವಾದ ದುರಂತಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿವೆ; ನಾವು ಸಹ ಅವುಗಳನ್ನೇ ಅಳವಡಿಸಿಕೊಳ್ಳುವುದಕ್ಕಿಂತಲೂ, ನಮ್ಮ ವೈವಿಧ್ಯಮಯವಾದ ಕೃಷಿ-ಸಂಸ್ಕೃತಿಗಳ ಜ್ಞಾನ ಪರಂಪರೆಯನ್ನು (ಅದರೊಳಗಿನ ಜಾತಿ ಆಧಾರಿತ ಸಾಮಾಜಿಕ ವ್ಯವಸ್ಥೆಯನ್ನು ದೂರ ಮಾಡಿ) ಮತ್ತೆ ನಮ್ಮದಾಗಿಸಿಕೊಂಡಲ್ಲಿ ಅದು ನಮ್ಮ ಬಗೆಬಗೆಯ ರಾಷ್ಟ್ರೀಯ ಸಮಸ್ಯೆಗಳಿಗೆ ಉತ್ತರವಾಗಬಲ್ಲದು.

ರೈತರು ಮತ್ತು ಸರ್ಕಾರದ ನಡುವಿನ ವರ್ಷಾವಧಿ ಸಂಘರ್ಷದಲ್ಲಿ ರೈತ ಆಂದೋಲನದ ವಿಜಯವನ್ನು ಕವಿ-ಚಿಂತಕ ಶಿವಸುಂದರ್ “ಟ್ರಾಕ್ಟರುಗಳು ಟ್ಯಾಂಕ್‌ಗಳ ವಿರುದ್ಧ ವಿಜಯ ಸಾಧಿಸಿವೆ” ಎಂದು ವರ್ಣಿಸುತ್ತಾರೆ. ಇದು ನಿಜವಿದ್ದಲ್ಲಿ, ಶಾಂತಿಯುತ ವಿಧಾನಗಳಿಂದಲೇ ಪ್ರಜಾತಂತ್ರಕ್ಕೆ ಹಿಂದಿರುಗುವುದು ಸಾಧ್ಯವೆಂಬ ಆಶಾವಾದವು ಗ್ರಾಮೀಣ ಕೃಷಿ ಭಾರತಕ್ಕಾಗಿ ’ಗರಿಷ್ಠ ಬೆಂಬಲ ನೀತಿ’ಗಳನ್ನು (maximum support policies) ಪ್ರೋತ್ಸಾಹಿಸಲು ನಮ್ಮನ್ನು ಪ್ರೇರೇಪಿಸಬೇಕಿದೆ. ಈ ನಿಟ್ಟಿನಲ್ಲಿ, ಮುಂಬರುವ ಸಂಸತ್ ಅಧಿವೇಶನವು ಮೂರು ಕೃಷಿ ಕಾಯ್ದೆಗಳನ್ನು ಪುನಃ ಜಾರಿಗೊಳಿಸುವತ್ತ ಹೆಜ್ಜೆಯಿಡುವ ಬದಲು, ಗ್ರಾಮೀಣ ಭಾರತಕ್ಕೆ ಅತ್ಯುತ್ತಮವಾದುದನ್ನು ಸಾಕಾರಗೊಳಿಸುವ ಪ್ರಯತ್ನಗಳಿಗೆ ಮುಂದಾಗುವಂತೆ ಪ್ರಯತ್ನಿಸಬೇಕಿದೆ. ನಮ್ಮನಮ್ಮ ಎಂಪಿಗಳಿಗೆ ಮನವಿ ಸಲ್ಲಿಸುವುದರಿಂದ ನಮ್ಮ ಪ್ರಯತ್ನಗಳು ಆರಂಭವಾಗಬೇಕಿದೆ.

ಅನುವಾದ: ಸಿರಿಮನೆ ನಾಗರಾಜ್

ಡಾ. ಎ.ಆರ್.ವಾಸವಿ

ಡಾ. ಎ.ಆರ್.ವಾಸವಿ
ಸಾಮಾಜಿಕ ಮಾನವಶಾಸ್ತ್ರಜ್ಞೆ, ಪುನರ್ಚಿತ್ ಕಲೆಕ್ಟಿವ್.


ಇದನ್ನೂ ಓದಿ: ಎಂಎಸ್‌ಪಿ ಕಾನೂನು ಜಾರಿಗೆ ಸಮಿತಿ ರಚಿಸಲು ಕೇಂದ್ರ ನಿರ್ಧಾರ: 5 ಜನ ರೈತ ಪ್ರತಿನಿಧಿಗಳಿರಲು ಒತ್ತಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...