Homeಮುಖಪುಟಬ್ರಿಟಿಷರ ಕರಾಳ ದೇಶದ್ರೋಹ ಕಾನೂನಿಗೆ ಮನ್ನಣೆ; ಇತಿಹಾಸದ ಕಸದಬುಟ್ಟಿಗೆ ಅರ್ಹವಾದ ಕಾನೂನು ಆಯೋಗದ ವರದಿ

ಬ್ರಿಟಿಷರ ಕರಾಳ ದೇಶದ್ರೋಹ ಕಾನೂನಿಗೆ ಮನ್ನಣೆ; ಇತಿಹಾಸದ ಕಸದಬುಟ್ಟಿಗೆ ಅರ್ಹವಾದ ಕಾನೂನು ಆಯೋಗದ ವರದಿ

- Advertisement -
- Advertisement -

ದೇಶದ್ರೋಹ (sedition-ರಾಜದ್ರೋಹ, ರಾಷ್ಟ್ರದ್ರೋಹ) ಕಾಯಿದೆ ಎಂಬುದು ಒಂದು ನಿರಂಕುಶ ಕಾಯಿದೆಯಾಗಿದ್ದು, ಒಂದು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಸ್ಥಾನವಿಲ್ಲ ಎಂಬ ಅಭಿಪ್ರಾಯ, ಆತಂಕಗಳೆಲ್ಲವನ್ನೂ ಕಡೆಗಣಿಸಿ, ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ರಿತುಲಾಲ್ ಅವಸ್ಥಿ ನೇತೃತ್ವದ 22ನೇ ಕಾನೂನು ಆಯೋಗವು ವಿಧಿ “124ಎ”ಯನ್ನು ಉಳಿಸಿಕೊಳ್ಳಲು ಸ್ಪಷ್ಟವಾಗಿ ಶಿಫಾರಸು ಮಾಡಿದೆ.

ದೇಶದ್ರೋಹದ ಆರೋಪ ಹೊರಿಸಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಒಬ್ಬ ಇನ್‌ಸ್ಪೆಕ್ಟರ್ ಹುದ್ದೆಗಿಂತ ಕೆಳಗಿರದ ಅಧಿಕಾರಿಯು ಪ್ರಾಥಮಿಕ ತನಿಖೆ ನಡೆಸಿ ಅನುಮತಿ ನೀಡಿದರೆ ಮಾತ್ರವೇ ಆ ಸಂಬಂಧ ಎಫ್‌ಐಆರ್ ದಾಖಲಿಸಬಹುದು ಎಂಬುದು ಸೇರಿದಂತೆ, ಕೆಲವು ನೆಪಮಾತ್ರದ, ತಥಾಕಥಿತ ಸುರಕ್ಷಾ ಕ್ರಮಗಳನ್ನು ಮಾತ್ರವೇ ಸಲಹೆ ಮಾಡಲಾಗಿದೆ. ಇದಕ್ಕೂ ಹೆಚ್ಚಾಗಿ, ಈ ಕಾನೂನಿನ ಅನ್ವಯ ಸೆರೆವಾಸದ ಅವಧಿಯನ್ನು ಈಗಿರುವ ಮೂರು ವರ್ಷಗಳಿಂದ ಏಳು ವರ್ಷಗಳಿಗೆ ಏರಿಸುವ ತಿದ್ದುಪಡಿಯನ್ನೂ ಶಿಫಾರಸು ಮಾಡಲಾಗಿದೆ.

