Homeಮುಖಪುಟನಮ್ಮನ್ನು ಎದುರು ಹಾಕಿಕೊಂಡರೆ ದಕ್ಕಿಸಿಕೊಳ್ಳುವುದು ನಿಮ್ಮಿಂದ ಸಾಧ್ಯವಿಲ್ಲ: ಸೆಂಥಿಲ್ ಬಾಲಾಜಿ ಬಂಧನದ ಕುರಿತು ಬಿಜೆಪಿಗೆ ತಮಿಳುನಾಡು...

ನಮ್ಮನ್ನು ಎದುರು ಹಾಕಿಕೊಂಡರೆ ದಕ್ಕಿಸಿಕೊಳ್ಳುವುದು ನಿಮ್ಮಿಂದ ಸಾಧ್ಯವಿಲ್ಲ: ಸೆಂಥಿಲ್ ಬಾಲಾಜಿ ಬಂಧನದ ಕುರಿತು ಬಿಜೆಪಿಗೆ ತಮಿಳುನಾಡು ಸಿಎಂ ಸ್ಟಾಲಿನ್ ಎಚ್ಚರಿಕೆ

ಗೋಡೆಗೆ ಎಸೆಯಲ್ಪಟ್ಟ ಚೆಂಡು ಮತ್ತೆ ಮುಖಕ್ಕೆ ಬಡಿಯುವ ರೀತಿಯಲ್ಲೇ ಒಬ್ಬೊಬ್ಬ ಡಿಎಂಕೆ ಕಾರ್ಯಕರ್ತನನ್ನು ಬೆಳೆಸಲಾಗಿದೆ ಎಂದು ಸ್ಟಾಲಿನ್ ಗುಡುಗಿದ್ದಾರೆ.

- Advertisement -
- Advertisement -

ತಮಿಳುನಾಡು ವಿದ್ಯುಚ್ಛಕ್ತಿ ಸಚಿವ ವಿ.ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬುಧವಾರ (ಜೂನ್ 14) ರಂದು ಬಂಧಿಸಿದೆ. ಈ ಕುರಿತು ಸಿಎಂ ಸ್ಟಾಲಿನ್ ವಿಡಿಯೋ ಭಾಷಣ ಮಾಡಿದ್ದಾರೆ. ಅದನ್ನು ಯುವ ಪತ್ರಕರ್ತ ಅಶೋಕ್ ಕುಮಾರ್ ಕನ್ನಡಕ್ಕೆ ಅನುವಾದಿಸಿದ್ದಾರೆ.

ಸಚಿವ ಸೆಂಥಿಲ್ ಬಾಲಾಜಿ ಅವರಿಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನೀಡುತ್ತಿರುವ ಅನ್ಯಾಯದ ಹಿಂಸೆಗಳೆಲ್ಲವೂ ನಿಮಗೇ ಗೊತ್ತು. ಇದೊಂದು ಅಪ್ಪಟ ರಾಜಕೀಯ ಸೇಡಿಕ ಕೃತ್ಯ ಎಂಬುದರಲ್ಲಿ ಯಾರಿಗೂ ಎಳ್ಳಷ್ಟೂ ಸಂದೇಹವಿಲ್ಲ. 10 ವರ್ಷದ ಹಳೆದ ದೂರಿಗೆ ಈಗ ಬಂಧಿಸಿ 18 ಗಂಟೆಗಳ ಕಾಲ ಅಧಿಕಾರಿಗಳು ತಮ್ಮ ಕಷ್ಟಡಿಯಲ್ಲಿಟ್ಟು ಮಾನಸಿಕ ಹಿಂಸೆ ನೀಡಿದ್ದಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಹೀನಗೊಳಿಸಿ ಜೀವಕ್ಕೇ ಅಪಾಯವಾಗುವ ರೀತಿಯಲ್ಲಿ ಹೃಯಯ ಸಂಬಂಧಿ ಖಾಯಿಲೆಗೆ ಈಡುಮಾಡಿದ್ದಾರೆ ಎಂದರೆ ಇದಕ್ಕಿಂತ ಅಪ್ಪಟ ರಾಜಕೀಯ ಸೇಡು ಇರಲು ಸಾಧ್ಯವೇ?

