ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸುಮಾರು 200 ಬಿಜೆಪಿ ಕಾರ್ಯಕರ್ತರು ಗಂಗಾ ಜಲದಿಂದ ತಮ್ಮನ್ನು ಶುದ್ದೀಕರಿಸಿ ತೃಣಮೂಲ ಕಾಂಗ್ರೆಸ್ಗೆ ಮರಳಿದ ಘಟನೆ ನಡೆದಿದೆ. ಈ ಹಿಂದೆ ಟಿಎಂಸಿಯಲ್ಲೇ ಇದ್ದ ಅವರು ಚುನಾವಣೆಯ ಸಮಯದಲ್ಲಿ ಬಿಜೆಪಿಗೆ ಸೇರಿದ್ದರು. ಇದೀಗ ಅವರು ತಾವು ಬಿಜೆಪಿಗೆ ಸೇರಿರುವುದು ತಪ್ಪು ಎಂದು ಪ್ರತಿಪಾದಿಸಿ ಟಿಎಂಸಿಗೆ ಮರಳಿದ್ದಾರೆ.
ಬಿಜೆಪಿಗೆ ಸೇರಿದ್ದಕ್ಕೆ ಪ್ರಾಯಶ್ಚಿತವಾಗಿ ಅವರು ತಲೆ ಬೋಳಿಸಿಕೊಂಡು, ಗಂಗಾಜಲವನ್ನು ಸಿಂಪಡಿಸಿ ತಮ್ಮನ್ನು ತಾವು ಶುದ್ದೀಕರಿಸಿ, ಅರಂಬಾಗ್ ಸಂಸದ ಅಪರೂಪಾ ಪೋದ್ದಾರ್ ಅವರ ಸಮ್ಮುಖದಲ್ಲಿ ಟಿಎಂಸಿ ಧ್ವಜವನ್ನು ಹಿಡಿದು ಪಕ್ಷಕ್ಕೆ ಮರಳಿದ್ದಾರೆ.
ಅರಂಬಾಗ್ನಲ್ಲಿರುವ ಬಡವರಿಗೆ ಉಚಿತ ಆಹಾರವನ್ನು ನೀಡುವ ನಿಟ್ಟಿನಲ್ಲಿ ಪಕ್ಷವು ಮಂಗಳವಾರ ಕಾರ್ಯಕ್ರಮವನ್ನು ಆಯೋಜಿಸಿತ್ತು ಎಂದು ಟಿಎಂಸಿ ಸಂಸದ ಅಪರೂಪಾ ಪೋದ್ದಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಲಕ್ಷದ್ವೀಪ: ಆಡಳಿತಾಧಿಕಾರಿಯ 2 ವಿವಾದಾತ್ಮಕ ಆದೇಶಗಳಿಗೆ ಕೇರಳ ಹೈಕೋರ್ಟ್ ತಡೆ
ಈ ಕಾರ್ಯಕ್ರಮದ ಸಂದರ್ಭದಲ್ಲಿ ದಲಿತ ಸಮುದಾಯದ ಕೆಲವರು ಬಂದು ಬಿಜೆಪಿಗೆ ಸೇರುವ ಮೂಲಕ ತಪ್ಪು ಮಾಡಿದ್ದೇವೆ ಎಂದು ಹೇಳಿದ್ದಾರೆ. ಅವರು ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿ ನಂತರ ಮತ್ತೆ ಟಿಎಂಸಿಗೆ ಸೇರಲು ಅವರು ಬಯಸಿದ್ದರು ಎಂದು ಅಪರೂಪಾ ಪೋದ್ದಾರ್ ಹೇಳಿದ್ದಾರೆ.
ಟಿಎಂಸಿ ಸೇರುತ್ತಿರುವ ಹಲವು ಬಿಜೆಪಿ ಕಾರ್ಯಕರ್ತರು
ಇತ್ತೀಚೆಗೆ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಜಯಗಳಿಸಿದಾಗಿನಿಂದ, ಪಶ್ಚಿಮ ಬಂಗಾಳದ ಹಲವಾರು ಜಿಲ್ಲೆಗಳಲ್ಲಿ ನೂರಾರು ಕಾರ್ಯಕರ್ತರು ಪಕ್ಷಕ್ಕೆ ಮರಳುತ್ತಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಪಶ್ಚಿಮ ಬಂಗಾಳದ ಬಿರ್ಭಂನಲ್ಲಿ 50 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ತಮ್ಮನ್ನು ಟಿಎಂಸಿಗೆ ಸೇರಿಸಿಕೊಳ್ಳಬೇಕು ಎಂದು ಪಕ್ಷದ ಕಚೇರಿಯ ಹೊರಗೆ ಧರಣಿ ನಡೆಸಿದ್ದರು. ನಂತರ ಅವರನ್ನು ಟಿಎಂಸಿಗೆ ಸೇರಿಸಿಕೊಳ್ಳಲಾಯಿತು. ಈ ಕಾರ್ಯಕರ್ತರು ತಾವು ಪಕ್ಷ ಬದಲಾಯಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದರು.
Nearly 50 #BJP Workers re-inducted into Trinamool Congress after they staged a dharna outside the TMC office in Birbhum district seeking return to the party. #WestBengal #TNI #Insight #Bengal pic.twitter.com/76kQOcT9bv
— The News Insight (@TNITweet) June 15, 2021
ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ಭುಗಿಲೆದ್ದ ಹಿಂಸಾಚಾರದ ಪರಿಣಾಮವಾಗಿ ಪಕ್ಷದ ಕಾರ್ಯಕರ್ತರು ಟಿಎಂಸಿಗೆ ವಲಸೆ ಹೋಗುತ್ತಿದ್ದಾರೆ ಎಂದು ಬಿಜೆಪಿ ಬಣ್ಣಿಸಿದೆ. ಈ ಕಾರ್ಯಕರ್ತರು ತಮ್ಮ ಮತ್ತು ತಮ್ಮ ಕುಟುಂಬದ ಭಯಕ್ಕಾಗಿ ಮತ್ತೆ ಆಡಳಿತ ಪಕ್ಷಕ್ಕೆ ಸೇರಲು ಬಯಸುತ್ತಿದ್ದಾರೆ ಎಂದು ಅದು ಹೇಳಿದೆ.
ಇದನ್ನೂ ಓದಿ: ಕೊರೊನಾ ಲಸಿಕೆಯಿಂದ ‘ಬಂಜೆತನ’ ಉಂಟಾಗುವುದಿಲ್ಲ: ಒಕ್ಕೂಟ ಸರ್ಕಾರ ಸ್ಪಷ್ಟನೆ