ರಿತುಲಾಲ್ ಅವಸ್ಥಿ

ಈ ಕರಾಳ ಕಾಯಿದೆಯನ್ನು ಯಾವ ರೀತಿಯಲ್ಲಿ ಕಾರ್ಯಕರ್ತರು, ಪತ್ರಕರ್ತರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರನ್ನು ಕೂಡಾ ಗುರಿ ಮಾಡಲು ಬಳಸಲಾಗುತ್ತಿದೆ ಎಂಬ ಬಗ್ಗೆ ವರದಿಯಲ್ಲಿ ಒಂದು ಪಿಸುಮಾತು ಕೂಡಾ ಇಲ್ಲ. ಅದಕ್ಕೆ ಬದಲಾಗಿ- ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಲ್ಲಿ ಮತ್ತು ಭಾರತದ ಏಕತೆ ಮತ್ತು ಅಖಂಡತೆಯನ್ನು ಕಾಪಾಡಲು ದೇಶದ್ರೋಹದ ಕಾನೂನನ್ನು ಉಳಿಸಿಕೊಳ್ಳಬೇಕು ಎಂದು ಕಾನೂನು ಆಯೋಗವು ವಾದಿಸುವಾಗ- ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಕೇಂದ್ರ ಗೃಹ ಸಚಿವಾಲಯದ ವಾದವನ್ನೇ ಕುರುಡಾಗಿ ಹೊಸರೂಪದಲ್ಲಿ ನೀಡಿದೆ.

ಯುದ್ಧದ ’ಹೊಸ ಗಡಿ’ಗಳೇ (ಇದನ್ನು ಅವರು ನಾಲ್ಕನೇ ತಲೆಮಾರಿನ ಯುದ್ಧತಂತ್ರ ಎಂದು ಕರೆದಿದ್ದಾರೆ) ನಾಗರಿಕ ಸಮಾಜ ಎಂದು ಅಜಿತ್ ದೋವಲ್ ಬಹಿರಂಗವಾಗಿ ಘೋಷಿಸಿದ್ದಾರೆ. ಅದಾಗಿಯೂ, ಸುಪ್ರೀಂಕೋರ್ಟಿನ ತೀರ್ಪುಗಳ ಪ್ರಕಾರ “ರಾಷ್ಟ್ರೀಯ ಭದ್ರತೆ”ಯನ್ನು ಮೂಲಭೂತ ಹಕ್ಕುಗಳ ನಿರ್ಬಂಧಕ್ಕೆ ಒಂದು ಬೋಳು ಅಥವಾ ಟೊಳ್ಳು ಸಮರ್ಥನೆಯಾಗಿ ಹೇರಲು ಸಾಧ್ಯವಿಲ್ಲ.

ವಿಧಿ 19(2) ಅನ್ವಯ ಇರುವ ಮೂಲಭೂತ ಹಕ್ಕುಗಳ ನಿರ್ಬಂಧವು ಪ್ರಮಾಣಾನುಗುಣತೆಯ (proportionality) ಸಿದ್ಧಾಂತಗಳಿಗೆ ಅನುಗುಣವಾಗಿ ಇರಬೇಕು ಎಂಬ- ಅನುರಾಧಾ ಬಾಸಿನ್ ವರ್ಸಸ್ ಭಾರತ ಸರಕಾರ ಪ್ರಕರಣದಲ್ಲಿ- ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಕಾನೂನು ಆಯೋಗವು ಕಡೆಗಣಿಸಿದೆ. ರಾಷ್ಟ್ರೀಯ ಭದ್ರತೆಯ ಆತಂಕಕ್ಕೆ ದೇಶದ್ರೋಹದ ಕಾನೂನು ಪ್ರಮಾಣಾತ್ಮಕ ಪ್ರತಿಕ್ರಿಯೆಯಾಗಿದೆಯೇ? ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆಯೇ- ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಬಲ್ಲ ಇತರ ಕಾನೂನು ಪ್ರತಿಕ್ರಿಯೆಗಳು ಇರಬಹುದೆ? ರಾಷ್ಟ್ರೀಯ ಭದ್ರತೆಯ ಆತಂಕ ಮತ್ತು ಮಾನವ ಹಕ್ಕುಗಳ ಸಮತೋಲನವನ್ನು ನೀವು ಹೇಗೆ ಕಾಯ್ದುಕೊಳ್ಳುತ್ತೀರಿ? ರಾಷ್ಟ್ರೀಯ ಭದ್ರತೆಗಾಗಿ ಸರಕಾರಕ್ಕೆ ದೇಶದ್ರೋಹದ ಕಾನೂನು ಅಗತ್ಯವಿದೆ ಎಂದು ಕುರುಡಾಗಿ ಘೋಷಿಸುವ ಮೊದಲು, ಕಾನೂನು ಆಯೋಗವು ಕೇಳಿಕೊಳ್ಳಬೇಕಾಗಿದ್ದ ಪ್ರಶ್ನೆಗಳಿವು.

