ಬಂಗಾಳದಲ್ಲಿ ಬಿಜೆಪಿಗೆ ಮತ್ತೆ ಮತ್ತೆ ಅಘಾತವಾಗುತ್ತಲೆ ಇದೆ. ವಿಧಾನಸಭೆ ಚುನಾವಣೆಗೂ ಮೊದಲು ಅಲ್ಲಿನ ಆಡಳಿತ ಪಕ್ಷವಾದ ಟಿಎಂಸಿಯಿಂದ ಸಚಿವರು, ಶಾಸಕರು ಸೇರಿದಂತೆ ಹಲವಾರು ಕಾರ್ಯಕರ್ತರು ಸಾಮೂಹಿಕವಾಗಿ ಬಿಜೆಪಿಗೆ ಸೇರಿದ್ದರು. ಚುನಾವಣೆ ನಂತರ ಈ ಪಕ್ಷಾಂತರ ಪ್ರವಾಹ ಟಿಎಂಸಿಯತ್ತ ತಿರುಗಿದ್ದು, ಪಕ್ಷ ತೊರೆದ ಶಾಸಕರು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಮತ್ತೇ ತಮ್ಮ ಮಾತೃ ಪಕ್ಷಕ್ಕೆ ಸೇರುತ್ತಿದ್ದಾರೆ.
ಇದೀಗ ಟಿಎಂಸಿಯಿಂದ ಬಿಜೆಪಿಗೆ ಸೇರಿದ್ದ ಮಾಜಿ ಶಾಸಕ ಸಬ್ಯಸಾಚಿ ದತ್ತಾ ಅವರು ಮತ್ತೆ ತವರು ಪಕ್ಷಕ್ಕೆ ಸೇರುತ್ತಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ಟಿಎಂಸಿ ಸೇರಿದ ಬಿಜೆಪಿ ಶಾಸಕ ತನ್ಮಯ್ ಘೋಷ್
ಸಬ್ಯಸಾಚಿ ಅವರು ಪ್ರಸ್ತುತ ಪಶ್ಚಿಮ ಬಂಗಾಳ ಬಿಜೆಪಿಯ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಮತ್ತೆ ತಮ್ಮ ಮಾತೃಪಕ್ಷಕ್ಕೆ ತೆರಳುವ ಬಗ್ಗೆ ಟಿಎಂಸಿಯ ಉನ್ನತ ನಾಯಕತ್ವದೊಂದಿಗೆ ಮಾತನಾಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ. ಅವರು ಇಂದು ತೃಣಮೂಲ ಕಾಂಗ್ರೆಸ್ಗೆ ಮರಳಲಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ಉಲ್ಲೇಖಿಸಿದೆ.
ಈ ಹಿಂದೆ ಟಿಎಂಸಿಯ ಪ್ರಭಾವಿ ನಾಯಕರಾಗಿದ್ದ ಸಬ್ಯಸಾಚಿ, 2019 ರ ದುರ್ಗಾ ಪೂಜೆ(ನವರಾತ್ರಿ)ಗೂ ಮುಂಚೆ ಬಿಜೆಪಿಗೆ ಸೇರಿದ್ದರು. ಇದೀಗ ಈ ವರ್ಷದ ದುರ್ಗಾ ಪೂಜೆಗೂ ಮುಂಚೆ ಟಿಎಂಸಿಯನ್ನು ಸೇರಲಿದ್ದಾರೆ.
ಅವರನ್ನು ಸೇರಿಸುವುದರ ಬಗ್ಗೆ ಪಕ್ಷದ ಒಂದು ವಿಭಾಗ ತೀವ್ರವಾಗಿ ವಿರೂಧಿಸಿತ್ತು ಎಂದು ವರದಿಯಾಗಿತ್ತು. ಅದಾಗ್ಯೂ ಅವರು ಇಂದು ಪಕ್ಷಕ್ಕೆ ಸೇರಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಸಬ್ಯಸಾಚಿ ಅವರು ಹೆಚ್ಚಾಗಿ ಮೌನವಾಗಿದ್ದರು.
ಇದನ್ನೂ ಓದಿ: ತಲೆಬೋಳಿಸಿ, ಗಂಗಾಜಲದಿಂದ ಪ್ರಾಯಶ್ಚಿತ- ಮತ್ತೆ ಟಿಎಂಸಿ ಸೇರಿದ ಬಿಜೆಪಿ ಕಾರ್ಯಕರ್ತರು!