Homeಕರ್ನಾಟಕಆಗಸ್ಟ್ 14ರಂದು ಬೆಂಗಳೂರಿಗೆ ಚಂದ್ರಶೇಖರ್ ರಾವಣ್ ಅಜಾದ್: ದೊರೆಸ್ವಾಮಿಯವರ ಜೊತೆಗೂಡಿ ಭೂಮಿ, ವಸತಿಗಾಗಿ ಹೋರಾಟ

ಆಗಸ್ಟ್ 14ರಂದು ಬೆಂಗಳೂರಿಗೆ ಚಂದ್ರಶೇಖರ್ ರಾವಣ್ ಅಜಾದ್: ದೊರೆಸ್ವಾಮಿಯವರ ಜೊತೆಗೂಡಿ ಭೂಮಿ, ವಸತಿಗಾಗಿ ಹೋರಾಟ

ದೇಶದ ಕಟ್ಟಕಡೆಯ ಪ್ರಜೆಗೆ ಘನತೆಯಿಂದ ಬದುಕಲೊಂದು ತುಂಡು ಭೂಮಿ, ಮಾನದಿಂದ ಬಾಳಲೊಂದು ಸೂರು – ಇಷ್ಟನ್ನಾದರೂ ದೊರಕಿಸಬೇಕೆಂಬ ಗುರಿಯೊಂದಿಗೆ ಆಗಸ್ಟ್ 14-15 ಮಧ್ಯರಾತ್ರಿಯಿಂದಲೇ ಎಚ್.ಎಸ್ ದೊರೆಸ್ವಾಮಿಯವರ ನೇತೃತ್ವದಲ್ಲಿ ವಿಶಿಷ್ಟಿ ಹೋರಾಟ ನಡೆಯಲಿದೆ.

- Advertisement -
- Advertisement -

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ವತಿಯಿಂದ ಸ್ವಾತಂತ್ರ್ಯ ಸೇನಾನಿ ಎಚ್.ಎಸ್ ದೊರೆಸ್ವಾಮಿಯವರ ನೇತೃತ್ವದಲ್ಲಿ  ಆಗಸ್ಟ್ 14ರ ಸಂಜೆಯಿಂದ ಆಗಸ್ಟ್ 15ರ ಸಂಜೆವರೆಗೂ ಬಡವರಿಗೆ ಭೂಮಿ ಮತ್ತು ವಸತಿಗಾಗಿ ವಿಶಿಷ್ಟ ಆಂದೋಲನ ಬೆಂಗಳೂರಿನಲ್ಲಿ ನಡೆಯಲಿದೆ.

• ಆಗಸ್ಟ್ 14ರ ಸೂರ್ಯಾಸ್ತದೊಂದಿಗೆ ಹಣತೆಯ ಮೆರವಣಿಗೆ – ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಬನಪ್ಪ ಪಾರ್ಕಿಗೆ.
• ಆಗಸ್ಟ್ 14–15ರ ಇಡೀ ರಾತ್ರಿ ಪ್ರತಿರೋಧ ಕಾರ್ಯಕ್ರಮಗಳು – ಭಾಷಣಗಳು, ಹೋರಾಟದ ಹಾಡುಗಳು, ರೂಪಕಗಳು ಇತ್ಯಾದಿ.
• ಮಧ್ಯರಾತ್ರಿ 11.30ರಿಂದ 12: ಮುಖ್ಯ ಅತಿಥಿ ಚಂದ್ರಶೇಖರ ಆಜಾದ್ ‘ರಾವಣ’ರಿಂದ ಸಂಘರ್ಷದ ಸಂದೇಶ.
• ನಡುರಾತ್ರಿ 12.05ಕ್ಕೆ ಸ್ವಾತಂತ್ರ್ಯ ಸೇನಾನಿ ಎಚ್.ಎಸ್.ದೊರೆಸ್ವಾಮಿಯವರಿಂದ ಧ್ವಜಾರೋಹಣ ಹಾಗೂ ನಿಜ ಸ್ವಾತಂತ್ರ್ಯದ ಕರೆ
• ಆಗಸ್ಟ್ 15ರ ಮುಂಜಾನೆ 9 ಗಂಟೆಗೆ ಹಕ್ಕಿಗಾಗಿ ನಮ್ಮ ಹೆಜ್ಜೆ – ಬನಪ್ಪ ಪಾರ್ಕಿನಿಂದ ಪೆರೇಡ್ ಗ್ರೌಂಡ್ ಕಡೆಗೆ.