ಸುಪ್ರೀಂಕೋರ್ಟ್ ಈ ನಿಲುವನ್ನು ’ಮಾಧ್ಯಮಂ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್’ ವರ್ಸಸ್, ಭಾರತ ಸರಕಾರ ಮತ್ತಿತರರು ಪ್ರಕರಣದಲ್ಲಿ ಪುನರುಚ್ಚರಿಸಿದೆ. ಈ ಪ್ರಕರಣದಲ್ಲಿ ಅದು- “ಮೀಡಿಯಾ ಒನ್” ಎಂಬ ಸುದ್ದಿ ಮತ್ತು ಪ್ರಸಕ್ತ ವ್ಯವಹಾರಗಳ ಟಿವಿ ಚಾನೆಲ್ ನಡೆಸುವುದಕ್ಕಾಗಿ ’ಮಾಧ್ಯಮಂ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್’ ಸಂಸ್ಥೆಗೆ ತಾನು ನೀಡಿದ್ದ ಪರವಾನಗಿಯನ್ನು ಹಿಂತೆಗೆದುಕೊಂಡ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕ್ರಮವನ್ನು ಅಸಿಂಧುಗೊಳಿಸಿತ್ತು. “ಕಾನೂನಿನ ಆಡಳಿತದ ಅಡಿಯಲ್ಲಿ ನಾಗರಿಕರಿಗೆ ಇರುವ ಅವಕಾಶ ಆಥವಾ ಪರಿಹಾರಗಳನ್ನು ನಿರಾಕರಿಸಲು ಸರಕಾರವು ರಾಷ್ಟ್ರೀಯ ಭದ್ರತೆಯನ್ನು ಒಂದು ಸಾಧನವಾಗಿ ಬಳಸುತ್ತಿದೆ” ಎಂದು ಸುಪ್ರೀಂಕೋರ್ಟ್ ತರ್ಕಿಸಿತ್ತು ಮತ್ತು “ಇದು ಕಾನೂನಿನ ಆಡಳಿತದೊಂದಿಗೆ ಸರಿಹೊಂದುವಂತದಲ್ಲ (ಅದಕ್ಕೆ ಅನುಗುಣವಾಗಿಲ್ಲ)” ಎಂದು ಹೇಳಿತ್ತು.

ಅಜಿತ್ ದೋವಲ್

ಶ್ರೇಯಾ ಸಿಂಘಾಲ್ ವರ್ಸಸ್ ಭಾರತ ಸರಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿಗದಿಪಡಿಸಿದ- ಭಿನ್ನಮತ ಮತ್ತು ಪ್ರಜಾಪ್ರಭುತ್ವದ ಸುತ್ತಲಿನ ನ್ಯಾಯಶಾಸ್ತ್ರ ಅಥವಾ ನ್ಯಾಯವಿವೇಚನೆ (jurisprudence)ಯನ್ನು ಕೂಡಾ ಕಾನೂನು ಆಯೋಗವು ಸಂಪೂರ್ಣವಾಗಿ ಅವಗಣಿಸಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಮಾಹಿತಿ ತಂತ್ರಜ್ಞಾನ ಕಾಯಿದೆಯ “ವಿಧಿ 66ಎ”ಯನ್ನು ಕಿತ್ತುಹಾಕಿತ್ತು.

ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯಕ್ಕೆ ಬಂದಾಗ, “ಚರ್ಚೆ, “ಪ್ರತಿಪಾದನೆ ಅಥವಾ ವಕಾಲತ್ತು” ಮತ್ತು “ಪ್ರಚೋದನೆ” ಎಂಬ ಮೂರು ಪರಿಕಲ್ಪನೆಗಳಿವೆ ಎಂದು ನ್ಯಾಯಾಲಯವು ತರ್ಕಿಸಿತ್ತು. “ಕೇವಲ ಚರ್ಚೆ ನಡೆಸುವುದು ಅಥವಾ ಕೆಲವು ನಿರ್ದಿಷ್ಟ ವಿಷಯಗಳಲ್ಲಿ ಪ್ರತಿಪಾದನೆಯು- ಅದೆಷ್ಟೇ ಜನಪ್ರಿಯವಲ್ಲದಿರಲಿ- ಅವುಗಳು ’ವಿಧಿ 19(1)ಎ’ಯ ಹೃದಯದಲ್ಲಿವೆ” ಎಂದು ಅದು ವಿವರಿಸಿತ್ತು. “ಇಂಥ ಚರ್ಚೆ ಇಲ್ಲವೇ ವಕಾಲತ್ತು- ಪ್ರಚೋದನೆಯ ಮಟ್ಟವನ್ನು ತಲುಪಿದಾಗ ಮಾತ್ರವೇ- ಅಂದರೆ, ನಿಷ್ಟುರವಾಗಿ ಸಾರ್ವಜನಿಕ ಅಶಾಂತಿ ಉಂಟುಮಾಡಬಹುದಾದ ಅಥವಾ ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆ, ರಾಷ್ಟ್ರೀಯ ಭದ್ರತೆ ಇತ್ಯಾದಿಗಳಿಗೆ ಧಕ್ಕೆ ತರುವ ಸಾಧ್ಯತೆಯಿರುವ ಅಥವಾ ಧಕ್ಕೆ ತರುವ ಮಾತುಗಳು ಅಥವಾ ಅಭಿವ್ಯಕ್ತಿಯನ್ನು ಮೊಟಕುಗೊಳಿಸುವ ಕಾನೂನೊಂದನ್ನು ಮಾಡಬಹುದು” ಎಂದಿತ್ತು.

ಇದನ್ನೂ ಓದಿ: ‘ತಿದ್ದುಪಡಿಯೊಂದಿಗೆ ದೇಶದ್ರೋಹ ಕಾನೂನು ಉಳಿಸಿಕೊಳ್ಳಿ’: ಕಾನೂನು ಆಯೋಗ ಪ್ರಸ್ತಾಪ

ದೇಶದ್ರೋಹ ಕಾನೂನು ಸರಕಾರದಿಂದ ಹೇಗೆ ಸಶಸ್ತ್ರೀಕರಣಗೊಂಡಿದೆ ಎಂಬ ತಳಮಟ್ಟದ ವಾಸ್ತವವನ್ನು ಕೂಡಾ ಕಾನೂನು ಆಯೋಗವು ಅವಗಣಿಸಿದೆ. “ಆರ್ಟಿಕಲ್ 14” (ಇದು ಸಂವಿಧಾನ, ಕಾನೂನು ಮತ್ತು ತೀರ್ಪುಗಳ ಬಗ್ಗೆ ಆಳವಾದ ಸಂಶೋಧನೆ, ಪ್ರಕರಣ ಅಧ್ಯಯನ ನಡೆಸುವ ವಕೀಲರು, ಪತ್ರಕರ್ತರು, ವಿದ್ವಾಂಸರನ್ನು ಒಳಗೊಂಡ ಜಂಟಿ ಸಂಘಟನೆ ಮತ್ತು ಅಂತರ್ಜಾಲ ಪತ್ರಿಕೆ-ಅನು.) ನಡೆಸಿದ ಅಸಾಮಾನ್ಯ ಸಂಶೋಧನೆಯು- ಅದು “ಕತ್ತಲೆಯ ದಶಕ” ಎಂದು ಕರೆಯಲ್ಪಡುವ- 2010ರಿಂದ 2021ರ ತನಕದ ಅವಧಿಯಲ್ಲಿ ಸರಕಾರಗಳು ನಡೆಸಿದ ದೇಶದ್ರೋಹ ಕಾಯಿದೆಯ ದುರುಪಯೋಗಗಳ ಕುರಿತು ಅಪೂರ್ವವಾದ ಒಳನೋಟ ಮತ್ತು ನಿಖರವಾದ ಅಂಕಿಅಂಶಗಳು ಮತ್ತು ಮಾಹಿತಿಗಳನ್ನು ಒದಗಿಸುತ್ತದೆ. ಈ ಅವಧಿಯಲ್ಲಿ 13,000 ಜನರ ಮೇಲೆ 800 ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ.

