ಮಾದಿಗ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಯನ್ನು ಹೊಲೆಯ ಸಮುದಾಯಕ್ಕೆ ಸೇರಿದವರು ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ.
ಚಲ್ದಿಗಾನಹಳ್ಳಿ ಗ್ರಾಮದ ರಾಕೇಶ್ ಕೊಲೆಯಾದ ಯುವಕ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಯಾದ ವಿದ್ಯಾರ್ಥಿಯ ತಂದೆ ಚಿಕ್ಕನರಸಿಂಹಪ್ಪ ಅವರು ನೀಡಿದ ದೂರನ್ನು ಆಧರಿಸಿ ಶ್ರೀನಿವಾರಪುರದ ಜಗಜೀವನಪಾಳ್ಯದ ಸೋಮಶೇಖರ, ನವೀನ, ನಾಗೇಶ್, ದಾಸಪ್ಪ ಎಂಬವರ ವಿರುದ್ಧ ಐಪಿಸಿ ಸೆಕ್ಷನ್ 302, 201, 363, 342, 34 ಅಡಿಯಲ್ಲಿ ಎಫ್ಐಆರ್ ಆಗಿದೆ.
ರಾಕೇಶ್ ತಂದೆ ನೀಡಿರುವ ದೂರಿನಲ್ಲಿ ಏನಿದೆ?
“ನನ್ನ ಮಗನಾದ ರಾಕೇಶ್ ದಿನಾಂಕ 17-07-2023ರಂದು ಬೆಳಿಗ್ಗೆ 7.30 ಗಂಟೆ ಸಮಯದಲ್ಲಿ ಮನೆಯಿಂದ ಹೊರಟು ಕಾಲೇಜಿಗೆ ಹೋಗಿದ್ದನು. ರಾತ್ರಿಯಾದರೂ ಮನೆಗೆ ಬಾರಲಿಲ್ಲ. ಈ ಸಲುವಾಗಿ ಊರಿನಲ್ಲಿ, ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದೆವು. 17ನೇ ತಾರೀಖಿನಂದು ಬೆಳಿಗ್ಗೆ ತನ್ನ ಕ್ಲಾಸ್ ಮೇಟ್ ವೇದಾಂತ್ ಎನ್ನುವವನ ಜೊತೆಯಲ್ಲಿ ಶ್ರೀನಿವಾಸಪುರದ ಸಾಗರ್ ಚಾಟ್ಸ್ ನಲ್ಲಿ ನನ್ನ ಮಗ ಕುಳಿತ್ತಿದ್ದನು. ಆಗ ಶ್ರೀನಿವಾಸಪುರದ ಜಗಜೀವನಪಾಳ್ಯದ ನಿವಾಸಿಗಳಾದ ಸೋಮಶೇಖರ, ನವೀನ್, ನಾಗೇಶ್, ದಾಸಪ್ಪ ಎಂಬವರು ಕರೆದುಕೊಂಡು ಹೋಗಿರುವುದಾಗಿ ತಿಳಿದಿದೆ. ಪೊಲೀಸರಿಗೆ ದೂರು ನೀಡುವುದಕ್ಕಾಗಿ ಮಾರನೇ ದಿನ ಬೆಳಿಗ್ಗೆ 10 ಗಂಟೆ ಸಮಯಕ್ಕೆ ಶ್ರೀನಿವಾಸಪುರಕ್ಕೆ ಬಂದಾಗ, ಊರಿನಿಂದ ಪೋನ್ ಬಂದಿದೆ. ರಾಕೇಶ್ನ ಮೃತದೇಹ ಚಲ್ದಿಗಾನಹಳ್ಳಿ ಗ್ರಾಮದ ಗೋಪಾಲಕೃಷ್ಣ ಅವರ ಕೃಷಿ ಹೊಂಡದಲ್ಲಿ ಪತ್ತೆಯಾಗಿದೆ ಎಂದು ತಿಳಿದಿದೆ.ʼʼ
ʻʻಈ ನಾಲ್ವರು ಆರೋಪಿಗಳು ನನ್ನ ಮಗನನ್ನು ಇಡೀ ರಾತ್ರಿ ಕೂಡಿ ಹಾಕಿ ಚಿತ್ರೆ ಹಿಂಸೆ ನೀಡಿದ್ದಾರೆ. ಬಾಯಿ, ಮೂಗಲ್ಲಿ ರಕ್ತ ಬರುವಂತೆ ಹೊಡೆದು, ಕೈಕಾಲುಗಳ ಮೇಲೆ ದೊಣ್ಣೆಯಿಂದ ಥಳಿಸಿ ಸಾಯಿಸಿದ್ದಾರೆ. ಬಳಿಕ ಗ್ರಾಮದ ಕೃಷಿ ಹೊಂಡದಲ್ಲಿ ಬಿಸಾಡಿದ್ದಾರೆʼʼ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ʼನಾನುಗೌರಿ.ಕಾಂʼ ಜೊತೆಯಲ್ಲಿ ಮಾತನಾಡಿದ ಮೃತನ ಚಿಕ್ಕಪ್ಪ ನಿರಂಜನ್, ʼʼರಾಕೇಶ್ ತನ್ನ ಕ್ಲಾಸ್ಮೇಟ್ ಸ್ನೇಹಿತೆಯೊಂದಿಗೆ ಪಾನೀಪೂರಿ ತಿನ್ನಲು ಹೋಗಿದ್ದನು. ಜೊತೆಯಲ್ಲಿ ಸ್ನೇಹಿತ ವೇದಾಂತ್ ಕೂಡ ಇದ್ದನು. ಯುವತಿ ಮತ್ತು ರಾಕೇಶ್ ಸ್ನೇಹಿತರಾಗಿದ್ದರು. ಆದರೆ ಯುವತಿಯ ಕಡೆಯವರು ರಾಕೇಶ್ನನ್ನು ಕರೆದೊಯ್ದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದವರು ಮತ್ತು ಕೊಲೆಯಾದ ಯುವಕನ ಕುಟುಂಬದ ನಡುವೆ ಯಾವುದೇ ಕಲಹವಿರಲಿಲ್ಲ. ಆರೋಪಿಗಳು ಹೊಲೆಯ ಸಮುದಾಯದವರಾಗಿದ್ದು, ಕೊಲೆಯಾದ ಯುವಕ ಮಾದಿಗ ಸಮುದಾಯದವನಾಗಿದ್ದಾನೆʼʼ ಎಂದು ಮಾಹಿತಿ ನೀಡಿದ್ದಾರೆ.
ʼನಾನುಗೌರಿ.ಕಾಂʼಗೆ ಪ್ರತಿಕ್ರಿಯಿಸಿದ ಶ್ರೀನಿವಾಸಪುರ ಪೊಲೀಸ್ ಠಾಣೆ ಪೊಲೀಸರು, ʼʼಇಬ್ಬರು ಆರೋಪಿಗಳನ್ನು (ಸೋಮಶೇಖರ್, ದಾಸಪ್ಪ) ಬಂಧಿಸಲಾಗಿದೆ. ಇನ್ನಿಬ್ಬರ ಬಂಧನಕ್ಕಾಗಿ ಹುಡುಕಾಟ ನಡೆಸಿದ್ದೇವೆ. ತನಿಖೆಯ ಬಳಿಕ ಹೆಚ್ಚಿನ ವಿವರಗಳು ಲಭ್ಯವಾಗಲಿವೆʼʼ ಎಂದು ತಿಳಿಸಿದರು.