ತಮಿಳುನಾಡಿನ ವಿದ್ಯುತ್ ಮತ್ತು ಅಬಕಾರಿ ಸಚಿವ ವಿ ಸೆಂಥಿಲ್ ಬಾಲಾಜಿ ಅವರ ವಿವಾದಾತ್ಮಕ ಬಂಧನ ಪ್ರಕರಣದಲ್ಲಿ ಬಾಲಾಜಿ ಅವರ ಪತ್ನಿ ಸಲ್ಲಿಸಿರುವ ಹೆಬಿಯಸ್ ಕಾರ್ಪಸ್ ಅರ್ಜಿ ಕುರಿತು ಮದ್ರಾಸ್ ಹೈಕೋರ್ಟ್ನ ದ್ವಿಸದಸ್ಯ ಪೀಠವು ಭಿನ್ನಮತದ ತೀರ್ಪು ಪ್ರಕಟಿಸಿದೆ.
ಜೂನ್ 14ರ ಮಧ್ಯ ರಾತ್ರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಿದ್ದಾರೆ. ಸೆಂಥಿಲ್ ಅವರಿಗೆ ಹೃದಯಾಘಾತವಾಗಿದ್ದು, ಬೈಪಾಸ್ ಸರ್ಜನಿ ಮಾಡಲಾಗಿದೆ. ತಮ್ಮ ಪತಿಯನ್ನು ಹುಡುಕಿಕೊಡಿ ಎಂದು ಸೆಂಥಿಲ್ ಅವರ ಪತ್ನಿ ಮದ್ರಾಸ್ ಹೈಕೋರ್ಟ್ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಹೆಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಗೆ ನ್ಯಾಯಮೂರ್ತಿ ನಿಶಾ ಬಾನು ಜಿ ಒಪ್ಪಿಗೆ ನೀಡಿದ್ದರೆ, ನ್ಯಾಯಮೂರ್ತಿ ಭರತ್ ಚಕ್ರವರ್ತಿ ಭಿನ್ನ ತೀರ್ಪು ನೀಡಿದ್ದು, ಬಂಧನದ ಆದೇಶಿಸಿದ ನಂತರ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹಾಗಾಗಿ ಪ್ರಕರಣದ ವಿಚಾರಣೆಯನ್ನು ಎರಡಕ್ಕಿಂತ ಹೆಚ್ಚು ನ್ಯಾಯಾಧೀಶರನ್ನು ಒಳಗೊಂಡ ಪೀಠಕ್ಕೆ ವರ್ಗಾಹಿಸಲು ನಿರ್ಧರಿಸಲಾಗಿದೆ.
ಎಐಎಡಿಎಂಕೆ ಸರ್ಕಾರದಲ್ಲಿ ಬಾಲಾಜಿ ಅವರು ಸಾರಿಗೆ ಸಚಿವರಾಗಿದ್ದರು. 2011 ಮತ್ತು 2016ರ ನಡುವೆ ರಾಜ್ಯದ ಸಾರಿಗೆ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಬಾಲಾಜಿ ಅವರೀಗ ಡಿಎಂಕೆಯಿಂದ ಆರಿಸಿ ಬಂದು ಸಚಿವರಾಗಿದ್ದಾರೆ. 2021ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯ ಮುನ್ನಾದಿನದಂದು ಚೆನ್ನೈ ಪೊಲೀಸರು ಬಾಲಾಜಿ ಮತ್ತು ಇತರ 46 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.
ಮದ್ರಾಸ್ ಹೈಕೋರ್ಟ್ 2022ರಲ್ಲಿ ನೀಡಿದ್ದ ಆದೇಶವನ್ನು ಕಳೆದ ಮೇ ತಿಂಗಳಿನಲ್ಲಿ ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್, ಈ ಪ್ರಕರಣದ ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿತ್ತು. ಇದಾದ ಬೆನ್ನಲ್ಲೇ, ಆದಾಯ ತೆರಿಗೆ ಇಲಾಖೆಯು ಬಾಲಾಜಿ ಅವರ ಮನೆ, ಅವರ ಕೆಲವು ಬೆಂಬಲಿಗರ ಮನೆ ಮತ್ತು ಕಚೇರಿಗಳ ಮೇಲೆ ಎಂಟು ದಿನಗಳ ಕಾಲ ದಾಳಿ ನಡೆಸಿತ್ತು.