ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂಬ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ನಿಲುವು ಮತ್ತು ಸಿಎಂ ಶಿಂಧೆ ಸೇರಿದಂತೆ ಅವರ ಬಣದ 38 ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಬೆನ್ನಲ್ಲೇ ಶಿಂಧೆ ಬಣ ಕೂಡ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು, ಉದ್ಧವ್ ಬಣದ 14 ಶಾಸಕರನ್ನು ಅನರ್ಹಗೊಳಿಸದಿರುವ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿದೆ.
ಉದ್ಧವ್ ಬಣಕ್ಕೆ ಸೇರಿದ ಹದಿನಾಲ್ಕು ಶಾಸಕರ ವಿರುದ್ಧ ಸಲ್ಲಿಸಿದ್ದ ಅನರ್ಹತೆ ಅರ್ಜಿಗಳನ್ನು ಮಹಾರಾಷ್ಟ್ರ ಸ್ಪೀಕರ್ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಶಿವಸೇನೆ ಮುಖ್ಯ ಸಚೇತಕರೂ ಆಗಿರುವ ಏಕನಾಥ್ ಶಿಂಧೆ ಬಣದ ಸದಸ್ಯ ಭರತ್ ಗೋಗಾವಲೆ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
Eknath Shinde faction moves Bombay High Court against Maharashtra Speaker decision to not disqualify Uddhav Thackeray faction members. @mieknathshinde @OfficeofUT pic.twitter.com/rWOiSrBOJ6
— Bar & Bench (@barandbench) January 15, 2024
ಉದ್ಧವ್ ಠಾಕ್ರೆ ಬಣದ ಸದಸ್ಯರು ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ. ಅಲ್ಲದೆ ಶಿವಸೇನೆ ಪಕ್ಷದ ಸದಸ್ಯತ್ವವನ್ನು ಸ್ವಯಂಪ್ರೇರಿತವಾಗಿ ತ್ಯಜಿಸಿದ್ದಾರೆ ಎಂದು ಗೋಗಾವಲೆ ತಮ್ಮ ಅರ್ಜಿಯಲ್ಲಿ ಆಪಾದಿಸಿದ್ದಾರೆ.
ಜುಲೈ 4, 2023ರಂದು ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತ ಯಾಚನೆ ಸಮಯದಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿಯೊಂದಿಗೆ ಸೇರಿಕೊಂಡು ಠಾಕ್ರೆ ಬಣದ ಶಾಸಕರು ಶಿವಸೇನೆ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದಾರೆ. ಈ ಅಂಶವನ್ನು ಸ್ಪೀಕರ್ ಪರಿಗಣಿಸಿಲ್ಲ ಎಂದು ಶಿಂಧೆ ಬಣ ಹೇಳಿಕೊಂಡಿದೆ.
ಪ್ರಕರಣದ ಹಿನ್ನೆಲೆ :
ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳು ಜೊತೆಗೂಡಿ ಮಹಾ ವಿಕಾಸ್ ಅಘಾಡಿ ಸರ್ಕಾರ ರಚಿಸಿತ್ತು. ಉದ್ದವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು. ಸರ್ಕಾರ ಸುಸೂತ್ರವಾಗಿ ನಡೆಯುತ್ತಿದ್ದಾಗ, 2022 ಜೂನ್ ತಿಂಗಳಲ್ಲಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆ ಶಾಸಕರು ಉದ್ದವ್ ಆಡಳಿತದ ವಿರುದ್ದ ದಿಢೀರ್ ಬಂಡೆದಿದ್ದರು. ಬಳಿಕ ಕೆಲ ದಿನಗಳ ರಾಜಕೀಯ ಮೇಲಾಟದ ಬಳಿಕ ಶಿಂಧೆ ಬಣ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿತ್ತು. ಶಿವಸೇನೆಯ ಒಟ್ಟು 55 ಶಾಸಕರ ಪೈಕಿ ಸುಮಾರು 37 ಮಂದಿ ಏಕನಾಥ್ ಶಿಂಧೆ ಅವರನ್ನು ಬೆಂಬಲಿಸಿದ್ದರು. ಈ ಮೂಲಕ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡಿತ್ತು.
ಬಳಿಕ, ಉದ್ದವ್ ಠಾಕ್ರೆ ಬಣ ಸಿಎಂ ಏಕನಾಥ್ ಶಿಂಧೆ ಸೇರಿದಂತೆ ಅವರ ಬಣದ ಶಾಸಕರನ್ನು ಅಮಾನತುಗೊಳಿಸುವಂತೆ ಸ್ಪೀಕರ್ಗೆ ಅರ್ಜಿ ಸಲ್ಲಿಸಿದ್ದರು. ಸ್ಪೀಕರ್ ರಾಹುಲ್ ನಾರ್ವೇಕರ್ ಅರ್ಜಿ ಕುರಿತು ಯಾವುದೇ ತೀರ್ಮಾನ ಕೈಗೊಳ್ಳದೆ ಒಂದು ವರ್ಷ ವಿಳಂಬ ಮಾಡಿದ್ದರು. ಈ ಹಿನ್ನೆಲೆ ಉದ್ದವ್ ಬಣ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ, ಜನವರಿ 10,2024ರಂದು ಸ್ಪೀಕರ್ ನಾರ್ವೇಕರ್ ಶಿಂಧೆ ಬಣದ ಪರ ನಿಲುವು ತಾಳಿದ್ದರು.
ಶಿಂಧೆ ಬಣವು 55 ಶಾಸಕರ ಪೈಕಿ 37 ಮಂದಿಯ ಬಹುಮತ ಹೊಂದಿದ ಪರಿಣಾಮ ಉದ್ದವ್ ಬಣದ ಸುನಿಲ್ ಪ್ರಭು ಅವರು ಪಕ್ಷದ ವಿಪ್ ಅಲ್ಲ ಎಂದು ಸ್ಪೀಕರ್ ನಾರ್ವೇಕರ್ ಜನವರಿ 10ರಂದು ನಿರ್ಧರಿಸಿದ್ದರು. ಹೀಗಾಗಿ ಶಿವಸೇನೆ ಶಾಸಕಾಂಗ ಪಕ್ಷದ ಸಭೆ ಕರೆಯಲು ಸುನಿಲ್ ಪ್ರಭು ಅವರಿಗೆ ಯಾವುದೇ ಅಧಿಕಾರ ಇಲ್ಲ ಮತ್ತು ಸಭೆ ಕರೆ ನೀಡುವ ವಾಟ್ಸಾಪ್ ಸಂದೇಶವನ್ನು 12 ಗಂಟೆಗಳಷ್ಟು ಕಡಿಮೆ ಅವಧಿಯಲ್ಲಿ ಕಳಿಸಲಾಗಿದೆ ಎಂದು ಒತ್ತಿ ಹೇಳಿದ್ದರು.
ಇದಲ್ಲದೆ, ಭರತ್ ಗೋಗಾವಲೆ ಅವರನ್ನು ಪಕ್ಷದ ವಿಪ್ ಆಗಿ ನೇಮಿಸಿರುವುದು ಮತ್ತು ಏಕನಾಥ್ ಶಿಂಧೆ ಅವರು ನಾಯಕರಾಗಿ ಆಯ್ಕೆಯಾಗಿರುವುದು ಸಿಂಧುವಾಗಿದೆ ಎಂದು ಎಂದು ಅವರು ತೀರ್ಪು ನೀಡಿದ್ದರು.
ಇದನ್ನೂ ಓದಿ : ಮಥುರಾ: ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂ ಕೋರ್ಟ್