ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ “ದೆಹಲಿಯ ಶಾಹೀನ್ ಬಾಗ್ ಮತ್ತು ಕೋಲ್ಕತ್ತಾದ ಪಾರ್ಕ್ ಸರ್ಕಸ್ನಲ್ಲಿನ ಪ್ರತಿಭಟನಾಕಾರರು ಬಡವರಾಗಿದ್ದಾರೆ ,ಇವರು ಹಣಕ್ಕಾಗಿ ರಸ್ತೆಯಲ್ಲಿ ಕುಳಿತಿದ್ದಾರೆ” ಎಂದು ಪುನ: ವಿವಾದವೆಬ್ಬಿಸಿದ್ದಾರೆ.
“ದೆಹಲಿಯ ಶಾಹೀನ್ ಬಾಗ್ ಹಾಗೂ ಕೊಲ್ಕತ್ತಾದ ಪಾರ್ಕ್ ಸರ್ಕಸ್ ನಲ್ಲಿನ ಪ್ರತಿಭಟನಾಕಾರರು ಬಡವರು ಮತ್ತು ಅನಕ್ಷರಸ್ಥರಾಗಿದ್ದಾರೆ. ಏನೂ ತಿಳಿಯದ ಬಡ ಜನರನ್ನು ರಸ್ತೆಗಳಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿದೆ. ಅದಕ್ಕೆ ಪ್ರತಿಯಾಗಿ ಅವರು ಪ್ರತಿದಿನ ಹಣವನ್ನು ಪಡೆಯುತ್ತಿದ್ದಾರೆ. ವಿದೇಶಿ ನಿಧಿಯಿಂದ ಖರೀದಿಸಿದ ಬಿರಿಯಾನಿಯನ್ನು ಅವರಿಗೆ ನೀಡಲಾಗುತ್ತಿದೆ. ಜನರು ತಮ್ಮೊಂದಿಗಿದ್ದಾರೆ ಎಂದು ತೋರಿಸಲು ಬೇಕಾಗಿ ಇದನ್ನು ಮಾಡಲಾಗುತ್ತಿದೆ ”ಎಂದು ಕೋಲ್ಕತ್ತಾದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಘೋಷ್ ಹೇಳಿದ್ದಾರೆ.
“ಅದು ದೆಹಲಿಯ ಶಾಹೀನ್ ಬಾಗ್ ಆಗಿರಲಿ ಅಥವಾ ಕೋಲ್ಕತ್ತಾದ ಪಾರ್ಕ್ ಸರ್ಕಸ್ ಆಗಿರಲಿ, ಚಿತ್ರಣ ಎಲ್ಲೆಡೆಯೂ ಒಂದೇ ಆಗಿರುತ್ತದೆ. ಬೃಂದಾ ಕಾರಟ್ ಮತ್ತು ಪಿ ಚಿದಂಬರಂ ಅವರಂತಹ ಜನರು ದೆಹಲಿ ಅಥವಾ ಕೋಲ್ಕತ್ತಾಗೆ ಹೋದಾಗ ಈ ಸಭೆಗಳಿಗೆ ಹಾಜರಾಗುತ್ತಾರೆ. ಕೆಲವು ಅನಕ್ಷರಸ್ಥ ಮಹಿಳೆಯರು ತಮ್ಮ ತೊಡೆಯ ಮೇಲೆ ಶಿಶುಗಳನ್ನು ಇಟ್ಟುಕೊಂಡಿದ್ದಾರೆ. ಆದರೆ ಅವರು ಕೇವಲ ಪ್ರೇಕ್ಷಕರಷ್ಟೇ” ಎಂದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ಧ ಮಹಿಳೆಯರು ಡಿಸೆಂಬರ್ 15 ಮತ್ತು ಜನವರಿ 7 ರಿಂದ ಶಾಹೀನ್ ಬಾಗ್ ಮತ್ತು ಪಾರ್ಕ್ ಸರ್ಕಸ್ನಲ್ಲಿ ಧರಣಿ ನಡೆಸುತ್ತಿದ್ದಾರೆ. ಶಾಹೀನ್ ಬಾಗ್ ಪ್ರತಿಭಟನೆಯೂ ಪಾರ್ಕ್ ಸರ್ಕಸ್ ಸೇರಿದಂತೆ ದೇಶಾದ್ಯಂತ ಅನೇಕ ಧರಣಿಗಳಿಗೆ ಪ್ರೇರಣೆ ನೀಡಿದೆ.
ಘೋಷ್ ಈ ಹಿಂದೆ “ಶಹೀನ್ ಬಾಗ್ ಪ್ರತಿಭಟನಾಕಾರರಿಗೆ ಯಾರು ಹಣ ನೀಡುತ್ತಿದ್ದಾರೆ ಮತ್ತು ದೆಹಲಿಯ ಶೀತದಲ್ಲಿ ಕುಳಿತಿದ್ದರೂ ಅವರಲ್ಲಿ ಯಾರೂ ಸತ್ತಿಲ್ಲ, ಹೇಗೆ ?” ಎಂಬ ಹೇಳಿಕೆ ನೀಡಿದ್ದರು.
ಮೇದಿನಿಪುರದ ಬಿಜೆಪಿ ಸಂಸದರಾದ ಘೋಷ್ ಮೇಲೆ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿತ್ತು.