ಸನಾತನ ಧರ್ಮದ ಕುರಿತು ಹೇಳಿಕೆ ನೀಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮತ್ತು ಇತರ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ನಾಯಕರ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಮದ್ರಾಸ್ ಹೈಕೋರ್ಟ್ ಗುರುವಾರ ತೀರ್ಪು ಕಾಯ್ದಿರಿಸಿದೆ.
ಅರ್ಜಿ ವಿಚಾರಣೆ ವೇಳೆ, ಡಿಎಂಕೆ ನಾಯಕರು ಹಿಂದೂಗಳ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಎಂದು ಹಿರಿಯ ವಕೀಲ ರಾಜಗೋಪಾಲ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವಾದಿಸಿದ ಉದಯನಿಧಿ ಸ್ಟಾಲಿನ್, ಸಚಿವ ಪಿ.ಕೆ.ಶೇಖರ್ ಬಾಬು, ಸಂಸದ ಎ.ರಾಜಾ ಪರ ವಕೀಲ ಪಿ ವಿಲ್ಸನ್, ರಾಜ್ಯದ ಬಹುಸಂಖ್ಯಾತರು ಮತ್ತು ಬಹುಪಾಲು ಡಿಎಂಕೆ ಕಾರ್ಯಕರ್ತರು ಹಿಂದೂಗಳಾಗಿದ್ದಾರೆ. ದ್ರಾವಿಡ ಪಕ್ಷವು ಹಿಂದೂಗಳಿಂದ ಚುನಾಯಿತವಾಗಿದೆ ಎಂದಿದ್ದಾರೆ.
ಬಿಜೆಪಿಯನ್ನು ಉಲ್ಲೇಖಿಸಿದ ಉದಯನಿಧಿ ಪರ ವಕೀಲರು, ನೋಟಾ ಮತಗಳಷ್ಟು ಮತ ಪಡೆಯದವರು ಹಿಂದೂಗಳ ಪ್ರತಿನಿಧಿಗಳು ಎಂದು ಹೇಳಿಕೊಳ್ಳಬೇಕಾಗಿಲ್ಲ. ಇದೊಂದು ರಾಜಕೀಯ ಕದನ ಎಂಬುವುದು ಖಚಿತ. ಈ ವಿಚಾರವನ್ನು ಸೈದ್ಧಾಂತಿಕ ಕದನಕ್ಕೆ ಬಳಸಿಕೊಳ್ಳಲು ಅವಕಾಶ ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಉದಯನಿಧಿ ಸ್ಟಾಲಿನ್ ಸೇರಿದಂತೆ ಇತರ ಡಿಎಂಕೆ ನಾಯಕರು ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಲಪಂಥೀಯ ಸಂಘಟನೆಯಾದ ಹಿಂದೂ ಮುನ್ನಾನಿಯ ನಾಯಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಡಿಎಂಕೆ ನಾಯಕರ ಸಾಂವಿಧಾನಿಕ ಹುದ್ದೆಗಳನ್ನು ರದ್ದಪಡಿಸುವಂತೆ ಕೋರಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿವ ಉದಯನಿಧಿ ಸ್ಟಾಲಿನ್, ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ರೋಗಗಳಿದ್ದಂತೆ. ಇದನ್ನು ಕೇವಲ ವಿರೋಧಿಸುವುದಲ್ಲ ನಿರ್ಣಾಮ ಮಾಡಬೇಕು ಎಂದಿದ್ದರು. ಉದಯನಿಧಿ ಹೇಳಿಕೆಯನ್ನು ಡಿಎಂಕೆ ನಾಯಕರು ಬೆಂಬಲಿಸಿದ್ದರು.
ಇದನ್ನೂ ಓದಿ: ಗೋಮಾಂಸ ಸೇವಿಸುತ್ತಿದ್ದಾಳೆಂದು ವಿದ್ಯಾರ್ಥಿನಿಗೆ ಶಿಕ್ಷಕಿಯಿಂದ ಕಿರುಕುಳ