ಸೆಂಥಿಲ್ ಬಾಲಾಜಿ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ಅವರ ವಿರುದ್ಧ ನ್ಯಾಯಾಲಯದ ತೀರ್ಪಿದ್ದರೆ ಅಧಿಕಾರಿಗಳು ಧಾರಾಳವಾಗಿ ಅವರ ವಿಚಾರಣೆ ನಡೆಸಲಿ. ನಾನು ಅದನ್ನು ಯಾವಾಗಲೂ ಬೇಡ ಎನ್ನುವುದಿಲ್ಲ. ಅದನ್ನು ತಪ್ಪು ಎಂದು ನಾನು ಹೇಳುವುದಿಲ್ಲ. ಓಡಿ ಬಚ್ಚಿಟ್ಟುಕೊಳ್ಳುವಷ್ಟು ಸೆಂಥಿಲ್ ಬಾಲಾಜಿ ಸಾಧಾರಣ ವ್ಯಕ್ತಿಯೂ ಅಲ್ಲ. ಬದಲಾಗಿ ಜನರಿಂದ ಆಯ್ಕೆಯಾದ ಶಾಸಕ. ಅದೂ ಐದು ಬಾರಿ ಶಾಸಕರಾಗಿ ಆಯ್ಕೆಯಾದವರು. ಎರಡನೇ ಬಾರಿ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿನಿತ್ಯ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅಂತಹ ವ್ಯಕ್ತಿಯನ್ನು ಉಗ್ರಗಾಮಿಯ ರೀತಿಯಲ್ಲಿ ಕೂಡಿಹಾಕಿ ವಿಚಾರಣೆ ನಡೆಸಬೇಕಾದ ಅಗತ್ಯವೇನಿದೆ?

ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಇಟ್ಟಾಗ ಅವರಿಗೆ ವಿಚಾರಣೆಗೆ ಸೆಂಥಿಲ್ ಬಾಲಾಜಿ ಎಲ್ಲ ಸಹಕಾರ ನೀಡಿದ್ದರು. ಯಾವುದೇ ದಾಖಲೆಗೆ ಸಂಬಂಧಿಸಿದಂತಹ ಪ್ರಶ್ನೆಗಳಿಗೆ ವಿವರಣೆ ನೀಡಿದ್ದರು. ಆನಂತರವೂ 18 ಗಂಟೆಗಳ ಕಾಲ ಅವರನ್ನು ಕೂಡಿಹಾಕಲಾಗಿತ್ತು. ಅವರನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡಿರಲಿಲ್ಲ. ಕೊನೆಯದಾಗಿ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟು ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ ಅತ್ಯಗತ್ಯ ಎಂಬುದು ಖಾತ್ರಿಯಾದ ಮೇಲೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆ ವಿಚಾರದಲ್ಲೂ ಅಧಿಕಾರಿಗಳು ಅಲಕ್ಷ್ಯ ತೋರಿದ್ದರೆ, ಅದು ಅವರ ಜೀವಕ್ಕೇ ಅಪಾಯವಾಗಿ ಪರಿಣಮಿಸಿರುತ್ತಿತ್ತು.

ಇಂತಹದ್ದೊಂದು ವಿಚಾರಣೆ ನಡಸಲು ಈಗೇನು ದಿಢೀರ್ ತುರ್ತು? ಈ ದೇಶವೇನು ಈಗ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿದೆಯೇ? ಜಾರಿ ನಿರ್ದೇಶನಾಲಯದ ನಡವಳಿಕೆಯನ್ನು ಗಮನಿಸಿದರೆ ಈ ಸಂದೇಹ ಸ್ಪಷ್ಟವಾಗುತ್ತದೆ. ಸರಳವಾಗಿ ಹೇಳಬೇಕು ಅಂದ್ರೆ ಕೇಂದ್ರ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮುಂದಾಳತ್ವದಲ್ಲಿ ಅವರ ರಾಜಕಾರಣವನ್ನು ನಡೆಸುತ್ತಿದೆ. ಜನರ ನಡುವಿನ ರಾಜಕಾರಣಕ್ಕೆ ಬಿಜೆಪಿ ತಯಾರಿದ್ದಂತೆ ಕಾಣಿಸುತ್ತಿಲ್ಲ. ಬಿಜೆಪಿಯನ್ನು ನಂಬಲು ಜನರೂ ಸಹ ತಯಾರಿಲ್ಲ. ಜನರಿಗೋಸ್ಕರ ರಾಜಕಾರಣ ಮಾಡಿದರೆ ಮಾತ್ರ ಜನ ಬಿಜೆಪಿಯನ್ನು ನಂಬುತ್ತಾರೆ, ಹಾಗೆ ನೋಡಿದ್ರೆ ಬಿಜೆಪಿ ರಾಜಕಾರಣ ಎಂಬುದು ಖಡಾಖಂಡಿತವಾಗಿ ಜನವಿರೋಧಿ ರಾಜಕಾರಣ ಎಂಬುದರಲ್ಲಿ ಸಂಶಯವಿಲ್ಲ.

