ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಕೆ. ರಾಕೇಶ್ ಎಂಬ ವಿದ್ಯಾರ್ಥಿಯ ಕೊಲೆ ಖಂಡಿಸಿ ಜುಲೈ 31ರಂದು ಚಲ್ದಿಗಾನಹಲ್ಳಿ ಗ್ರಾಮದಿಂದ ಶ್ರೀನಿವಾಸಪುರ ತಾಲ್ಲೂಕು ಕಛೇರಿಯವರೆಗೂ ಕಾಲ್ನಡಿಗೆ ಜಾಥಾ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪ್ರಗತಿಪರ ಸಂಘಟನೆಗಳ ಸಮನ್ವಯ ಒಕ್ಕೂಟದ ಅಡಿಯಲ್ಲಿ ಪ್ರತಿಭಟನೆ ಆಯೋಜಿಸಲಾಗಿದ್ದು, ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಲಾಗಿದೆ.
ಸದರಿ ಪ್ರಕರಣದಲ್ಲಿ ರಾಜಕಾರಣಿಗಳು ಭಾಗಿಯಾಗಿರುವ ಸಂದೇಹವಿದೆ. ಯಾರೇ ಭಾಗಿಯಾಗಿದ್ದರೂ ನಿಷ್ಪಕ್ಷವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಮುಂದೆ ದಲಿತರು, ದಮನಿತರು, ಮಹಿಳೆಯರ ಮೇಲೆ ದೌರ್ಜನ್ಯ ನಡೆಯದಂತೆ ತಡೆಯಬೇಕು ಎಂದು ಒತ್ತಾಯಿಸಲಾಗಿದೆ.
ಮೃತ ರಾಕೇಶ್ ಕುಟುಂಬಸ್ಥರು ಅರ್ಥಿಕವಾಗಿ ಹಿಂದುಳಿದಿದ್ದು ಸರ್ಕಾರದ ವತಿಯಿಂದ ಈ ಕೂಡಲೇ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಹೋರಾಟ ರೂಪಿಸಲಾಗಿದೆ.
ಈ ಅಮಾನವೀಯ ಘಟನೆಯಿಂದ ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಇಷ್ಟಾದರೂ ನಾಮಾಕವಸ್ತೆಗೆ ಮೂವರು ಆರೋಪಿಗಳನ್ನು ಬಂಧಿಸಿ, ಉಳಿದ ಪ್ರಮುಖ ಆರೋಪಿಗಳನ್ನು ಬಂಧಿಸದೆ ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ. ಹಾಗಾಗಿ ಶ್ರೀನಿವಾಸಪುರ ಪೊಲೀಸ್ ಮತ್ತು ತಾಲ್ಲೂಕು ಆಡಳಿತ ವ್ಯವಸ್ಥೆಯ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಮನ್ವಯ ಒಕ್ಕೂಟ ಹೇಳಿಕೆಯಲ್ಲಿ ತಿಳಿಸಿದೆ.
ಪ್ರತಿಭಟನೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತ ಸಂಘರ್ಷ ಸಮಿತಿ (ಚಾಲನಾ ಸಮಿತಿ), ದಲಿತ ಬುದ್ದಸೇನೆ, ದಲಿತ ಪ್ರಜಾ ಶಕ್ತಿ (ಡಿ.ಪಿ.ಎಸ್.) ಮಹಿಳಾ ಒಕ್ಕೂಟ, ಸಮತಾ ಸೈನಿಕ ಧಳ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಬಹುಜನ ಕ್ರಾಂತಿ ಮೋರ್ಚ, ಪ್ರಜಾ ಜಾಗೃತಿ ವೇದಿಕೆ (ಸಿ.ಎ.ಎಫ್), ಹಮಾಲಿ ಸಂಘ, ಸಿ.ಪಿ.ಐ.ಎಂ., ಮಾದಿಗ ದಂಡೋರ, ಕಲಾವಿದರ ಸಂಘ, ಡಾ. ಮಹಾನಾಯಕ ಅಂಬೇಡ್ಕರ್ ಸಮಿತಿ, ವಾಲ್ಮೀಕಿ ನಾಯಕರ ಸಂಘ, ಭೀಮಸೇನೆ, ಕರ್ನಾಟಕ ರೈತ ಸೇನೆ, ನವ ಕರ್ನಾಟಕ ಸ್ವಾಭಿಮಾನ ವೇಧಿಕೆ (ರಿ.), ವಿದ್ಯಾರ್ಥಿ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ.
ಇದನ್ನೂ ಓದಿ; ಶ್ರೀನಿವಾಸಪುರದಲ್ಲಿ ಮಾದಿಗ ಸಮುದಾಯದ ವಿದ್ಯಾರ್ಥಿ ಕೊಲೆ: ಇಬ್ಬರ ಬಂಧನ