ರಾಷ್ಟ್ರಕವಿ ಕುವೆಂಪುರವರನ್ನು ಅವಮಾನಿಸಿದ, ನಾಡಗೀತೆ ಮತ್ತು ಕನ್ನಡ ಬಾವುಟಕ್ಕೆ ಅಪಚಾರವೆಸಗಿದ ರೋಹಿತ್ ಚಕ್ರತೀರ್ಥನನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಿಂದ ಕಿತ್ತೊಗೆಯಿರಿ ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.
ಮಲ್ಲೇಶ್ವರಂನಲ್ಲಿನ ಕುವೆಂಪು ಪ್ರತಿಮೆ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ), ಕರುನಾಡ ಸೇವಕರು, ಪ್ರಗತಿಪರ ಸಂಘಟನೆಗಳು ಕಾರ್ಯಕರ್ತರು 420 ರೋಹಿತ್ ಚಕ್ರತೀರ್ಥ ಎಂಬ ಘೋಷಣೆ ಕೂಗಿ, ಆತನ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಮಾತನಾಡಿ, “ಸರ್ಕಾರದಿಂದ ಮಾನ್ಯತೆ ಪಡೆದಿರುವ ನಮ್ಮ ನಾಡಿನ ಹೆಮ್ಮೆಯ ನಾಡಗೀತೆಯನ್ನು ತಿರುಚಿ ಈ ರೋಹಿತ್ ಚಕ್ರತೀರ್ಥ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ ಕನ್ನಡ ಧ್ವಜವನ್ನು ತನ್ನ ಒಳ ಉಡುಪುಗಳಿಗೆ ಹೋಲಿಸಿ ವಿಕೃತಿ ಮೆರದಿದ್ದರು. ಇಂತಹ ನಾಡದ್ರೋಹಿಯನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಶಿಕ್ಷಣ ಸಚಿವ ನಾಗೇಶ್ರವರು ಆತನ ಕುಕೃತ್ಯಗಳನ್ನು ಸಮರ್ಥಿಸಿಕೊಂಡು ನನ್ನ ಫೋನ್ ಕಟ್ ಮಾಡಿ ಬ್ಲಾಕ್ಲಿಸ್ಟ್ಗೆ ಹಾಕಿದ್ದಾರೆ. ಸರ್ಕಾರದಲ್ಲಿ ಉನ್ನತ ಹುದ್ದೆ ಪಡೆಯಲು ನಾಡಗೀತೆಯನ್ನು ಅವಮಾನಿಸಬೇಕು ಎಂದು ಅವರು ಉತ್ತರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಭಾಷೆಯನ್ನು ಮಾತನಾಡುವವರು ಸೋಮಾರಿಗಳು ಎಂದು ಈ ರೋಹಿತ್ ಚಕ್ರತೀರ್ಥ ಬರೆಯುತ್ತಾನೆ. ಇಂತಹ ವ್ಯಕ್ತಿಯನ್ನು ಯಾವ ಅರ್ಹತೆಯ ಆಧಾರದಲ್ಲಿ ಪಠ್ಯ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಲಾಗಿದೆ? ಕ್ರಿಯೆಗೆ ಪ್ರತಿಕ್ರಿಯೆ ಎನ್ನುವ ಸಿಎಂ ಬೊಮ್ಮಾಯಿಯವರು ಈಗ ಎಲ್ಲಿ ಕೂತಿದ್ದಾರೆ? ಅವರು ನಾಡಿನ ಅಸ್ಮಿತೆಗೆ ಅವಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರೋಹಿತ್ ಚಕ್ರತೀರ್ಥನ ಮೇಲೆ ಐಪಿಸಿ ಸೆಕ್ಷನ್ 295 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಆತ ಕುವೆಂಪುರವರ ಪ್ರತಿಮೆಯ ಕಾಲಿಗೆ ಬಿದ್ದು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕನ್ನಡದ ಮಕ್ಕಳು ಸುಮ್ಮನೆ ಬಿಡುವುದಿಲ್ಲ. ಕುವೆಂಪುರವರ, ಬಸವಣ್ಣನವರ, ಸಂಗೊಳ್ಳಿ ರಾಯಣ್ಣನವರ ವಿಚಾರಗಳು ಎಲ್ಲಾ ಕನ್ನಡಿಗರಿಗೆ ಸಂಬಂಧಿಸಿವೆ. ಯಾವುದೊ ಒಂದು ಜಾತಿಗೆ ಅಲ್ಲ ಎಂದು ಅವರು ತಿಳಿಸಿದರು.
ಸರ್ವ ಜನಾಂಗದ ಶಾಂತಿಯ ತೋಟವನ್ನು ಪ್ರತಿಯೊಬ್ಬರು ಪ್ರೀತಿಯಿಂದ ಕಟ್ಟುತ್ತಿದ್ದೇವೆ. ಅದನ್ನು ಹಿಂಸೆಯ ಬೀಡಾಗಿ ಮಾಡುತ್ತಿರುವ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ರಕ್ಷಣಾ ವೇದಿಕೆಯ ಶಿವರಾಮೇಗೌಡರು, ಕನ್ನಡ ಹೋರಾಟಗಾರರಾದ ನೆಲಮಂಗಲ ಸುರೇಶ್ ರವರು ಮಾತನಾಡಿದರು.
ಇದನ್ನೂ ಓದಿ: ಪಠ್ಯದಲ್ಲಿ ನನ್ನ ಕವಿತೆಯನ್ನೂ ಕೈಬಿಡಿ: ಶಿಕ್ಷಣ ಸಚಿವರಿಗೆ ಎಸ್.ಜಿ.ಸಿದ್ದರಾಮಯ್ಯ ಪತ್ರ