ಪ್ರಪಂಚದಲ್ಲಿಯೇ ಅತಿ ಹೆಚ್ಚು ರೇಷ್ಮೆ ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಇನ್ನು ಭಾರತದಲ್ಲಿಯೇ ಅತಿ ಹೆಚ್ಚು ರೇಷ್ಮೆ ಉತ್ಪಾದಿಸುವ ರಾಜ್ಯ ಕರ್ನಾಟವಾಗಿದೆ. 2018-19ರಲ್ಲಿ ಉತ್ಪಾದನೆಯಾದ 35,261 ಮೆಟ್ರಿಕ್ ಟನ್ ರೇಷ್ಮೆಯಲ್ಲಿ ಭಾರತದ ಶೇಕಡಾ 32 ರಷ್ಟು ಕೊಡುಗೆಯನ್ನು ಕರ್ನಾಟಕವೇ ನೀಡಿದೆ. ಅದೇ ರೀತಿ ಏಷ್ಯಾದಲ್ಲಿಯೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಕರ್ನಾಟಕದ ರಾಮನಗರದಲ್ಲಿದೆ. ಸಾವಿರಾರು ರೈತರಿಗೆ ಆಸೆಯಾಗಿದ್ದು ಅದು ಈಗ ಕಣ್ಣೀರಿನ ಕತೆ ಹೇಳುತ್ತಿದೆ.
ಹಾವೇರಿ ಜಿಲ್ಲೆಯ ಹಂದಿಗನೂರಿನ ನಿಖಿರಪ್ಪ ಗಡಿಯಪ್ಪ ಅವರು ಮೇ ತಿಂಗಳ ಕೊನೆಯಲ್ಲಿ ಸುಮಾರು 250 ಕೆಜಿ ರೇಷ್ಮೆ ತೆಗೆದುಕೊಂಡು ಟೆಂಪೊದಲ್ಲಿ ರಾಮನಗರಕ್ಕೆ ಪ್ರಯಾಣ ಬೆಳೆಸಿದರು. ಸತತ 11 ಗಂಟೆಗಳ ತಡೆರಹಿತ 370 ಕಿಲೋಮೀಟರ್ ಪ್ರಯಾಣದ ಸಮಯದಲ್ಲಿ ಲಾಕ್ಡೌನ್ ಕಾರಣಕ್ಕೆ ಅವರಿಗೆ ದಾರಿಯುದ್ದಕ್ಕೂ ಆಹಾರ ಸಿಗಲಿಲ್ಲ. ಆದರೆ ಅವರ ಚಿಂತೆ ಆಹಾರದ್ದಾಗಿರಲಿಲ್ಲ ಬದಲಿಗೆ ರೇಷ್ಮೆಗೆ ಬೆಲೆ ಕಡಿಮೆಯಾಗಿದ್ದರೆ? ಎನ್ನುವ ಚಿಂತೆ ಅವರನ್ನು ಕಾಡುತ್ತಿತ್ತು.
ಕೊನೆಗೂ ಅವರ ಆತಂಕ ನಿಜವಾಯಿತು. ಅವರ ಕನಸುಗಳು ಕಮರಿ ಹೋದವು. ಏಕೆಂದರೆ ಅಷ್ಟೆಲ್ಲ ಕಷ್ಟಪಟ್ಟರೂ ಸಹ ಕೊನೆಗೆ ಅವರಿಗೆ ಸಿಕ್ಕಿದ್ದು ಪ್ರತಿ ಕೆಜಿಗೆ 270 ರೂನಂತೆ ಕೇವಲ 67,500 ರೂ ಮಾತ್ರ.
ಮಾರ್ಚ್ ಆರಂಭದಲ್ಲಿ, ಕೆಜಿ ಬಿವೊಲ್ಟೈನ್ ರೇಷ್ಮೆಗೆ ಸುಮಾರು 550 ರೂ, ಮತ್ತು ಅಡ್ಡ-ತಳಿ ರೇಷ್ಮೆಗೆ ಸರಾಸರಿ 480 ರೂ ಇತ್ತು. ಮದುವೆಯ ಋತುವನ್ನು ಹೊರತುಪಡಿಸಿ ಸಾಮಾನ್ಯವಾಗಿ ಕೆಜಿ ಬಿವೊಲ್ಟೈನ್ ರೇಷ್ಮೆಗೆ ಸುಮಾರು 450-500 ರೂ ಮತ್ತು ಡ್ಡ-ತಳಿ ರೇಷ್ಮೆಗೆ ಸರಾಸರಿ 380-420 ರೂ ಇತ್ತು.
