ಕನ್ನಡದ ಹಿರಿಯ ನಟಿ, ರಂಗಕರ್ಮಿ ಭಾರ್ಗವಿ ನಾರಾಯಣ್ (84) ಇಂದು ಕೊನೆಯುಸಿರೆಳೆದಿದ್ದಾರೆ. ಸರಳ ಅಭಿನಯದ ಮೂಲಕ ಮನೆಮಾತಾಗಿದ್ದ ಅವರು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಸಂಜೆ ಬೆಂಗಳೂರಿನಲ್ಲಿ 7:30ರ ವೇಳೆಗೆ ಕೊನೆ ಉಸಿರೆಳೆದಿದ್ದಾರೆ.
ಮಂಥನಾ, ಮುಕ್ತಾ ಧಾರಾವಾಹಿಗಳ ಮೂಲಕ ಪ್ರಸಿದ್ಧರಾಗಿದ್ದ ಅವರು, ಎರಡು ಕನಸು, ಪಲ್ಲವಿ ಅನುಪಲ್ಲವಿ, ಬಾ ನಲ್ಲೆ ಮಧುಚಂದ್ರಕೆ, ಮುಯ್ಯಿ, ಅಂತಿಮ ಘಟ್ಟ, ಪ್ರೊಫೆಸರ್ ಹುಚ್ಚೂರಾಯ, ಜಂಬೂ ಸವಾರಿ, ಇದೊಳ್ಳೆ ರಾಮಾಯಣ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
‘ನಾನು, ಭಾರ್ಗವಿ’ ಅವರ ಆತ್ಮಕತೆ. ‘ನಾ ಕಂಡ ನಮ್ಮವರು’ ಎಂಬ ಕೃತಿಯನ್ನೂ ಅವರು ರಚಿಸಿದ್ದಾರೆ. ಭಾರ್ಗವಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಕರ್ನಾಟಕ ರಾಜ್ಯನಾಟಕ ಅಕಾಡೆಮಿ ಪ್ರಶಸ್ತಿ, ಮಂಗಳೂರು ಪ್ರತಿಷ್ಟಿತ ಸಂದೇಶ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರೆತಿವೆ.
ಭಾರ್ಗವಿಯವರು 1938 ಫೆಬ್ರವರಿ 4ರಂದು ನಾಮಗಿರಿಯಮ್ಮ ಮತ್ತು ಎಂ. ರಾಮಸ್ವಾಮಿಯವರಿಗೆ ಜನಿಸಿದರು. ಬಿಎಸ್ಸಿ ಮತ್ತು ಇಂಗ್ಲಿಷ್ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದರು. ‘ಮೇಕಪ್ ನಾಣಿ’ ಎಂದೇ ಹೆಸರಾಗಿದ್ದ ಬೆಳವಾಡಿ ನಂಜುಡಯ್ಯ ನಾರಾಯಣ ಅವರನ್ನು ವಿವಾಹವಾದರು. ನಟ ಪ್ರಕಾಶ್ ಬೆಳವಾಡಿ, ನಟಿ ಸುಧಾ ಬೆಳವಾಡಿ, ಸುಜಾತಾ ಇವರ ಮಕ್ಕಳು.
ಇದನ್ನೂ ಓದಿರಿ: ಸುಡುಗಾಡುಸಿದ್ದರಿಗೆ ಅವಮಾನ: ಸಚಿವ ವಿ.ಸೋಮಣ್ಣ ವಿರುದ್ಧ ದೂರು ದಾಖಲು