ಈ ಕುರಿತು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ನೂರ್ ಶ್ರೀಧರ್ ರವರು “ಬಡಜನರು ಸರ್ಕಾರಿ/ಖಾಸಗಿ ಜಾಗಗಳಲ್ಲಿ ಕಟ್ಟಿಕೊಂಡಿರುವ ಮನೆಗಳನ್ನು/ಗುಡಿಸಲುಗಳನ್ನು 94ಸಿ/94ಸಿಸಿ ಯೋಜನೆಯಡಿ ಸಕ್ರಮಗೊಳಿಸಿ ಹಕ್ಕುಪತ್ರಗಳನ್ನೂ ನೀಡುತ್ತಿಲ್ಲ. ಬದಲಿಗೆ ಜನರನ್ನು ಒಕ್ಕಲೆಬ್ಬಿಸುವ ಕಿರುಕುಳ ಮಾತ್ರ ಎಲ್ಲಾ ಕಡೆ ಆರಂಭವಾಗಿದೆ. ವಿಶೇಷವಾಗಿ ಅರಣ್ಯ ಇಲಾಖೆಯಂತೂ ಸಾವಿರಾರು ಎಕರೆ ಭೂಮಿ ಕಬಳಿಸಿರುವ ಬಲಾಢ್ಯರನ್ನು ಬಿಟ್ಟು, ಬದುಕಿಗೆ ಗೂಡು ಕಟ್ಟಿಕೊಂಡಿರುವ ಬಡವರ ಮೇಲೆ ಅಕ್ಷರಶಃ ‘ಬುಲ್‍ಡೋಜರ್ ಯುದ್ಧ’ ಸಾರಿದೆ! ಅದಕ್ಕಾಗಿ ಹೋರಾಟ ಅನಿವಾರ್ಯವಾಗಿದೆ” ಎಂದಿದ್ದಾರೆ.

“ಆತ್ಮಗಳನ್ನು ಮಾರಿಕೊಂಡಿರುವ” ಆಳುವವರನ್ನು, ಅವರ ಸರ್ಕಾರಗಳನ್ನು ಮತ್ತೊಮ್ಮೆ ಕಾರ್ಯಪ್ರವೃತ್ತರಾಗುವಂತೆ ಮಾಡುವುದಕ್ಕೋಸ್ಕರ, ಹಾಗೂ, ಆಳುವವರ ನಿಷ್ಕಾಳಜಿ, ನಿಷ್ಕ್ರಿಯತೆಗೆ ಛೀಮಾರಿ ಹಾಕಿ, ‘ಇದು ಸೋತು ಸುಮ್ಮನಾಗುವ ಚಳವಳಿಯಲ್ಲ’ ಎಂಬ ಸಂದೇಶವನ್ನು ಅವರಿಗೆ ರವಾನಿಸುವ ಹಾಗೂ ಹೋರಾಟವನ್ನು ಬಿಗಿ ಮತ್ತು ಬಿರುಸುಗೊಳಿಸುವ ಸಂಕಲ್ಪ ತೊಡುವ ಸಂದರ್ಭವಾಗಿ ಈ ಬಾರಿಯ ಸ್ವಾತಂತ್ರ್ಯ ದಿನವನ್ನು ಬಡಜನರ “ನಡುರಾತ್ರಿ ಸ್ವಾತಂತ್ರ್ಯೋತ್ಸವ”ವನ್ನಾಗಿ ಸಂಘಟಿಸಲಾಗುತ್ತಿದೆ ಎಂದು ನೂರ್ ಶ್ರೀಧರ್ ತಿಳಿಸಿದ್ದಾರೆ.

ಕರ್ನಾಟಕ ಜನಶಕ್ತಿಯ ಕುಮಾರ್ ಸಮತಳ ಮಾತನಾಡಿ “72 ವರ್ಷಗಳ ಹಿಂದೆ ದೇಶದ ಸ್ವಾತಂತ್ರ್ಯದ ಸಂಕೇತವಾಗಿ ರಾಷ್ಟ್ರಧ್ವಜಾರೋಹಣ ಮಾಡಿದ್ದ ಸ್ವಾತಂತ್ರ್ಯ ಸೇನಾನಿ ಶತಾಯುಷಿ ದೊರೆಸ್ವಾಮಿಯವರೇ ಈ ದಿನ ಬಡವರ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನೂ ನೆರವೇರಿಸುತ್ತಾರೆ ಮತ್ತು ಬಡವರ ನೈಜ ಸ್ವಾತಂತ್ರ್ಯಕ್ಕಾಗಿನ ಮತ್ತೊಂದು ಸೋಲೊಪ್ಪದ ಸಂಗ್ರಾಮಕ್ಕೆ ಚಾಲನೆಯನ್ನೂ ನೀಡುತ್ತಾರೆ. ದಲಿತ-ದಮನಿತರ ಸಿಡಿಲ ದನಿ, ಉತ್ತರ ಪ್ರದೇಶದ ‘ಭೀಮ್ ಆರ್ಮಿ’ ಸಂಸ್ಥಾಪಕ ಚಂದ್ರಶೇಖರ ಆಝಾದ್ ‘ರಾವಣ’ ಈ ಸ್ವಾತಂತ್ರ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸುತ್ತಾರೆ. ಈ ಅರ್ಥಪೂರ್ಣ ಸಂದರ್ಭಕ್ಕೆ ನಾಡಿನ ಸಹಸ್ರಾರು ಭೂಮಿ-ವಸತಿ ವಂಚಿತರ ಜೊತೆಯಲ್ಲಿ ನಾಡಿನೆಲ್ಲೆಡೆಯ ಹಿರಿಯ ಹೋರಾಟಗಾರರು, ಸಂಘಟನೆಗಳ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಸಾಕ್ಷಿಯಾಗಲಿದ್ದಾರೆ ಎಂದರು.

