‘ಭಗವಾನ್ ಶ್ರೀರಾಮ ಮಾಂಸಾಹಾರಿ’ ಎಂದು ಹೇಳಿದ್ದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಜಿತೇಂದ್ರ ಅವ್ಹಾದ್, ಬಿಜೆಪಿಗರ ವಿರೋಧಕ್ಕೆ ಮಣಿದು ವಿಷಾದ ವ್ಯಕ್ತಪಡಿಸಿದ್ದಾರೆ. ‘ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಯಾರ ಭಾವನೆಗಳಿಗೂ ಧಕ್ಕೆ ತರಲು ಬಯಸುವುದಿಲ್ಲ’ ಎಂದಿದ್ದಾರೆ.
ಶ್ರೀರಾಮ ಮಾಂಸಹಾರಿ ಎಂದು ಎಂಬ ಅವ್ಹಾದ್ ಹೇಳಿಕೆಗೆ ಅಜಿತ್ ಪವಾರ್ ಬಣದ ಎನ್ಸಿಪಿ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರು ಕಿಡಿಕಾರಿದ್ದರು. ಅವರ ಮನೆ ಮುಂದೆ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದರು. ‘ವನವಾಸದ ಸಮಯದಲ್ಲಿ ಕಾಡಿನಲ್ಲಿ ಸಸ್ಯಾಹಾರದ ಕೊರತೆಯಿಂದಾಗಿ ಭಗವಾನ್ ರಾಮನು ಮಾಂಸಾಹಾರಿಯಾಗಿದ್ದನು’ ಎಂದು ಅವರು ಹೇಳಿದ್ದರು.
ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ‘ಶ್ರೀರಾಮನು ಸಸ್ಯಾಹಾರಿ ಅಲ್ಲ, ಮಾಂಸಾಹಾರಿ. 14 ವರ್ಷಗಳಿಂದ ಕಾಡಿನಲ್ಲಿ ವಾಸಿಸುವ ವ್ಯಕ್ತಿಯು ಸಸ್ಯಾಹಾರಿ ಆಹಾರವನ್ನು ಹುಡುಕಲು ಎಲ್ಲಿಗೆ ಹೋಗುತ್ತಾನೆ, ಇದು ಸರಿಯೋ ಇಲ್ಲವೋ’ ಎಂದು ಸಾರ್ವಜನಿಕರನ್ನು ಪ್ರಶ್ನಿಸಿದ್ದರು.
‘ನಾವು ಇತಿಹಾಸವನ್ನು ಓದುವುದಿಲ್ಲ ಮತ್ತು ರಾಜಕೀಯದಲ್ಲಿ ಎಲ್ಲವನ್ನೂ ಮರೆತುಬಿಡುವುದಿಲ್ಲ. ರಾಮ ನಮ್ಮವನು; ಅವರು ಬಹುಜನರ ನಾಯಕರಾಗಿದ್ದರು. ಕಾಡಿನಲ್ಲಿ ತಿನ್ನಲು ಬೇಟೆಯಾಡುತ್ತಿದ್ದರು … ರಾಮ ಎಂದಿಗೂ ಸಸ್ಯಾಹಾರಿಯಾಗಿರಲಿಲ್ಲ. 14 ವರ್ಷಗಳ ಕಾಲ ಕಾಡಿನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯು ಸಸ್ಯಾಹಾರಿಯಾಗಿ ಉಳಿಯಲು ಹೇಗೆ ಸಾಧ್ಯ’ ಎಂದಿದ್ದರು.
ಅವರ ಹೇಳಿಕೆಯ ಬೆನ್ನಲ್ಲೇ ಅಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕರು, ಜಿತೇಂದ್ರ ಅವ್ಹಾದ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಿಜೆಪಿ ಹರಿಯಾಣ ರಾಜ್ಯ ಮುಖ್ಯಸ್ಥರಾಗಿರುವ ಅರುಣ್ ಯಾದವ್ ಅವರು ಅವ್ಹಾದ್ ವಿಡಿಯೋವನ್ನು ಪೋಸ್ಟ್ ಮಾಡಿ, ‘ಅವರನ್ನು ತಕ್ಷಣವೇ ಬಂಧಿಸಬೇಕು’ ಎಂದು ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮತ್ತೊಬ್ಬ ಬಿಜೆಪಿ ನಾಯಕ ರಾಮ್ ಕದಂ ಅವರು ಉದ್ಧವ್ ಠಾಕ್ರೆ ಬಣವನ್ನು ತರಾಟೆಗೆ ತೆಗೆದುಕೊಂಡು, ‘ಬಾಳಾಸಾಹೇಬ್ ಠಾಕ್ರೆ ಅವರು ಇಂದು ಬದುಕಿದ್ದರೆ ಅವರು ಜಿತೇಂದ್ರ ಅವ್ಹಾದ್ ಬಗ್ಗೆ ಶಿವಸೇನೆ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಕಟುವಾಗಿ ಬರೆಯುತ್ತಿದ್ದರು’ ಎಂದು ಹೇಳಿದರು.
