ಸಾಮೂಹಿಕ ಹಲ್ಲೆಯಂಥ ಪ್ರಕರಣಗಳನ್ನು ವಿರೋಧಿಸಿ, ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದಿದ್ದ ಸೆಲೆಬ್ರಿಟಿಗಳ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಖಂಡಿಸಿದ್ದಾರೆ. ತರೂರ್ ಕೂಡ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು ಇದೇ ರೀತಿಯ ಪತ್ರವನ್ನು ಪ್ರಜಾಪ್ರಭುತ್ವ ಉಳಿಯಲು ಬಯಸುವವರೆಲ್ಲಾ ಬರೆಯಬೇಕೆಂದು ಕರೆ ನೀಡಿದ್ದಾರೆ.
ಟ್ವಿಟ್ಟರ್ನಲ್ಲಿ ಎರಡು ಪುಟಗಳ ಮನವಿ ಪತ್ರವೊಂದನ್ನು ಟ್ವೀಟ್ ಮಾಡಿರುವ ತರೂರ್, 49 ಸೆಲೆಬ್ರಿಟಿಗಳ ಪತ್ರ ಪ್ರಧಾನಿಯವರನ್ನು ವಿಚಲಿತರನ್ನಾಗಿಸಿದೆ ಎಂದು ವ್ಯಂಗ್ಯವಾಡಿದ್ದಾರೆ. ಪ್ರಧಾನಮಂತ್ರಿಯವರು ಸಂವಿಧಾನದಲ್ಲಿರುವ ಆರ್ಟಿಕಲ್ 19 ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದನ್ನು ದೃಢೀಕರಿಸಬೇಕು. ಪಿಎಂ ಮೋದಿ 2016ರಲ್ಲಿ ಅಮೆರಿಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವೇಳೆ, ಸಂವಿಧಾನ ಪವಿತ್ರ ಗ್ರಂಥ ಎಂದು ಹೇಳಿದ್ದರು. ಈ ಪವಿತ್ರ ಗ್ರಂಥದಲ್ಲಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕುಗಳೆಂದು ಪ್ರತಿಪಾದಿಸಲಾಗಿದೆ. ಎಲ್ಲಾ ನಾಗರಿಕರ ಸಮಾನತೆಯನ್ನು ಇದು ಸಾರುತ್ತದೆ ಇದನ್ನು ಮೋದಿಯವರು ಮರೆಯಬಾರದು ಎಂದಿದ್ದಾರೆ.
Urging all those who believe in #FreedomOfExpression to send this or similar letters to @PMOIndia @narendramodi urging him to affirm the constitutional principle of our Article 19 rights & the value of democratic dissent — even if more FIRs follow as a result! #SaveFreeSpeech pic.twitter.com/MDIrros64j
— Shashi Tharoor (@ShashiTharoor) October 8, 2019
ಭಾರತದ ಪ್ರಜೆಗಳು, ರಾಷ್ಟ್ರದ ಸಮಸ್ಯೆಗಳನ್ನು ನಿರ್ಭಯವಾಗಿ ತಮ್ಮ ಗಮನಕ್ಕೆ ತರಬಹುದು. ಅಷ್ಟೇ ಅಲ್ಲ, ಆ ಸಮಸ್ಯೆಗಳನ್ನು ನೀವು ಪರಿಹರಿಸಬಹುದು. ಪ್ರತಿಯೊಬ್ಬ ನಾಗರಿಕನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀವು ಕಸಿಯುವುದಿಲ್ಲ ಎಂದು ನಾವು ನಂಬಿದ್ದೇವೆ. ಮನ್ ಕೀ ಬಾತ್ ಮುಂದೆ ಮೌನ ಕೀ ಬಾತ್ ಆಗದಿರಲಿ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ದೇಶದೊಳಗೆ ನಡೆಯುತ್ತಿರುವ ಸಾಮೂಹಿಕ ಹಲ್ಲೆ, ಜೈಶ್ರೀರಾಮ್ ಘೋಷಣೆ ಹೇಳುವಂತೆ ಒತ್ತಡ ಹೇರುವುದನ್ನು ಖಂಡಿಸಿ, ಇತಿಹಾಸ ತಜ್ಞ ರಾಮಚಂದ್ರ ಗುಹಾ, ನಿರ್ದೇಶಕ ಮಣಿರತ್ನ, ಅಪರ್ಣಾ ಸೇನ್ ಸೇರಿದಂತೆ ಹಲವರು ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದಿದ್ದರು. ಇವರ ವಿರುದ್ಧ ಈಗ ಎಫ್ಐಆರ್ ದಾಖಲಾಗಿದೆ.
ಇಂದಿನ ಆಡಳಿತಾರೂಢರ ಪ್ರಕಾರ ಪತ್ರ ಬರೆಯುವುದೂ ಸಹ ಅಪರಾಧ. ಹಾಗಾದರೆ ನಾವೇನು ಮಾಡಬೇಕು. ಸುಖವಾಗಿ ಬದುಕಬೇಕು ಎಂಬ ಆಸೆ ಇರುವವರು, ಪಂಚೇಂದ್ರಿಯಗಳನ್ನು ಕಳೆದುಕೊಂಡವರಂತೆ ಸುಮ್ಮನೆ ಇರಬೇಕು, ಅಷ್ಟೇ. ಇದು ಈ ದೇಶದ ಇಂದಿನ ದುಸ್ಥಿತಿ.