ಸೈದ್ಧಾಂತಿಕವಾಗಿ, ರಾಜಕೀಯವಾಗಿ ಚುನಾವಣೆಯಲ್ಲಿ ಎದುರುಗೊಳ್ಳಲು ಶಕ್ತಿ ಇಲ್ಲದೆ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಮೂಲಕ ಹೆದರಿಸಿ ಬ್ಯ್ಲಾಕ್ ಮೇಲ್ ರಾಜಕಾರಣ ಮಾಡುವುದು ಬಿಜೆಪಿ ಮಾದರಿ. ಇದೊಂದೇ ಅವರಿಗೆ ಗೊತ್ತಿರುವ ಏಕೈಕ ಮಾದರಿ. ಇಂತಹ ಪ್ರಜಾಪ್ರಭುತ್ವ ವಿರೋಧಿ ಮಾದರಿಯನ್ನೇ ಬಿಜೆಪಿ ಭಾರತದಾದ್ಯಂತ ಫಾಲೋ ಮಾಡ್ತಾ ಇದೆ. ಒಂದೇ ಸ್ಕ್ರಿಪ್ಟನ್ನ ಬೇರೆ ಬೇರೆ ಬಿಜೆಪಿಯೇತರ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಡಬ್ಬಿಂಗ್ ಮಾಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ವಿರೋಧಿ ಮಾಡುತ್ತಿದೆಯಾ, ಹಾಗಾದರೆ ಆ ಪಕ್ಷದ ಮುಖ್ಯಸ್ಥರಾದ ಸಂಜಯ್ ರಾವತ್ ಅವರನ್ನು ಬಂಧಿಸಬೇಕು. ಎಎಪಿ ಪಕ್ಷ ಬಿಜೆಪಿಯನ್ನು ವಿರೋಧಿಸುತ್ತಿದೆಯಾ? ಹಾಗಾದ್ರೆ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಬೇಕು. ರಾಷ್ಟ್ರೀಯ ಜನತಾದಳ ವಿರೋಧಿಸುತ್ತಿದೆಯಾ? ಹಾಗಾದ್ರೆ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಸಂಬಂಧಿಸಿದ ಎಲ್ಲ ಜಾಗಗಳಲ್ಲೂ ರೈಡ್ ಮಾಡಬೇಕು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರೋಧಿಸ್ತಾ ಇದ್ದಾರ? ಹಾಗಾದ್ರೆ ಅವರ ಪಕ್ಷದ ಎಲ್ಲ ನಾಯಕರ ಮನೆ ಕಚೇರಿಗಳ ಮೇಲೆ ರೈಡ್ ಮಾಡಬೇಕು.