ಕಳೆದ 151 ವರ್ಷಗಳಿಂದ ಅಸ್ತಿತ್ವದಲ್ಲಿ ಇರುವುದರ ಹೊರತಾಗಿಯೂ, “ಆರ್ಟಿಕಲ್ 14” ಕಂಡುಕೊಂಡ ಪ್ರಕಾರ, “ಅದರ ಬಳಕೆಯು ಕಳೆದ ದಶಕದಲ್ಲಿ ನಿರ್ದಯವಾಗಿ ಹೆಚ್ಚಿದ್ದು, ತೀರಾ ಇತ್ತೀಚೆಗೆ- ಸಾರ್ವಜನಿಕ ಪ್ರತಿಭಟನೆಗಳು, ಭಿನ್ನಮತ, ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳು, ಸರಕಾರದ ವಿರುದ್ಧ ಟೀಕೆ ಇತ್ಯಾದಿಗಳ ವಿರುದ್ಧ, ಅಷ್ಟೇ ಅಲ್ಲದೇ ಕ್ರಿಕೆಟ್ ಫಲಿತಾಂಶದ ವಿಷಯದಲ್ಲಿ ತೋರಿಸಿದ ವಿರೋಧದಲ್ಲಿ ಕೂಡಾ ದೇಶದ್ರೋಹದ ಕಾನೂನನ್ನು ಬಳಕೆ ಮಾಡಲಾಗಿದೆ” ಎಂದಿದೆ. ಮುಂದುವರಿದು ಅದು- 500ಕ್ಕೂ ಹೆಚ್ಚು ಪ್ರಕರಣಗಳು- 2014 ಮತ್ತು 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ದಾಖಲಾಗಿವೆ ಎಂಬುದನ್ನೂ ಕಂಡುಕೊಂಡಿದೆ.

ಸುಪ್ರೀಂಕೋರ್ಟ್ದೇಶದ್ರೋಹ ಕಾಯಿದೆಗೆ ಒಡ್ಡಲಾಗಿದ್ದ ಸಾಂವಿಧಾನಿಕ ಸವಾಲನ್ನು ವಿಚಾರಣೆ ನಡೆಸುತ್ತಿದ್ದಾಗ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ. ರಮಣ ಈ ಕಾಯಿದೆಯನ್ನು ಗಾಂಧಿ ಮತ್ತು ತಿಲಕರಂಥವರ ವಿರುದ್ಧವೂ ಬಳಸಲಾಗಿತ್ತು ಎಂಬುದನ್ನು ಉಲ್ಲೇಖಿಸಿ, ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದ ನಂತರವೂ ನಮಗೆ ಇಂತಹದ್ದೊಂದು ಕಾನೂನು ಬೇಕೇ ಎಂದು ಪ್ರಶ್ನಿಸಿದ್ದರು. ಹೀಗಿದ್ದರೂ, ಕಾನೂನು ಆಯೋಗವು ರಾಷ್ಟ್ರಪಿತನ ದೇಶದ್ರೋಹದ ವಿಚಾರಣೆಯ ಉಲ್ಲೇಖವನ್ನೂ ಮಾಡಿಲ್ಲ. ಗಾಂಧಿಯವರು ದೇಶದ್ರೋಹ ಕಾನೂನನ್ನು ವಸಾಹತುಶಾಹಿಗಳ ಒಂದು ಅಸ್ತ್ರ ಎಂದು ಪರಿಗಣಿಸಿದ್ದರು ಎಂಬ ವಾಸ್ತವವನ್ನೂ ಅದು ನಿರ್ಲಕ್ಷಿಸಿದೆ. ದೇಶದ್ರೋಹದ ಕುರಿತ ಒಂದು ಅತ್ಯಂತ ಪ್ರಖ್ಯಾತ ಹೇಳಿಕೆಯಲ್ಲಿ ಅವರು, “ದೇಶದ್ರೋಹ ಕಾನೂನು ಭಾರತೀಯ ದಂಡ ಸಂಹಿತೆ (ಐಪಿಸಿ)ಯಲ್ಲಿ ನಾಗರಿಕರ ಸ್ವಾತಂತ್ರ್ಯವನ್ನು ದಮನಿಸಲು ರೂಪಿಸಲಾದ ರಾಜಕೀಯ ವಿಧಿಗಳ ರಾಜಕುಮಾರ” ಎಂದು ಬಣ್ಣಿಸಿದ್ದರು. ಕಾನೂನು ಆಯೋಗದ ಈ ಲೋಪವು ನಮ್ಮ ಇತಿಹಾಸದ ಬಹುಮುಖ್ಯ ಭಾಗವಾಗಿದ್ದು, ಈ ವರದಿಯ ಸ್ವಾತಂತ್ರ್ಯ ವಿರೋಧಿ ಧೋರಣೆಯ ಕುರಿತು ಬಹಳಷ್ಟನ್ನು ಸಾರುತ್ತದೆ.

