“ಸ್ಯಾಂಟ್ರೋ ರವಿ ಜೊತೆಗೆ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಮೊದಲಿನಿಂದಲೂ ಸಂಪರ್ಕದಲ್ಲಿದ್ದರಂತೆ, ಆತ ಗುಜರಾತಿನಲ್ಲಿರುವ ಬಗ್ಗೆ ಮಾಹಿತಿ ಪಡೆದು ಆತನನ್ನು ಸೆರೆಂಡರ್ ಮಾಡಿಸಲು ಸಚಿವರು ಗುಜರಾತ್ ಗೆ ಹೋಗಿದ್ದರು. ಅದೇ ರೀತಿ ಆತನಿಂದ ಸಚಿವರು ಸಾಕಷ್ಟು ಹಣ ಪಡೆದಿದ್ದಾರೆ” ಎನ್ನುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಸಚಿವರೇ ಸ್ಪಷ್ಟೀಕರಣ ನೀಡಿದ್ದಾರೆ.
ಬೆಂಗಳೂರಿನ ಮಲೆನಾಡು ಮಿತ್ರ ವೃಂದ ಭಾನುವಾರ ರಾತ್ರಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, “ಸ್ವಚ್ಚ ರಾಜಕಾರಣದಲ್ಲಿ ಬದ್ಧತೆ ಹೊಂದಿರುವ ನಾನು, ಸಮಾಜದ್ರೋಹಿಗಳೂ ಮತ್ತು ಪೀಡಕರಿಂದ ಅಕ್ರಮವಾಗಿ ಹಣ ಗಳಿಸಬೇಕಾದ ಸಂದರ್ಭ ಬಂದರೆ, ಬದುಕಲು ಇಚ್ಛಿಸುವುದಿಲ್ಲ” ಎಂದರು.
ಇದನ್ನೂ ಓದಿ: ಸ್ಯಾಂಟ್ರೋ ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎಂಬ ಹಸಿ ಸುಳ್ಳು: ಗೃಹ ಸಚಿವ ಆರಗ ಜ್ಞಾನೇಂದ್ರ
ಇದೇ ವೇಳೆ ತಮ್ಮ ಗುಜರಾತ್ ಪ್ರವಾಸಕ್ಕೂ, ಸ್ಯಾಂಟ್ರೋ ರವಿ ಬಂಧನಕ್ಕೂ ತಳುಕು ಹಾಕಿ ಮಾತನಾಡುತ್ತಿರುವ ಕೆಲವು ನಾಯಕರ ಬಗ್ಗೆ ಪ್ರಸ್ತಾಪಿಸಿದ ಸಚಿವರು, “ನನ್ನ ಗುಜರಾತ್ ಪ್ರವಾಸ ಬಹಳ ಹಿಂದೆಯೇ ನಿಗದಿಯಾಗಿತ್ತು. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ನಿಯೋಗದ ನೇತೃತ್ವ ವಹಿಸಿದ್ದ ನನ್ನ ಗುಜರಾತ್ ಭೇಟಿ ಮತ್ತು ಕಾರ್ಯಕ್ರಮಗಳು, ಪಾರದರ್ಶಕವಾಗಿವೆ” ಎಂದು ತಿಳಿಸಿದರು.
“ಗುಜರಾತ್ ಪ್ರವಾಸದ ಸಂದರ್ಭದಲ್ಲಿ, ರಾಜ್ಯದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು, ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಮತ್ತು ಇತರ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ಇದರ ಮುಂದುವರಿದ ಭಾಗವಾಗಿ ಶೀಘ್ರದಲ್ಲಿಯೇ ವಿಶ್ವವಿದ್ಯಾಲಯದ ಶಂಕುಸ್ಥಾಪನಾ ಕಾರ್ಯಕ್ರಮವೂ ನಡೆಯಲಿದೆ” ಎಂದರು.
ಗುಜರಾತ್ ಮುಖ್ಯಮಂತ್ರಿ ಭೂಪೆಂಧ್ರ ಭಾಯಿ ಪಟೇಲ್ ಅವರನ್ನು ಭೇಟಿ ಮಾಡಿದ್ದೇನೆ. ಎಲ್ಲವೂ ತೆರದ ಪುಸ್ತಕದಂತೆ ಇದೆ. ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ವ್ಯಕ್ತಿಯೊಬ್ಬರು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಪರೋಕ್ಷವಾಗಿ ಎಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು.
ಸ್ಯಾಂಟ್ರೋ ರವಿ ವಿರುದ್ಧದ ಆರೋಪಗಳ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ‘ಸ್ಯಾಂಟ್ರೋ’ ರವಿ ವಿರುದ್ಧದ ಪ್ರಕರಣದ ತನಿಖೆಯನ್ನು ಸಿಐಡಿಗೆ ಸರ್ಕಾರ ನಿರ್ದೇಶಿಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಈ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. “ಸ್ಯಾಂಟ್ರೋ ರವಿ ಪೊಲೀಸ್ ಇಲಾಖೆಯ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದನು, ಆತ ಪೊಲೀಸ್ ಅಧಿಕಾರಿಗಳ ಮೇಲೆ ತಾನು ಹೇಳಿದಂತೆ ಕೇಳಬೇಕು ಎನ್ನುವ ದರ್ಪ ತೋರಿಸುತ್ತಿದ್ದನು. ಅದಕ್ಕೆ ಕಾರಣವೇ ಈ ಗೃಹ ಸಚಿವರು ಮತ್ತೆ ಈ ಸರ್ಕಾರ. ಏಕೆಂದರೆ ಈ ಸಕಾರವೇ ಆತನ ಬೆಂಬಲಕ್ಕೆ ಇರುವಾಗ ಪೊಲೀಸ್ ಅಧಿಕಾರಿಗಳು ಸಹಜವಾಗಿ ಆತನ ಮಾತಿಗೆ ತಲೆಬಾಗುತ್ತಿದ್ದರು. ಕುಮಾರ ಕೃಪಾದಲ್ಲಿ ಈ ರವಿಯ ಕೆಲಸವಾದ್ರೂ ಏನು? ಈತನ ವ್ಯವಹಾರಗಳೆಲ್ಲಾ ಅಲ್ಲಿಯೇ ನಡೆಯುತ್ತಿದ್ದವು. ಸ್ಯಾಂಟ್ರೋ ರವಿ, ಸಚಿವರಿಗೆ ಹಣ ನೀಡುತ್ತಾನೆ” ಎಂದು ಗಂಭೀರ ಆರೋಪ ಮಾಡಿದ್ದರು.