ಕರ್ನಾಟಕದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರನ್ನೂ ಹೀಗೆ ಸೇಡಿನ ಕಾರಣಕ್ಕೆ ಬಿಜೆಪಿ ಬಂಧಿಸಿತ್ತು. ಆದರೆ, ಅವರು ಜನರ ನಡುವೆ ರಾಜಕಾರಣ ಮಾಡಿ ಅವರಿಂದಲೇ ಆಯ್ಕೆಯಾಗಿ ಈಗ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ. ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರನ್ನು ಬಂಧಿಸಿದ್ದರು. ತೆಲಂಗಾಣದಲ್ಲಿ ಸಿಎಂ ಆಪ್ತರ ಮನೆಗಳ ಮೇಲೆ ರೈಡು, ಛತ್ತೀಸ್‌ಘಡದಲ್ಲಿ ಸಿಎಂ ಆಪ್ತರ ಮನೆಗಳ ಮೇಲೆ ರೈಡ್ ಮಾಡಲಾಯ್ತು. ಆದರೆ, ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲೆಲ್ಲ ರೈಡ್ ನಡೆಯಲ್ಲ. ಯಾಕಂದ್ರೆ ಅಲ್ಲೆಲ್ಲ ಅಧಿಕಾರದಲ್ಲಿರುವವರು ಶುದ್ಧಹಸ್ತರಾದ ಬಿಜೆಪಿ ಅಲ್ಲವೇ??

ಭಾರತ ಒಕ್ಕೂಟದಲ್ಲಿ ಇಂತಹ ರಾಜ್ಯಗಳೂ ಇವೆ ಎಂಬ ವಿಷಯವೇ ಪಾಪ ಸಿಬಿಐ ಐಟಿ ಮತ್ತು ಇಡಿ ಅಧಿಕಾರಿಗಳಿಗೆ ಗೊತ್ತೇ ಇಲ್ಲ. ಬಿಜೆಪಿ ಪಕ್ಷವನ್ನು ವಿರೋಧಿಸುವ ಎಲ್ಲ ಪ್ರಮುಖ ನಾಯಕರುಗಳ ಮನೆಗಳ ಒಳಗೂ ಬಿಜೆಪಿ ಪ್ರಾಯೋಜಿತ ಸಂಸ್ಥೆಗಳು ರೈಡ್ ಮಾಡಿಯಾಯ್ತು. ಇಲ್ಲ ಅಂದ್ರೆ ಎಡಿಎಂಕೆ ಪಕ್ಷದ ನಾಯಕರ ರೀತಿಯ ಗುಲಾಮರಿಗೆ ಈ ರೈಡ್ ಭಯ ತೋರಿಸಿ ಮಂಡಿಯೂರಿಸಿಬಿಡ್ತಾರೆ. ಬಿಜೆಪಿ ಅಧಿಕಾರಕ್ಕೆ ಬರುವ ಮುಂಚಿನ 10 ವರ್ಷದಲ್ಲಿ ಜಾರಿ ನಿರ್ದೇಶನಾಲಯ ಒಟ್ಟಾರೆ ಮಾಡಿದ ರೈಡುಗಳ ಸಂಖ್ಯೆ ಕೇವಲ 112 ಮಾತ್ರ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದೇ ಸಂಸ್ಥೆ ವಿರೋಧ ಪಕ್ಷಗಳ ನಾಯಕರ ವಿರುದ್ಧ ಕನಿಷ್ಟ 3000 ರೈಡ್ ಮಾಡಿದ್ದಾರೆ.

ಆದರೆ, ಈ ರೈಡುಗಳ ಪೈಕಿ ವಿರೋಧ ಪಕ್ಷಗಳ ನಾಯಕರುಗಳ ವಿರುದ್ಧ ಆರೋಪ ಸಾಬೀತಾಗಿರುವುದು ಕೇವಲ ಶೇ. 0.05 ಮಾತ್ರ. ಮತ್ತಂತೆ ಎಲ್ಲ ರೈಡುಗಳನ್ನು ಕೇವಲ ಹೆದರಿಸಲು ಬ್ಲ್ಯಾಕ್‌ಮೇಲ್ ಮಾಡಲೆಂದೆ ನಡೆಸಲಾಗಿದೆ. ಹೀಗೆ ರೈಡ್ ಬೆದರಿಕೆಗಳಿಗೆ ಒಳಗಾಗಿ ಬಿಜೆಪಿಗೆ ಸೇರ್ಪಡೆಯಾದ ನಾಯಕರು ಪುರುಷೋತ್ತಮರಾಗಿ ಬಿಡುತ್ತಾರೆ. ಅಂತಹ ಪುರುಷೋತ್ತಮರುಗಳ ಮೇಲಿನ ಪ್ರಕರಣಗಳೆಲ್ಲ ಕೈಬಿಡಲಾಗಿದೆ ಎಂದು ಇತ್ತೀಚೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅಷ್ಟೇ ಏಕೆ ತಮಿಳುನಾಡಿನ ಎಡಿಎಂಕೆ ಪಕ್ಷವೇ ಅದಕ್ಕೊಂದು ಉತ್ತಮ ಉದಾಹರಣೆ. ಇಂತಹ ರೈಡುಗಳ ನಿಜವಾದ ಉದ್ದೇಶ ಕೂಡ ಇದೆ ಆಗಿದೆ.