ನಮ್ಮ ಮನೆಯ ಹತ್ತು ಜನರು ರೇಷ್ಮೆ ಬೆಳೆಯಲು ತೊಡಗಿಸಿಕೊಂಡಿದ್ದೇವೆ. ಈಗ ಕೂಲಿ, ರೇಷ್ಮೆ ಹುಳು, ರಸಗೊಬ್ಬರ, ಸಾರಿಗೆ ಮತ್ತು ನಿರ್ವಹಣೆ ಸೇರಿ 48,000 ರೂ ಖರ್ಚು ಮಾಡಿದ್ದೆ. ಎಲ್ಲಾ ಕಳೆದರೆ ನಾನು ಕೇವಲ ರೂ. 20,000 ರೂ ಉಳಿಸುತ್ತೇನೆ ಅಷ್ಟೆ. “ನಾನು 2014 ರಿಂದ ಹಿಪ್ಪುನೇರಳೆ ಬೆಳೆಯಲು ಪ್ರಾರಂಭಿಸಿದೆ. ಈಗ ತೀವ್ರ ನಷ್ಟವಾದ್ದರಿಂದ ನಾನು ಪಡೆದಿರುವ ಸಾಲಗಳನ್ನು ಹೇಗೆ ಮರುಪಾವತಿಸುತ್ತೇನೆ ಎಂದು ನನಗೆ ತಿಳಿದಿಲ್ಲ”ಎಂದು 42 ವರ್ಷದ ಗಡಿಯಪ್ಪ ಹೇಳುತ್ತಾರೆ.
ಕೋವಿಡ್ -19 ಲಾಕ್ಡೌನ್ ರೇಷ್ಮೆ ಉದ್ಯಮವನ್ನು ತೀವ್ರವಾಗಿ ಬಾಧಿಸಿದೆ. ಬೆಲೆಗಳ ಕುಸಿತಕ್ಕೆ ಒಂದು ಕಾರಣವೆಂದರೆ ಸಂಪೂರ್ಣ ಬೇಡಿಕೆ-ಪೂರೈಕೆ ಸರಪಳಿಯ ಕಡಿತವಾಗಿದೆ. ಈ ಅವಧಿಯಲ್ಲಿ ಅನೇಕ ವಿವಾಹಗಳನ್ನು ಮುಂದೂಡಲಾಗಿದೆ, ಕಾರ್ಯಕ್ರಮಗಳು ರದ್ದಾಗಿವೆ ಮತ್ತು ಉಡುಪು ಮಳಿಗೆಗಳು ಸ್ಥಗಿತಗೊಂಡಿವೆ. ಆದ್ದರಿಂದ ರೇಷ್ಮೆಯ ಬೇಡಿಕೆ ತೀವ್ರವಾಗಿ ಕಡಿಮೆಯಾಗಿದೆ ಎಂದು ಮಾರುಕಟ್ಟೆ ಅಧಿಕಾರಿಗಳು ಮತ್ತು ಇತರರು ಹೇಳುತ್ತಾರೆ. ಆದರೆ ರೈತರು ಕಾಯಲು ಸಾಧ್ಯವಿಲ್ಲ. ಅವರು ಹಾಳಾಗುವ ಮುನ್ನವೇ ರೇಷ್ಮೆಯನ್ನು ಸಮಯಕ್ಕೆ ಸರಿಯಾಗಿ ಮಾರಾಟ ಮಾಡಬೇಕು.
ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ರಾಮನಗರ ಮಾರುಕಟ್ಟೆಯು ಮಾರ್ಚ್ 25 ರಿಂದ ಏಪ್ರಿಲ್ 1 ರವರೆಗೆ ಒಂದು ವಾರದವರೆಗೆ ಸ್ಥಗಿತಗೊಂಡಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ. ಇದು ಮತ್ತೆ ತೆರೆದ ನಂತರ, ಬಿವೊಲ್ಟೈನ್ ರೇಷ್ಮೆಯ ಸರಾಸರಿ ಬೆಲೆ ರೂ. ಪ್ರತಿ ಕಿಲೋಗ್ರಾಂಗೆ 330 ರೂ., ಮತ್ತು ಅಡ್ಡ-ತಳಿ ರೇಷ್ಮೆ ರೂ. ಪ್ರತಿ ಕಿಲೋಗೆ 310 ರೂ ಇತ್ತು.
