ರಾಜ್ಯದ ಆಡಳಿತದಲ್ಲಿ ಯಡಿಯೂರಪ್ಪನವರ ಪಾತ್ರ ನಗಣ್ಯವಾಗಿದ್ದು ಅವರ ಹಿಂದೆ ಸಂವಿಧಾನೇತರ ಶಕ್ತಿಗಳೇ ವಿಜೃಂಭಿಸುತ್ತಿವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು
“ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರೇ,
ನೀವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು 3 ದಿನ, ಸಂಪುಟ ರಚನೆಗೆ 26 ದಿನ ಮತ್ತು ಖಾತೆ ಹಂಚಿಕೆಗೆ 6 ದಿನ ತೆಗೆದುಕೊಂಡಿರಿ. ಈಗ ಭಿನ್ನಮತ ಶಮನಕ್ಕೆ ಇನ್ನೆಷ್ಟು ದಿನ ಬೇಕು? ಈ ಎಲ್ಲದರ ನಡುವೆ ನಿಮ್ಮ ಸರ್ಕಾರ ಟೇಕ್ ಆಫ್ ಆಗುವುದು ಯಾವಾಗ?” ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಮೈತ್ರಿಯ ಸಮ್ಮಿಶ್ರ ಸರ್ಕಾರ ಟೇಕ್ ಆಫ್ ಆಗಿಲ್ಲ ಎಂದು ಟೀಕಿಸಿದ್ದ ಯಡಿಯೂರಪ್ಪನವರಿಗೆ ಈಗ ಸಿದ್ದರಾಮಯ್ಯನವರು ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರು ಮುಂದುವರಿದು ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಂಪುಟ ರಚನೆ, ಖಾತೆ ಹಂಚಿಕೆಯ ಕಸರತ್ತುಗಳನ್ನು ಗಮನಿಸಿದರೆ ಜನಪ್ರತಿನಿಧಿಗಳ ದನಿ ಉಡುಗಿಹೋಗಿ ಸಂವಿಧಾನೇತರ ಶಕ್ತಿಗಳೇ ವಿಜೃಂಭಿಸಿರುತ್ತಿರುವ ಹಾಗೆ ಕಾಣಿಸುತ್ತಿದೆ. ಇದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮಾರಕ ಎಂದಿದ್ದಾರೆ. ಆ ಮೂಲಕ ಎಲ್ಲ ಅಧಿಕಾರವನ್ನು ಆರ್.ಎಸ್.ಎಸ್ ನಿಯಂತ್ರಿಸುತ್ತಿದ್ದು ಯಡಿಯೂರಪ್ಪ ಹೆಸರಿಗೆ ಮಾತ್ರ ಮುಖ್ಯಮಂತ್ರಿಯಾಗಿದ್ದಾರೆ ಎಂಬುದು ಸಿದ್ದರಾಮಯ್ಯನವರ ಆರೋಪವಾಗಿದೆ.
ನಿಮ್ಮ ಮಂತ್ರಿಗಳಲ್ಲಿರುವ ಅಸಮಾಧಾನದ ಕಾರಣವನ್ನು ತಿಳಿಯುವ ಹಕ್ಕು ನಮ್ಮ ಜನರಿಗೆ ಇದೆ. ನೀವು ಅಸಮರ್ಥರು ಎಂದು ಅವರು ಭಾವಿಸುತ್ತಾರೆಯೇ? ಅಥವಾ ಅವರು ಲಾಭದಾಯಕ ಖಾತೆಗಳನ್ನು ಬಯಸುತ್ತಾರೆಯೇ? ಅಥವಾ ಸರ್ಕಾರವನ್ನು ನಿಯಂತ್ರಿಸುವ ಅಸಂವಿಧಾನಿಕ ಅದೃಶ್ಯ ಕೈಗಳ ವಿರುದ್ಧ ಅವರ ಹತಾಶೆಯೇ? ದಯವಿಟ್ಟು ತಿಳಿಸಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಯಾವುದೇ ಕಾರಣವಿರಲಿ, ಅದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಉತ್ತಮ ಸಂಕೇತವಲ್ಲ. ಸರ್ಕಾರವನ್ನು ವಿಸರ್ಜಿಸುವುದು ಮತ್ತು ಚುನಾವಣೆಗೆ ಹೋಗುವುದು ಉತ್ತಮ. ನಮ್ಮ ಜನರಿಗೆ ಮಾಡಲು ಉತ್ತಮ ಆಯ್ಕೆ ಇರುತ್ತದೆ ಮತ್ತು ನಿಮ್ಮ ಹೈಕಮಾಂಡ್ನಿಂದ ಯಾವುದೇ ಅವಮಾನವನ್ನು ಎದುರಿಸುವುದನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದ್ದಾರೆ.
ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಅನುಭವಿಸುತ್ತಿರುವ ಅವಮಾನ, ಅನ್ಯಾಯ, ಅಸಂತೋಷವನ್ನು ನೋಡುತ್ತಿದ್ದರೆ ಅವರ ರಾಜಕೀಯ ಎದುರಾಳಿಯಾದ ನನ್ನಂತಹವನಲ್ಲಿಯೂ ಅವರ ಬಗ್ಗೆ ಅನುಕಂಪ ಮೂಡುವಂತಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.