ತಮಿಳುನಾಡಿನಲ್ಲಿ ಗುಲಾಮಿ ನಾಯಕ ಯಡಪ್ಪಾಡಿ ಪಳನಿಸ್ವಾಮಿ ನೇತೃತ್ವದಲ್ಲಿ ಎಡಿಎಂಕೆ ಎಂಬ ಒಂದು ಪಕ್ಷ ಇದೆ. ಈ ಇಡೀ ಪಕ್ಷವನ್ನೇ ತನ್ನ ಗುಲಾಮರನ್ನಾಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಇದೇ ಬಿಜೆಪಿ ಸರ್ಕಾರ 2016-17 ಮತ್ತು 2018ರಲ್ಲಿ ಅನೇಕ ರೈಡುಗಳನ್ನು ನಡೆಸಿತ್ತು. ರೈಡು ನಡೆಸಿದ್ದು ಓಕೆ. ಈ ಪೈಕಿ ಯಾವುದಾದರು ಪ್ರಕರಣವನ್ನು ನ್ಯಾಯಾಲಯದ ಬಾಗಿಲಿಗೆ ಒಯ್ದರಾ? ಚಾರ್ಚ್‌‌ಶೀಟ್ ದಾಖಲು ಮಾಡಿದ್ರಾ? ಅಪರಾಧಿಗಳಿಗೆ ಶಿಕ್ಷೆ ಕೊಡಿಸಿದ್ರಾ? ಅಂತ ನೋಡಿದ್ರೆ ಅದ್ಯಾವುದನ್ನೂ ಮಾಡಲಿಲ್ಲ.

ತಮಿಳುನಾಡಿನ ಲೋಕಾಯುಕ್ತ ಇಲಾಖೆಯಲ್ಲಿ ಎಡಿಎಂಕೆ ಪಕ್ಷದ ಅನೇಕ ಮಾಜಿ ಸಚಿವರು ಶಾಸಕರ ಮೇಲೆ ದೂರುಗಳಿವೆ. ಈ ಪೈಕಿ ಅನೇಕ ಸಚಿವರ ಮನೆಗಳ ಮೇಲೆ ನಾವು ರೈಡು ಮಾಡಿ ಪ್ರಕರಣಗಳನ್ನು ದಾಖಲಿಸುತ್ತಿದ್ದೇವೆ. ಈ ಬಗ್ಗೆ ವಿಚಾರಣೆ ನಡೆಸಲು ಈ ಜಾರಿ ನಿರ್ದೇಶನಾಲಯ ಸಿಬಿಐ ಏಕೆ ಬರುತ್ತಿಲ್ಲ? ಈ ಬಗ್ಗೆ ಎಲ್ಲ ದಾಖಲೆಗಳನ್ನೂ ನೀಡಲು ನಾವು ಸಿದ್ದರಿದ್ದೇವೆ. ಹೀಗಾಗಿ ಎಡಿಎಂಕೆ ನಾಯಕರ ಮನೆಗಳ ಮೇಲೂ ರೈಡು ನಡೆಸಲು ಇವರು ಸಿದ್ದರಿದ್ದಾರ?

