ಉತ್ತರ ಪ್ರದೇಶದ ಲಿಖಿಂಪುರ ಜಿಲ್ಲೆಯಲ್ಲಿ ರೈತರ ಮೇಲೆ ವಾಹನ ಚಲಾಯಿಸಿ ಕೊಂದ ಪ್ರಕರಣವನ್ನು ಗಮನಿಸಿರುವ ಸುಪ್ರೀಂ ಕೋರ್ಟ್, ಪ್ರತಿಭಟಿಸುವ ಹಕ್ಕನ್ನು ‘ಸಂಪೂರ್ಣ ಹಕ್ಕು’ ಎನ್ನಬಹುದೇ, ಇಲ್ಲವೇ ಎಂದು ನಿರ್ಧರಿಸಲಿದೆ ಎಂದು ವರದಿಯಾಗಿದೆ.
ದಿಲ್ಲಿಯ ಜಂತರ್ ಮಂತರ್ ನಲ್ಲಿ ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಲು ಅನುಮತಿ ಕೋರಿ ರೈತರ ಸಂಘಟನೆಯಾದ ಕಿಸಾನ್ ಮಹಾಪಂಚಾಯತ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.
“ಮೂರು ವಿವಾದಾತ್ಮಕ ಕಾನೂನುಗಳನ್ನು ಜಾರಿಗೊಳಿಸದಂತೆ ಸುಪ್ರೀಂಕೋರ್ಟ್ ತಡೆ ಹಿಡಿದಿರುವಾಗ ಪ್ರತಿಭಟನೆ ಮಾಡುತ್ತಿರುವುದು ಸರಿಯೇ?” ಎಂದು ಜಸ್ಟೀಸ್ ಎ.ಎಂ.ಖಾನ್ವಿಲ್ಕರ್ ಮತ್ತು ಜಸ್ಟೀಸ್ ಸಿ.ಟಿ.ರವಿಕುಮಾರ್ ಅವರಿದ್ದ ಪೀಠವು ರೈತರ ಸಂಘಟನೆಯನ್ನು ಪ್ರಶ್ನಿಸಿದೆ.
“ಮೂರು ವಿವಾದಿತ ಕಾನೂನುಗಳ ಪ್ರಕರಣ ನ್ಯಾಯಾಲಯದಲ್ಲಿರುವಾಗ ರೈತರು ಪ್ರತಿಭಟಿಸಬಹುದೇ ಎಂದು ಕೋರ್ಟ್ ನಿರ್ಧರಿಸಲಿದೆ” ಎಂದು ಪೀಠವು ಹೇಳಿರುವುದಾಗಿ ವರದಿಯಾಗಿದೆ.
ಕಳೆದ 2020ರ ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರ ವಿವಾದಿತ ಕಾಯ್ದೆಗಳನ್ನು ಜಾರಿಗೊಳಿಸಿತ್ತು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ಶುರುವಾಗಿ ಇಡೀ ದೇಶವನ್ನು ವ್ಯಾಪಿಸಿ, ಪ್ರತಿಭಟನೆ ಮುಂದುವರಿದಿದೆ. ರೈತರ ಪ್ರತಿಭಟನೆಯ ಕಾವು ಹೆಚ್ಚಾದ ಬಳಿಕ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸದಂತೆ ತಡೆ ನೀಡಿತ್ತು.
ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಭಾನುವಾರ ನಡೆದ ಘಟನೆಯನ್ನು ಸುಪ್ರೀಂಕೋರ್ಟ್ ಗಮನಕ್ಕೆ ತಂದರು. ಜಸ್ಟೀಸ್ ಖಾನ್ವಿಲ್ಕರ್ ಮಾತನಾಡಿ, “ಈ ರೀತಿಯ ಘಟನೆಗಳು ನಡೆದಾಗ ಯಾರೂ ಜವಾಬ್ದಾರಿಯನ್ನು ಹೊರುವುದಿಲ್ಲ. ದೈಹಿಕ ಹಾಗೂ ಆಸ್ತಿಪಾಸ್ತಿ ಹಾನಿಯಾಗುತ್ತದೆ. ಯಾರೂ ಹೊಣೆಗಾರಿಕೆ ಹೊರುವುದಿಲ್ಲ” ಎಂದಿದ್ದಾರೆ.
“ಕೃಷಿ ಕಾನೂನುಗಳ ವಿಷಯವನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿರುವುದರಿಂದ ಯಾವುದೇ ಪ್ರತಿಭಟನೆ ನಡೆಸಬಾರದು” ಎಂದು ವೇಣುಗೋಪಾಲ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇಬ್ಬರೂ ವಾದಿಸಿದರು ಎಂದು ಲೈವ್ ಲಾ ವರದಿ ಮಾಡಿದೆ.
“ಉನ್ನತ ಮಟ್ಟದ ಸಾಂವಿಧಾನಿಕ ನ್ಯಾಯಾಂಗದ ಮುಂದೆ ಪ್ರಕರಣ ಇದ್ದಾಗ , ಯಾರೂ ರಸ್ತೆಗಿಳಿಯಬಾರದು. ಅವರು ನಮ್ಮನ್ನು ನಂಬಬೇಕು” ಎಂದು ಮೆಹ್ತಾ ಹೇಳಿದ್ದಾರೆ.
`ಪ್ರತಿಭಟಿಸುವುದು ಸಂಪೂರ್ಣ ಹಕ್ಕು’ ಎಂಬುದನ್ನು ಸುಪ್ರೀಂ ಕೋರ್ಟ್ ಯಾವ ರೀತಿ ನೋಡಬಹುದು, ರೈತರ ಬೇಡಿಕೆಯಾದ ಮೂರು ವಿವಾದಿತ ಕಾಯ್ದೆಗಳ ಸಂಪೂರ್ಣ ರದ್ದು ಬೇಡಿಕೆಯನ್ನು ಯಾವ ರೀತಿ ವಿಶ್ಲೇಷಿಸಬಹುದು ಎಂಬುದು ಸದ್ಯದ ಕುತೂಹಲವಾಗಿದೆ.
ಇದನ್ನೂ ಓದಿರಿ: ಯುಪಿ ರೈತರ ಕೊಲೆ ಖಂಡಿಸಿ ದೇಶಾದ್ಯಂತ ಭುಗಿಲೆದ್ದ ಪ್ರತಿಭಟನೆಗಳು: ಚಿತ್ರಗಳಲ್ಲಿ ನೋಡಿ