ಸೆ.18ರಿಂದ ಆರಂಭವಾಗುವ ಸಂಸತ್ತಿನ ವಿಶೇಷ ಐದು ದಿನಗಳ ಅಧಿವೇಶನದ ಕಾರ್ಯಸೂಚಿಯನ್ನು ಕೇಂದ್ರ ಸರಕಾರ ಬಿಡುಗಡೆಗೊಳಿಸಿದೆ.
ಅಧಿವೇಶನದಲ್ಲಿ ಸಂಸತ್ತಿನ 75 ವರ್ಷಗಳ ಇತಿಹಾಸದ ಕುರಿತು ಚರ್ಚೆ ನಡೆಯಲಿದೆ ಎಂದು ಸರಕಾರ ಬಹಿರಂಗ ಪಡಿಸಿದೆ. ಅಧಿವೇಶನದಲ್ಲಿ ವಿವಾದವನ್ನು ಸೃಷ್ಟಿಸಿರುವ ಮುಖ್ಯ ಚುನಾವಣಾ ಆಯುಕ್ತರ ನೇಮಕ ಸೇರಿದಂತೆ ನಾಲ್ಕು ಮಸೂದೆಗಳನ್ನು ಸರ್ಕಾರ ಅಂಗೀಕಾರ ಮಾಡಲಿದೆ ಎನ್ನಲಾಗಿದೆ.
ಲೋಕಸಭೆಯ ಸೆಕ್ರೆಟರಿಯೇಟ್ ಹೊರಡಿಸಿರುವ ಬುಲೆಟಿನ್ನಲ್ಲಿ, ಸೆಪ್ಟೆಂಬರ್ 18 ರಂದು ಅಧಿವೇಶನದಲ್ಲಿ 75 ವರ್ಷಗಳ ಸಂಸತ್ತಿನ ಪಯಣ, ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆಗಳ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದೆ.
ಅಧಿವೇಶನದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಕಚೇರಿಯ ಅವಧಿ) ಮಸೂದೆ, ಪೋಸ್ಟ್ ಆಫೀಸ್ ಬಿಲ್, ವಕೀಲರ (ತಿದ್ದುಪಡಿ) ಮಸೂದೆ, ಮತ್ತು ನಿಯತಕಾಲಿಕಗಳು ಮತ್ತು ಪತ್ರಿಕಾ ನೋಂದಣಿ ಮಸೂದೆ ಮಂಡನೆಯಾಗಲಿದೆ.
G20 ಸಮಯದಲ್ಲಿ ‘ಇಂಡಿಯಾ’ವನ್ನು ‘ಭಾರತ್’ ಎಂದು ಮರು ನಾಮಕರಣ ಮಾಡಲಾಗುತ್ತದೆ ಎಂಬ ವಿವಾದ ಭುಗಿಲೆದ್ದಿತ್ತು. ಇದಕ್ಕೆ ಸಂಬಂಧಿಸಿದ ಮಸೂದೆ ಸದನದಲ್ಲಿ ಮಂಡನೆಯಾಗುತ್ತದೆ ಎನ್ನಲಾಗಿತ್ತು. ಆದರೆ ಇದೀಗ ಊಹಾಪೋಹಗಳಿಗೆ ತೆರೆ ಬಿದ್ದಿದೆ.
‘ಒಂದು ರಾಷ್ಟ್ರ, ಒಂದು ಚುನಾವಣೆ’, ಏಕರೂಪ ನಾಗರಿಕ ಸಂಹಿತೆ (UCC) ಮತ್ತು ಮಹಿಳಾ ಮೀಸಲಾತಿಗೆ ಮಸೂದೆಗಳನ್ನು ತರಲಾಗುತ್ತದೆ ಎಂದು ಹೇಳಲಾಗಿತ್ತು.
ಈ ಮೊದಲು ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಮತ್ತು ಕುಸ್ತಿಪಟುಗಳ ಪ್ರತಿಭಟನೆ ಸೇರಿದಂತೆ ಒಂಬತ್ತು ವಿಚಾರಗಳ ಬಗ್ಗೆ ಚರ್ಚೆ ನಡೆಸುವಂತೆ ಆಗ್ರಹಿಸಿದ್ದರು.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್ನ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಅವರು, ಸೋನಿಯಾ ಗಾಂಧಿಯವರ ಒತ್ತಡದ ನಂತರ ಸರ್ಕಾರವು ಕಾರ್ಯಸೂಚಿಯನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಸನಾತನ ವಿವಾದ: ಉದಯನಿಧಿ ಸ್ಟಾಲಿನ್ ವಿರುದ್ಧ ಮುಂಬೈನಲ್ಲಿ FIR ದಾಖಲು