ಎಡಿಎಂಕೆ ಪಕ್ಷದ ಈ ಎಲ್ಲ ಭ್ರಷ್ಟ ಹೆಗ್ಗಣಗಳನ್ನೇ ಕೇಂದ್ರ ಸಚಿವ ಅಮಿತ್ ಶಾ ಕಳೆದ ತಿಂಗಳು ದೆಹಲಿಯಲ್ಲಿ ಭೇಟಿಯಾಗಿದ್ದು. ಇಂತಹ ಅಮಿತ್ ಶಾ ಭ್ರಷ್ಟಾಚಾರದ ವಿರುದ್ಧ ತಮಿಳುನಾಡಿಗೆ ಬಂದು ಮಾತನಾಡಿ ಹೋಗಿದ್ದಾರೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಮರಣದ ನಂತರ ಇಡೀ ಎಡಿಎಂಕೆ ಪಕ್ಷವನ್ನು ತನ್ನ ಗುಲಾಮರನ್ನಾಗಿಸಿಕೊಳ್ಳುವ ಸಲುವಾಗಿ ಬಿಜೆಪಿ ಸಿಬಿಐ, ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡಿತ್ತು. ಪರಿಣಾಮ ಇದೀಗ ಅವರೂ ಹೆದರಿದ್ದು, ಬಿಜೆಪಿಯ ಕಾಲಿನ ಅಡಿಗೆ ಬಿದ್ದಿದ್ದಾರೆ. ಇಂತಹ ಎಡಪ್ಪಾಡಿ ಪಳನಿಸ್ವಾಮಿ ಸಚಿವ ಸೆಂಥಿಲ್ ಬಾಲಾಜಿ ಬಗ್ಗೆ ಆರೋಪಿಸುತ್ತಾರೆ.

ಆದ್ರೆ, 2021ರ ತನಕ ಅವರೇ ಅಧಿಕಾರದಲ್ಲಿದ್ದರು. ಆಗೆಲ್ಲ ಏಕೆ ಇವರ ಮೇಲೆ ರೈಡು ಮಾಡಲಿಲ್ಲ. ಈಗ ಬಾಯಿಗೆ ಬಂದಂತೆ ಮಾತನಾಡುತ್ತಿರುವವರನ್ನು ಆಗ ರೈಡು ಮಾಡದಂತೆ ತಡೆದದ್ದಾವುದೂ ಏನು? 4000 ಕೋಟಿ ರೂ ಮೌಲ್ಯದ ಟೆಂಡರ್ ಅನ್ನು ತಮ್ಮ ಕುಟುಂಬಸ್ಥರಿಗೆ ನೀಡಲು ಮುಂದಾಗಿ ಕೊನೆಗೆ ನ್ಯಾಯಾಲಯವೇ ಮಧ್ಯಪ್ರವೇಶಿಸಿ ತನಿಖೆಯನ್ನು ಸಿಬಿಐಗೆ ವಹಿಸಿದ್ದು ಇದೇ ಎಡಪ್ಪಾಡಿ ಪಳನಿಸ್ವಾಮಿ ವಿರುದ್ದವೇ ಅಲ್ವ? ಕೂಡಲೇ ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಟ‌ಗೆ ಓಡಿದ ಅಯೋಗ್ಯ ಶಿಖಾಮಣಿ ಈ ಪಳನಿಸ್ವಾಮಿ. ಇವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ ಅರ್ಹತೆಯೂ ಇಲ್ಲ.

ಪಳನಿಸ್ವಾಮಿ ರೀತಿಯ ಎಡಿಎಂಕೆ ಗುಲಾಮರ ರೀತಿಯಲ್ಲೇ ಉಳಿದ ಪಕ್ಷಗಳನ್ನೂ ಬಿಜೆಪಿ ಎಣಿಸುತ್ತಿದೆ. ಆದರೆ, ಡಿಎಂಕೆ ಎದುರು ಬಿಜೆಪಿಯ ಇಂತಹ ಯಾವುದೇ ಆಟ ನಡೆಯುವುದಿಲ್ಲ. ಇವರ ಗೊಡ್ಡು ಬೆದರಿಕೆಗಳಿಗೆಲ್ಲ ಡಿಎಂಕೆ ಹೆದರುವ ಪ್ರಶ್ನೆಯೇ ಇಲ್ಲ. ಗೋಡೆಗೆ ಎಸೆಯಲ್ಪಟ್ಟ ಚೆಂಡು ಮತ್ತೆ ಮುಖಕ್ಕೆ ಬಡಿಯುವ ರೀತಿಯಲ್ಲೇ ಒಬ್ಬೊಬ್ಬ ಡಿಎಂಕೆ ಕಾರ್ಯಕರ್ತನನ್ನು ಬೆಳೆಸಲಾಗಿದೆ.