‘ದಿವಂಗತ ಬಾಳಾಸಾಹೇಬರು ಇಂದು ಬದುಕಿದ್ದರೆ, ಸಾಮ್ನಾ ಪತ್ರಿಕೆಯು ಶ್ರೀರಾಮನನ್ನು ಮಾಂಸಾಹಾರಿ ಎಂದು ಕರೆದವರ ಬಗ್ಗೆ ನಿಷ್ಠುರವಾಗಿ ಮಾತನಾಡುತ್ತಿತ್ತು. ಇವತ್ತಿನ ವಾಸ್ತವ ಏನಾಗಿದೆ.. ಇವರಿಗೆ ಲೆಕ್ಕವಿಲ್ಲ.. ಮಂಜುಗಡ್ಡೆಯಂತೆ ತಣ್ಣಗಿದ್ದಾರೆ. ಆದರೆ, ಚುನಾವಣೆಯ ಹತ್ತಿರ ಬಂದಾಗ ಹುಸಿ ಅಧಿಕಾರವನ್ನು ಕೂಡಿಸಿಕೊಂಡು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ವಾಸ್ತವ ಇದು…ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಹಿಂದೂಗಳೋ ಅಥವಾ ಮರಾಠಿಗರೋ… ಅವರಿಗೆ ಯಾರ ಮೇಲೂ ಪ್ರೀತಿ ಇಲ್ಲ’ ಎಂದಿದ್ದರು.
‘ಭಗವಾನ್ ರಾಮನು ಮಾಂಸಾಹಾರಿ’ ಎಂಬ ಹೇಳಿಕೆಗಾಗಿ ಜಿತೇಂದ್ರ ಅವ್ಹಾದ್ ವಿರುದ್ಧ ಕದಮ್ ದೂರು ದಾಖಲಿಸಿದ್ದಾರೆ. ರಾಮಭಕ್ತರ ಭಾವನೆಗಳಿಗೆ ಧಕ್ಕೆ ತರುವುದು ಅವರ ಮನಸ್ಸು. ಅವರು ಮತ ಸಂಗ್ರಹಿಸಲು ಹಿಂದೂ ಧರ್ಮವನ್ನು ಗೇಲಿ ಮಾಡಲು ಸಾಧ್ಯವಿಲ್ಲ. ರಾಮಮಂದಿರವನ್ನು ನಿರ್ಮಿಸಿರುವುದು ಘಮಂಡಿ ಮೈತ್ರಿಗೆ ಸರಿಹೋಗಿಲ್ಲ ಎಂದು ಕಿಡಿಕಾರಿದ್ದಾರೆ.
ಜನವರಿ 22 ರಂದು ಅಯೋಧ್ಯೆಯ ಮಹಾಮಸ್ತಕಾಭಿಷೇಕದ ದಿನದಂದು, ಮಹಾರಾಷ್ಟ್ರ ಸರ್ಕಾರ ಒಂದು ದಿನ ಮದ್ಯ ಮತ್ತು ಮಾಂಸ ನಿಷೇಧ ಮಾಡಬೇಕು ಎಂದು ಬಿಜೆಪಿ ಶಾಸಕ ರಾಮ್ ಕದಂ ಒತ್ತಾಯಿಸಿದ್ದರು. ಮರುದಿನ ಎನ್ಸಿಪಿ ನಾಯಕ ಜಿತೇಂದ್ರ ಅವ್ಹಾದ್ ನೀಡಿದ ಹೇಳಿಕೆಯನ್ನು ಬಿಜೆಪಿಗರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ‘ಭಗವಾನ್ ರಾಮನು ಮಾಂಸಾಹಾರಿ..’; ವಿವಾದ ಹುಟ್ಟುಹಾಕಿದ ಎನ್ಸಿಪಿ ನಾಯಕ ಅವ್ಹಾದ್ ಹೇಳಿಕೆ