ದೇಶದ ಕಟ್ಟಕಡೆಯ ಪ್ರಜೆಗೆ ಘನತೆಯಿಂದ ಬದುಕಲೊಂದು ತುಂಡು ಭೂಮಿ, ಮಾನದಿಂದ ಬಾಳಲೊಂದು ಸೂರು – ಇಷ್ಟನ್ನಾದರೂ ದೊರಕಿಸಬೇಕೆಂಬ ಗುರಿಯೊಂದಿಗೆ ವಿವಿಧ ಜನಪರ ಹೋರಾಟನಿರತ ಸಂಘಟನೆಗಳು ಒಟ್ಟುಗೂಡಿ ಮೂರು ವರ್ಷಗಳ ಹಿಂದೆ 2016ರಲ್ಲಿ [ಮಾಜಿ ಮುಖ್ಯಮಂತ್ರಿ ದೇವರಾಜ ಅರಸರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ] ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ರೂಪ ತಾಳಿತು. ಈ ಸಮಿತಿಯ ನೇತೃತ್ವದಲ್ಲಿ ಸತತವಾಗಿ ನಡೆಸಿದ ಹೋರಾಟಗಳ ಫಲವಾಗಿ 2018ರ ಜನವರಿಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ, ಸಂಬಂಧಿತ ಇಲಾಖೆಗಳ ಮಂತ್ರಿಗಳ/ಪ್ರಧಾನ ಕಾರ್ಯದರ್ಶಿಗಳ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಹಾಗೂ ದೊರೆಸ್ವಾಮಿಯವರ ನೇತೃತ್ವದ ಹೋರಾಟಗಾರರ ನಿಯೋಗದ ಸಮ್ಮುಖದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.

ಆ ಸಭೆಯಲ್ಲಿ ಚಳವಳಿ ಮುಂದಿಟ್ಟ ಎಲ್ಲಾ ಹಕ್ಕೊತ್ತಾಯಗಳನ್ನು ಸರ್ಕಾರ ಒಪ್ಪಿದ್ದಲ್ಲದೆ, ಸಮಸ್ಯೆಯ ತ್ವರಿತ ಪರಿಹಾರಕ್ಕಾಗಿ ಎಲ್ಲ ಸಂಬಂಧಿತ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಹೋರಾಟ ಸಮಿತಿಯ ಇಬ್ಬರು ಪ್ರತಿನಿಧಿಗಳನ್ನೊಳಗೊಂಡ “ಉನ್ನತ ಮಟ್ಟದ ಸಮಿತಿ”ಯನ್ನು ರಚಿಸಿತು. ಜೊತೆಗೆ, 2005ರವರೆಗೂ ಬಗರ್‍ಹುಕುಂ ಉಳುಮೆ ಮಾಡುತ್ತಿದ್ದವರೂ ಸಹ ಹೊಸದಾಗಿ ಭೂ ಮಂಜೂರಾತಿಗೆ ಫಾರಂ 57ರಡಿ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಿ, ಕಾಯ್ದೆ ತಿದ್ದುಪಡಿಯನ್ನೂ ಮಾಡಿತು. ಸುಮಾರು 4 ಲಕ್ಷಕ್ಕಿಂತ ಹೆಚ್ಚು ಜನ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಹಳೇ ಫಾರಂ 50-53ರ ಅರ್ಜಿಗಳೇ ವಿಲೇವಾರಿಯಾಗಿಲ್ಲ, ಹೊಸ ಅರ್ಜಿಗಳನ್ನು ಮುಟ್ಟಿಯೂ ಇಲ್ಲ, ಭೂ ಮಂಜೂರಾತಿ ಮಾಡುವ ಸಮಿತಿಗಳನ್ನೇ ಪುನರ್ರಚಿಸಿಲ್ಲ ಎಂದು ಸಮಿತಿಯು ದೂರಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...