ನಿನ್ನೆಯಿಂದ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಾಡಿಸುತ್ತಿದ್ದೇನೆ. ಡಿಎಂಕೆ ಪಕ್ಷದ ಹಲವು ಸಹೋದರರು ನಮ್ಮ ನಾಯಕರಾದ ದಿವಂಗತ ಮಾಜಿ ಸಿಎಂ ಕರುಣಾನಿಧಿ ಅವರ ಹಳೆಯ ವಿಡಿಯೋವೊಂದನ್ನು ಶೇರ್ ಮಾಡುತ್ತಿದ್ದಾರೆ. “ನನ್ನನ್ನು ಯಾರೂ ಹೊಡೆಯಲಾಗಲ್ಲ. ನೆನಪಿಟ್ಟುಕೋ ನಾನು ತಿರುಗಿ ಹೊಡೆದರೇ ನಿಮ್ಮಿಂದ ಅದನ್ನು ತಡೆದುಕೊಳ್ಳುವುದು ಸಾಧ್ಯವಾಗಲ್ಲ” ಎಂದು ಕಲೈಜ್ಞರ್ ಮಾತನಾಡಿದ್ದ ವಿಡಿಯೋ ಒಂದು ಈಗ ವೈರಲ್ ಆಗುತ್ತಿದೆ.

ಅಂತಹ ಓರ್ವ ನಾಯಕನಿಂದ ಬೆಳೆಸಲ್ಪಟ್ಟವರು ನಾವು. ಇಂತಹ ಎಷ್ಟೋ ಗೊಡ್ಡು ಬೆದರಿಕೆಗಳನ್ನು ಎದುರುಗೊಂಡವರು ನಾವು. ನಮಗೆಂದು ಪ್ರತ್ಯೇಕ ರಾಜಕೀಯ ಸಿದ್ದಾಂತ ನೀತಿ ನಿಯಮಗಳಿವೆ. ಮತೀಯವಾದ, ಜಾತೀವಾದ, ಸನಾತನವಾದ, ಹುಟ್ಟಿನಿಂದ ಶ್ರೇಷ್ಟ ಕನಿಷ್ಟ, ಮೇಲು ಕೀಳು ಎಂಬಂತಹ ಮಾನವ ಸಮ ಸಮಾಜಕ್ಕೆ ವಿರೋಧವಾದ ಮೂಢನಂಬಿಕೆಗಳಿಗೆ ವಿರುದ್ಧವಾದವರು ನಾವು.

ಇಂತಹ ಸಮಾಜ ವಿರೋಧಿ ಶಕ್ತಿಗಳನ್ನು ರಾಜಕೀಯ ಕಣದಲ್ಲಿ ಎದುರುಗೊಳ್ಳುವುದೇ ನಮ್ಮ ವಾಡಿಕೆ. ವಾದ-ವಿವಾದಗಳಿಗೆ ನಾವು ತಯಾರಾಗಿದ್ದೇವೆ. ಆದರೆ, ಅದನ್ನು ಬಿಟ್ಟು ಹೆದರಿಸಿ ಬೆದರಿಸಿ ನಮ್ಮ ಗೆಲ್ಲಲು ಮುಂದಾದರೆ ಯಾರ ಎದುರು ತಲೆಬಾಗಿಸುವ ಪ್ರಶ್ನೆಯೇ ಇಲ್ಲ. ಬದಲಾಗಿ ತಲೆ ಎತ್ತಿ ನಿಲ್ಲುತ್ತೇವೆ. ಮುಖಾಮುಖಿ ಎದುರುಗೊಳ್ಳುತ್ತೇವೆ.