ಹಳೆಯದನ್ನು ನೆನಪಿಸಿಕೊಳ್ಳಬೇಕು ಎಂದರೆ, ಈ ವರದಿಯ ಕರ್ತೃ ನ್ಯಾ. ಅವಸ್ಥಿ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದವರು. ಇವರೇ, ತರಗತಿಯಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ಎತ್ತಿಹಿಡಿದ ಕುಖ್ಯಾತ ತೀರ್ಪಿನ ರೂವಾರಿ. ಇಂದು ಅವರು – ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳಿಗೆ 124-ಎ ವಿಧಿಯು ಯಾವ ರೀತಿಯಲ್ಲಿ ಅಡ್ಡಿಪಡಿಸುತ್ತದೆ ಎಂಬುದನ್ನು ಅರ್ಥಹೀನವಾಗಿ ಮತ್ತು ಅಸಡ್ಡೆಯಿಂದ ನಿರ್ಲಕ್ಷಿಸುವಂತಹ ಅದೇ ರೀತಿಯ ಸ್ವಾತಂತ್ರ್ಯ ವಿರೋಧಿ ವರದಿಯನ್ನು ಬರೆದಿದ್ದಾರೆ.

ಈ ವರದಿಯು ಇತಿಹಾಸದ ಕಸದಬುಟ್ಟಿಗೆ ಎಸೆಯಲು ಅರ್ಹವಾಗಿದೆ. ಹಿಂದೂ ರಾಷ್ಟ್ರದ ಸಂವಿಧಾನ ವಿರೋಧಿ ಕಲ್ಪನೆಯನ್ನು ವಿರೋಧಿಸುವ ಯಾವುದೇ ಭಿನ್ನಮತದ ಧ್ವನಿಯನ್ನು ಹತ್ತಿಕ್ಕಲು ಬಿಜೆಪಿಯು ಅಷ್ಟೊಂದು ಸುಲಭವಾಗಿ ಬಳಸುತ್ತಿರುವ ದೇಶದ್ರೋಹ ಮತ್ತು ಇತರ ಎಲ್ಲಾ ಕರಾಳ ಕಾಯಿದೆಗಳ ವಿರುದ್ಧ ದೇಶದ ಜನರು ಎದ್ದು ನಿಲ್ಲಬೇಕಾಗಿದೆ.

ಕ್ಲಿಫ್ಟನ್ ಎಸ್. ರೊಸಾರಿಯೋ ಮತ್ತು ಅರವಿಂದ್ ನಾರಾಯಣ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...