ಮಧ್ಯಪ್ರದೇಶದ ಭೋಪಾಲ್ನಲ್ಲಿ ದಲಿತ ಸಮುದಾಯದ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ಅಮಾನವೀಯ ಘಟನೆ ನಡೆದಿದೆ.
ದಲಿತ ಸಮುದಾಯಕ್ಕೆ ಸೇರಿದ ರಾಮ್ ಸ್ವರೂಪ್ ಅಹಿರ್ವಾರ್ ಅವರನ್ನು ಗ್ರಾಮದ ಸರಪಂಚ್ನ ಪತಿ ಶೇರು ಮೀನಾ ಮತ್ತು ಸಂಗಡಿಗರು ಸರ್ಕಾರಿ ಜಮೀನನ್ನು ಆಕ್ರಮಿಸಿ ಬೇಲಿ ಹಾಕುವುದನ್ನು ತಡೆದಿದ್ದಕ್ಕಾಗಿ ಕಿಡ್ನಾಪ್ ಮಾಡಿ ಥಳಿಸಿದ್ದಾರೆ.
ಸೆಪ್ಟೆಂಬರ್ 10 ರಂದು ಭೋಪಾಲ್ನ ಹಳ್ಳಿಯೊಂದರಲ್ಲಿ ಘಟನೆ ನಡೆದಿದೆ. ಗ್ರಾಮದ ಮುಖ್ಯಸ್ಥೆಯ ಪತಿ ಶೇರು ಮೀನಾ ಅವರು ಗೂಂಡಾಗಳ ಜೊತೆ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಹೇಳಿದ್ದಾರೆ.
ಶೇರು ಮೀನಾ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ರಾಮೇಶ್ವರ ಶರ್ಮಾ ಅವರ ಆಪ್ತರಾಗಿದ್ದಾರೆ. ಗೂಂಡಾಗಳು ಅವರನ್ನು ಬಲವಂತವಾಗಿ ತಮ್ಮ ಕಾರಿಗೆ ಹತ್ತಿಸಿ ಕಾಲುವೆಯೊಂದಕ್ಕೆ ಕರೆದೊಯ್ದರು ಮತ್ತು ಅಲ್ಲಿ ಅವರು ಆತನನ್ನು ಥಳಿಸಿ ಮೈಮೇಲೆ ಮೂತ್ರ ವಿಸರ್ಜನೆ ಮಾಡಿದರು ಎಂದು ಅಹಿರ್ವಾರ್ ಆರೋಪಿಸಿದ್ದಾರೆ.
ನಂತರ ಅವರು ಅಹಿರ್ವಾರ್ನನ್ನು ಶೇರು ಮೀನಾ ಅವರ ಮನೆಗೆ ಕರೆದೊಯ್ದು ಕೊಠಡಿಯಲ್ಲಿ ಬೀಗ ಹಾಕಿ ಪ್ರಜ್ಞೆ ಕಳೆದುಕೊಳ್ಳುವವರೆಗೂ ಹಲ್ಲೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿ ವಿರುದ್ಧ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಶೇರು ಮೀನಾ ಸೇರಿದಂತೆ ಎಲ್ಲಾ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಭೋಪಾಲ್ ಗ್ರಾಮಾಂತರ ಎಸ್ಪಿ ಪ್ರಮೋದ್ ಸಿನ್ಹಾ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ಕುನಾಲ್ ಚೌಧರಿ, ದುರಹಂಕಾರ ಮತ್ತು ಅಧಿಕಾರದ ಅಮಲಿನಲ್ಲಿ ಬಿಜೆಪಿ ನಾಯಕರು ಮತ್ತು ಅವರ ಬೆಂಬಲಿಗರು ದಲಿತರು ಮತ್ತು ಆದಿವಾಸಿಗಳ ಮೇಲೆ ಹೇಗೆ ದೌರ್ಜನ್ಯ ಎಸಗುತ್ತಿದ್ದಾರೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಬಹಿರಂಗಪಡಿಸಿದೆ. ಮುಂಬರುವ ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಸಂಸತ್ತಿನ ವಿಶೇಷ ಅಧಿವೇಶನ: ಅಜೆಂಡಾವನ್ನು ಬಹಿರಂಗಪಡಿಸಿದ ಕೇಂದ್ರ ಸರಕಾರ