ಚುನಾವಣಾ ಬಾಂಡ್ ಕುರಿತು ಚುನಾವಣಾ ಆಯೋಗಕ್ಕೆ ಮಾಹಿತಿಯನ್ನು ನೀಡಲು ಕಾಲಾವಕಾಶ ಕೋರಿ ಎಸ್ಬಿಐ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಆ ಬಳಿಕ ಎಸ್ಬಿಐ ದೇಶದಲ್ಲಿ ಭಾರೀ ಟೀಕೆಯನ್ನು ಎದುರಿಸಿದೆ. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ಅಧ್ಯಕ್ಷ ದಿನೇಶ್ ಖೇರಾ ಅವರ ರಾಜೀನಾಮೆಗೆ ಮಹಾರಾಷ್ಟ್ರ ಸ್ಟೇಟ್ ಬ್ಯಾಂಕ್ ನೌಕರರ ಒಕ್ಕೂಟ ಆಗ್ರಹಿಸಿದೆ.
ನಿವೃತ್ತಿಯ ಮುಂಚೆಯೇ ಅಧಿಕಾರದ ವಿಸ್ತರಣೆಯನ್ನು ಪಡೆದಿದ್ದ ದಿನೇಶ್ ಖೇರಾ, ಬ್ಯಾಂಕಿಗೆ ಕೆಟ್ಟ ಹೆಸರನ್ನು ತಂದಿದ್ದಾರೆ ಎಂದು ಸ್ಟೇಟ್ ಬ್ಯಾಂಕ್ ನೌಕರರ ಒಕ್ಕೂಟ ಹೇಳಿದೆ. ದಿನೇಶ್ ಖೇರಾ ನಡೆಯಿಂದ ಬ್ಯಾಂಕಿನ ಇಮೇಜ್ಗೆ ಹಾನಿಯಾಗಿದೆ ಮತ್ತು ಪಾರದರ್ಶಕತೆ ಮತ್ತು ಕಾರ್ಪೊರೇಟ್ ಆಡಳಿತದ ಮೇಲಿನ ಬ್ಯಾಂಕಿನ ವಿಶ್ವಾಸಾರ್ಹತೆಯ ಮೇಲೆ ಪ್ರಭಾವ ಬೀರಿದೆ. ಆದ್ದರಿಂದ ಎಸ್ಬಿಐ ಅಧ್ಯಕ್ಷ ಸ್ಥಾನದಿಂದ ದಿನೇಶ್ ಖೇರಾ ಕೆಳಗಿಳಿಯಬೇಕು ಎಂದು ಮಹಾರಾಷ್ಟ್ರ ಸ್ಟೇಟ್ ಬ್ಯಾಂಕ್ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದೇವಿದಾಸ್ ತುಳಜಾಪುರಕರ್ ಹೇಳಿದ್ದಾರೆ.
ದಿನೇಶ್ ಖೇರಾ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದಾರೆ. ಅವರು ಅಕ್ಟೋಬರ್ 7, 2020 ರಂದು ಸ್ಥಾನವನ್ನು ಪಡೆದರು ಮತ್ತು ಅವರ ಅವಧಿಯು ಆಗಸ್ಟ್ 2024ರಲ್ಲಿ ಕೊನೆಗೊಳ್ಳಲಿದೆ. ಖೇರಾ ಅವರು ಬ್ಯಾಂಕಿಂಗ್ ಉದ್ಯಮದಲ್ಲಿ ವ್ಯಾಪಕ ಅನುಭವ ಹೊಂದಿರುವ ಬ್ಯಾಂಕರ್ ಆಗಿದ್ದಾರೆ. ಅವರು 1984ರಲ್ಲಿ ಎಸ್ಬಿಐಗೆ ಪ್ರೊಬೇಷನರಿ ಅಧಿಕಾರಿಯಾಗಿ ಸೇರಿದರು ಮತ್ತು ಬ್ಯಾಂಕಿನೊಳಗೆ ವಿವಿಧ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.
SBI employees react :https://t.co/dnEQV10sjy
— CommodoreLokeshBatra (@CommodoreBatra) March 13, 2024
ಚುನಾವಣಾ ಬಾಂಡ್ಗಳ ಮಾಹಿತಿ ನೀಡಿದ ಎಸ್ಬಿಐ
ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಬಳಿಕ ಚುನಾವಣಾ ಬಾಂಡ್ಗಳ ಕುರಿತ ಮಾಹಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ನ್ಯಾಯಾಲಯದ ಆದೇಶದಂತೆ ಎಸ್ ಬಿಐ ನೀಡಿರುವ ಮಾಹಿತಿಯನ್ನು ಮಾರ್ಚ್ 15ರಂದು ಚುನಾವಣಾ ಆಯೋಗ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಬೇಕಿದೆ.
ಚುನಾವಣಾ ಬಾಂಡ್ಗಳ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲು ಜೂನ್ 30ರವರೆಗೆ ಸಮಯ ವಿಸ್ತರಿಸುವಂತೆ ಕೋರಿ ಎಸ್ಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಾ.11ರಂದು ತಿರಸ್ಕರಿಸಿತ್ತು. ಮಾ.12ರ ಬ್ಯಾಂಕ್ ವ್ಯವಹಾರ ಕೊನೆಗೊಳ್ಳುವ ಮುನ್ನ ಮಾಹಿತಿ ಒದಗಿಸಲು ಖಡಕ್ ಆದೇಶ ನೀಡಿತ್ತು.
ಫೆ.15ರಂದು ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ಬಾಂಡ್ಗಳ ಕುರಿತು ಮಾಹಿತಿಯನ್ನು ಒದಗಿಸುವಂತೆ ಎಸ್ಬಿಐಗೆ ಸೂಚಿಸಿತ್ತು. ಈ ಮಾಹಿತಿಯನ್ನು ಮಾರ್ಚ್ 12ರೊಳಗೆ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.
ಇದನ್ನು ಓದಿ: ಖಾಸಿಮ್ ಖುರೇಷಿ ಗುಂಪು ಹತ್ಯೆ ಪ್ರಕರಣ: 10 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