ನಾವು ಕೇವಲ ಅಧಿಕಾರಕ್ಕಾಗಿ ಮಾತ್ರ ಪಕ್ಷವನ್ನು ನಡೆಸುವವರಲ್ಲ, ಸಿದ್ದಾಂತಕ್ಕಾಗಿ ನಡೆಸುವವರು. ನಾವು ನಂಬಿದ ಸಿದ್ದಾಂತಗಳನ್ನು ಉಳಿಸಿಕೊಳ್ಳುವ ಸಲುವಾಗಿಯೇ ನಾವು ಕೊನೆಯವರೆಗೆ ಹೋರಾಡುತ್ತೇವೆ. ದ್ರಾವಿಡ ಮುನ್ನೇಟ್ರ ಕಳಗಂ ಇತಿಹಾಸವೇ ಇದಕ್ಕೆ ಸಾಕ್ಷಿ. ಅದಿಪತ್ಯ ಮನಸ್ಥಿತಿಯೊಂದಿಗೆ ನಮ್ಮನ್ನು ಎದುರಿಸಿದರೆ, ನಾವು ಸೈದ್ಧಾಂತಿಕ ಪಡೆಯ ಜೊತೆಗೆ ಅದನ್ನು ತಡೆಯುತ್ತೇವೆ. ಹಿಂದಿ ವಿರೋಧಿ ಹೋರಾಟ, ಎಮರ್ಜೆನ್ಸಿ ಕಾಲ ಎಂದು ನಾವು ನಡೆಸದ ಹೋರಾಟಗಳಿಲ್ಲ. ಕಳೆದೊಂದು ಶತಮಾನಗಳಿಂದ ಡಿಎಂಕೆ ನಡೆಸಿದ ಹೋರಾಟಗಳ ತೀವ್ರತೆ ಏನು ಎಂದು ಒಮ್ಮೆಯಾದರೂ ಇತಿಹಾಸದ ಪುಟಗಳನ್ನು ತಿರುವಿ ನೋಡಿ. ಇಲ್ಲಾಂದ್ರೆ ದೆಹಲಿಯಲ್ಲಿರುವ ನಿಮ್ಮ ಹಿರಿಯ ನಾಯಕರ ಬಳಿ ಕೇಳಿ ತಿಳಿದುಕೊಳ್ಳಿ.

ನಮ್ಮನ್ನು ಸುಮ್ಮನೆ ಎದುರುಹಾಕಿಕೊಳ್ಳಬೇಡಿ. ಡಿಎಂಕೆ ಪಕ್ಷವನ್ನೋ, ನಮ್ಮ ಪಕ್ಷದ ಕಾರ್ಯಕರ್ತರನ್ನೋ ಒಮ್ಮೆ ಎದುರು ಹಾಕಿಕೊಂಡರೆ ಅದನ್ನು ದಕ್ಕಿಸಿಕೊಳ್ಳುವುದು ನಿಮ್ಮಿಂದ ಸಾಧ್ಯವಿಲ್ಲ. ನಮಗೂ ಎಲ್ಲ ರೀತಿಯ ರಾಜಕಾರಣ ಗೊತ್ತು. ಇದು ಬೆದರಿಕೆ ಅಲ್ಲ, ಎಚ್ಚರಿಕೆ! ಹೀಗಾಗಿ ಒಕ್ಕೂಟ ಸರ್ಕಾರವನ್ನು ಮುನ್ನಡೆಸುವ ಜವಾಬ್ದಾರಿಯಲ್ಲಿರುವ ಬಿಜೆಪಿ ಸ್ವಲ್ಪವಾದರೂ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ನಿರ್ವಹಿಸಲಿ. ಇಂತಹ ಗೊಡ್ಡು ಬೆದರಿಕೆಗಳನ್ನು ನಿಲ್ಲಿಸಲಿ ಎಂದು ನಾನು ಕೇಳಿಕೊಳ್ಳುತ್ತೇನೆ.

ನನ್ನ ಜೀವಕ್ಕೂ ಮಿಗಿಲಾದ ಕಲೈಜ್ಞರ್ ಕರುಣಾನಿಧಿ ಅವರ ಪ್ರೀತಿಯ ಸಹೋದರರೆ ನಿಮಗಾಗಿ ನಾನಿದ್ದೇನೆ. ನನಗಾಗಿ ನೀವಿದ್ದೀರಿ. ಧನ್ಯವಾದಗಳು.

ಇದನ್ನೂ ಓದಿ: ಇ.ಡಿ. ವಶಕ್ಕೆ ತಮಿಳುನಾಡು ಸಚಿವ ಬಾಲಾಜಿ; ದುರುದ್ದೇಶಪೂರಿತ ಎಂದ ಡಿಎಂಕೆ, ಕಾಂಗ್ರೆಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...