ದೇಶಾದ್ಯಂತ ಲಾಕ್ಡೌನ್ ನಿರ್ಬಂಧಗಳನ್ನು ನಿಧಾನವಾಗಿ ಸಡಿಲಿಸಿದಾಗ ರೈತರು ರೇಷ್ಮೆ ಬೆಲೆಗಳು ಮತ್ತೆ ಪುಟಿಯುವ ನಿರೀಕ್ಷೆಯಲ್ಲಿದ್ದರು. ಆದರೆ ಬೆಲೆಗಳು ಮತ್ತಷ್ಟು ಕಡಿಮೆಯಾದವು. ಮೇ ಕೊನೆಯ ವಾರದ ವೇಳೆಗೆ ಬಿವೊಲ್ಟೈನ್ ರೇಷ್ಮೆ ಸರಾಸರಿ ಬೆಲೆ ರೂ. 250 ಮತ್ತು ಕ್ರಾಸ್ಬ್ರೀಡ್ ಬೆಲೆ ಸರಿಸುಮಾರು ರೂ. 200ರೂ ಕುಸಿದಿದೆ.
ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಕರ್ನಾಟಕದಿಂದ ರೇಷ್ಮೆ ಸರಬರಾಜು ಆಗುತ್ತಿತ್ತು. ಆದರೆ ಲಾಕ್ಡೌನ್ ಕಾರಣದಿಂದ ಸಾರಿಗೆ ವ್ಯವಸ್ಥೆ ವ್ಯತ್ಯಯವಾದ್ದರಿಂದ ಬೇಡಿಕೆಯಲ್ಲಿ ಕುಸಿತವಾಗಿದೆ. ಅದರಿಂದ ಸಹಜವಾಗಿ ಬೆಲೆ ಕುಸಿದಿದೆ ಎಂದು ಉಪ ನಿರ್ದೇಶಕ ಮುನ್ಶಿ ಬಸಯ್ಯ ಹೇಳಿದ್ದಾರೆ.
“ಬೆಲೆಗಳು ಕಡಿಮೆ ಇರುವುದರಿಂದ ನಾನು ಒಂದು ದಿನವೂ ಕೆಲಸವನ್ನು ನಿಲ್ಲಿಸಲು ಸಾಧ್ಯವಿಲ್ಲ. ನನ್ನ ಕುಟುಂಬವನ್ನು ನಾನು ಹೇಗೆ ಪೋಷಿಸುತ್ತೇನೆ?” ಎಂದು ಗಡಿಯಪ್ಪ ಪ್ರಶ್ನಿಸುತ್ತಾರೆ. ಮುಂದಿನ ಬ್ಯಾಚ್ನ ರೇಷ್ಮೆ ತಯಾರಿಸಲು ಅವರೀಗ ಮತ್ತೆ ಸಾಲದ ಮೊರೆ ಹೋಗಬೇಕಾಗಿದೆ. 2019 ರಲ್ಲಿ ಶೇ 12 ರಷ್ಟು ಬಡ್ಡಿದರದಲ್ಲಿ ಸಹಕಾರಿ ಬ್ಯಾಂಕಿನಿಂದ 3.5 ಲಕ್ಷ ರೂ ಮತ್ತು ನಾಲ್ಕು ವರ್ಷಗಳ ಹಿಂದೆ ವಿಜಯ ಬ್ಯಾಂಕಿನಿಂದ ತೆಗೆದುಕೊಂಡ ಶೇ 7 ರಷ್ಟು ಬಡ್ಡಿಗೆ 1.5 ಲಕ್ಷ ರೂ ಸಾಲವನ್ನು ಇನ್ನೂ ತೀರಿಸಿಲ್ಲಿ ಎಂದು ಅವರು ಹೇಳುತ್ತಾರೆ.
ಸರ್ಕಾರ ಏನದರೂ ಮಧ್ಯಪ್ರವೇಶಿಸಿದೆಯೇ? ಈ ರೈತರು ಏನು ಮಾಡಬೇಕು? ಈ ಪರಿಸ್ಥಿತಿ ಯಾವಾಗ ಸುಧಾರಿಸುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ನೀಡುವವರು ಯಾರು?
ಕೃಪೆ: ರೂರಲ್ಇಂಡಿಯಾಆನ್ಲೈನ್.ಆರ್ಗ್
ಇದನ್ನೂ ಓದಿ: ವಿಶ್ವದ 9ನೇ ಶ್ರೀಮಂತ ವ್ಯಕ್ತಿಯಾಗಿ ಮುಖೇಶ್ ಅಂಬಾನಿ: ಈ ಸ್ಥಾನಕ್ಕೆ ಬಂದಿದ್ದು ಹೇಗೆ ಗೊತ್ತೆ?