ಸಿಕ್ಕಿಂ ಮೂಲದ ಯುವಕನೋರ್ವನಿಗೆ ಚೈನೀಸ್ ಎಂದು ಕರೆದು ಅಮಾನುಷವಾಗಿ ಥಳಿಸಿ, ಕಿರುಕುಳ ನೀಡಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿರುವ ಬಗ್ಗೆ free press journal ವರದಿ ಮಾಡಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಈ ಘಟನೆ ನಡೆದಿದೆ.ಸಂತ್ರಸ್ತ ತಾನು ಭಾರತದ ಈಶಾನ್ಯ ರಾಜ್ಯದ ಪ್ರಜೆಯೇ ಹೊರತು ಚೀನಾದ ಪ್ರಜೆಯಲ್ಲ ಎಂದು ವಿವರಿಸಲು ಯತ್ನಿಸಿದಾಗ ದಾಳಿಕೋರರು ಆತನ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ವರದಿಗಳ ಪ್ರಕಾರ, ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಬೆಂಗಳೂರಿನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಅಮಾನುಷವಾಗಿ ಥಳಿಸಿ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟಿದ್ದಾರೆ.
ಸಂತ್ರಸ್ತನಿಗೆ ಸಿಕ್ಕಿಂನ ರಿಂಚನ್ಪಾಂಗ್ ಪಟ್ಟಣದ ನಿವಾಸಿ ದಿನೇಶ್ ಸುಬ್ಬ ಎಂದು ಗುರುತಿಸಲಾಗಿದೆ. ರಾತ್ರಿ 3 ಗಂಟೆ ಸುಮಾರಿಗೆ ಘಟನೆ ನಡೆದದೆ. ದಿನೇಶ್ ಸುಬ್ಬಾ ತನ್ನ ಸ್ನೇಹಿತರ ಜೊತೆಗೆ ಪಾರ್ಟಿ ಮುಗಿಸಿ ಮನೆಗೆ ವಾಪಾಸ್ಸು ಬರುವಾಗ ಘಟನೆ ನಡೆದಿದೆ.
ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ದಿನೇಶ್ ಸುಬ್ಬಾ ಅವರಿಗೆ ಕಿರುಕುಳ ನೀಡಿ ಚೈನೀಸ್ ಎಂದು ಕರೆಯಲು ಪ್ರರಾಂಭಿಸುತ್ತಾರೆ. ಮತ್ತು ಆತನ ತಲೆಗೆ ಕೈಯಿಂದ ಹಲ್ಲೆ ನಡೆಸುತ್ತಾರೆ. ಈ ವೇಳೆ ಸುಬ್ಬ ದುಷ್ಕರ್ಮಿಗಳ ಬಳಿ ತನ್ನನ್ನುಚೈನೀಸ್ ಎಂದು ಕರೆಯದಂತೆ ಆಗ್ರಹಿಸಿದ್ದಾನೆ ಮತ್ತು ದುಷ್ಕರ್ಮಿಗಳಿಗೆ ಅಲ್ಲಿಂದ ಹೋಗುವಂತೆ ಹೇಳಿದ್ದಾನೆ.
ಆ ಸಮಯದಲ್ಲಿ ದುಷ್ಕರ್ಮಿಗಳು ಹೊರಟು ಹೋದರು. ಆದರೆ ಸ್ವಲ್ಪ ಸಮಯದ ನಂತರ ಯಾರೋ ಹಿಂದಿನಿಂದ ಬಂದು ಸುಬ್ಬನನ್ನು ಹೊಡೆದ ನಂತರ ಅವರು ನೆಲಕ್ಕೆ ಬಿದ್ದಿದ್ದಾರೆ. ಬಳಿಕ ದುಷ್ಕರ್ಮಿಗಳು ರಾಡ್ ಮತ್ತು ದೊಣ್ಣೆಗಳಿಂದ ಹೊಡೆಯಲು ಆರಂಭಿಸಿದ್ದಾರೆ. ಚೈನೀಸ್ ಎಂದು ಕಿರುಕುಳ ನೀಡಿದವರೆ ತನಗೆ ಹಲ್ಲೆ ನಡೆಸಿದ್ದಾರೆಂದು ಸುಬ್ಬ ಆರೋಪಿಸಿದ್ದಾರೆ.
ನಾನು ಸೂಪರ್ ಮಾರ್ಕೆಟ್ ಮುಂದೆ ಪ್ರಜ್ಞೆ ತಪ್ಪಿ ಬಿದ್ದಿದ್ದೆ ಎಂದು ಸುಬ್ಬ ಹೇಳಿದ್ದಾರೆ. ಪ್ರಜ್ಞೆ ಬಂದ ಮೇಲೆ ನನ್ನ ಬಟ್ಟೆ ಇಲ್ಲದಿರುವುದು ಮತ್ತು ರಕ್ತಸ್ರಾವವಾಗುತ್ತಿರುವುದು ಕಂಡುಬಂತು. ಅಲ್ಲದೇ ನನ್ನ ಬಳಿ ಒಂದು ಬ್ಯಾಗ್ ಇತ್ತು ಅದು ಕೂಡ ಕಾಣೆಯಾಗಿದೆ ಎಂದು ಸಂತ್ರಸ್ತ ಹೇಳಿದ್ದಾರೆ.
ದಿನೇಶ್ ಸುಬ್ಬ ಗಂಭೀರವಾಗಿ ರಕ್ತಸ್ರಾವದೊಂದಿಗೆ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಪೊಲೀಸರು ಮೂವರು ಅಪರಿಚಿತರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನು ಓದಿ: ಬಲಪಂಥೀಯ ಸಂಘಟನೆಯಿಂದ ಜೀವಬೆದರಿಕೆ: ವಿಚಾರವಾದಿಗಳಿಗೆ ರಕ್ಷಣೆ ಒದಗಿಸಲು ಮುಂದಾದ ರಾಜ್ಯ ಸರ್ಕಾರ