ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್ಯು)ನಲ್ಲಿ ವಿಕಲಚೇತನ ಪಿಎಚ್ಡಿ ವಿದ್ಯಾರ್ಥಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಥಳಿಸಿದ್ದಾರೆಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಸಂಶೋಧನಾ ವಿದ್ಯಾರ್ಥಿಯನ್ನು ಫಾರೂಕ್ ಆಲಂ ಎಂದು ಗುರುತಿಸಲಾಗಿದೆ. ಅವರು ಎನ್ಎಸ್ಯುಐನ ಕಾರ್ಯಕರ್ತರಾಗಿದ್ದಾರೆ.
ಕಾವೇರಿ ಹಾಸ್ಟೆಲ್ನಲ್ಲಿ ಇಂದು ಭೀಕರ ಘಟನೆ ನಡೆದಿದ್ದು, ವಾರ್ಡನ್ ಮತ್ತು ಅವರ ಸಹವರ್ತಿ ಎಬಿವಿಪಿ ಗೂಂಡಾಗಳು ಎನ್ಎಸ್ಯುಐ ಕಾರ್ಯಕರ್ತ ಮತ್ತು ಜೆಎನ್ಯು ಸಂಶೋಧನಾ ವಿದ್ಯಾರ್ಥಿ ಫಾರೂಕ್ ಆಲಂ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎನ್ಎಸ್ಯುಐ ಈ ಬಗ್ಗೆ ಟ್ವೀಟ್ ಮಾಡಿದೆ.
ಎಬಿವಿಪಿ ಕಾರ್ಯಕರ್ತರ ಹಲ್ಲೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಯನ್ನು ದೆಹಲಿಯ ಏಮ್ಸ್ಗೆ ದಾಖಲಿಸಲಾಗಿದೆ.
ಜೆಎನ್ಯುನಿಂದ ಪಿಎಚ್ಡಿ ವ್ಯಾಸಂಗ ಮಾಡುತ್ತಿರುವ ಫಾರೂಕ್ ಇನ್ನೆರಡು ತಿಂಗಳಲ್ಲಿ ಪಿಎಚ್ಡಿ ಪೂರ್ಣಗೊಳಿಸುವುದರಲ್ಲಿದ್ದರು. ಕಾವೇರಿ ಹಾಸ್ಟೆಲ್ನಲ್ಲಿದ್ದ ಫಾರೂಕ್ಗೆ ಕೊಠಡಿಯನ್ನು ಖಾಲಿ ಮಾಡಲು ಸೂಚಿಸಲು ಜೆಎನ್ಯು ಆಡಳಿತವು ಮಧ್ಯಾಹ್ನ ಬಂದಾಗ ಈ ಘಟನೆ ಸಂಭವಿಸಿದೆ.
ಅವರ ಜೊತೆಗಿದ್ದ ಕೆಲವು ಎಬಿವಿಪಿ ಕಾರ್ಯಕರ್ತರು ಫಾರೂಕ್ ಜೊತೆ ಜಗಳವಾಡಿದ್ದಲ್ಲದೆ ಥಳಿಸಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದ ಅವರನ್ನು ನಂತರ ಆಂಬ್ಯುಲೆನ್ಸ್ ಮೂಲಕ ಏಮ್ಸ್ ಗೆ ಕರೆದೊಯ್ಯಲಾಗಿದೆ ಎಂದು ಎನ್ಎಸ್ಯುಐ ಹೇಳಿದೆ.
ಘಟನೆ ನಂತರ ಜೆಎನ್ಯು ಆಡಳಿತ ಮಂಡಳಿಯು ಪ್ರತಿಕ್ರಿಯಿಸಿದ್ದು, ಫಾರೂಕ್ ಹಾಸ್ಟೆಲ್ ತೊರೆಯುವಾಗ ಘಟನೆಗೆ ಕಾರಣವಾದ ವಿದ್ಯಾರ್ಥಿಗಳ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಹೇಳಿದೆ.
ಜೆಎನ್ಯು ಕ್ಯಾಂಪಸ್ನ ಎಸ್ಎಫ್ಐ ವಿದ್ಯಾರ್ಥಿ ಸಂಘ ಘಟನೆಯನ್ನು ಖಂಡಿಸಿದೆ ಮತ್ತು ಎಲ್ಲಾ ವಿದ್ಯಾರ್ಥಿಗಳು ಒಗ್ಗೂಡಿ ಎಬಿವಿಪಿ ವಿರುದ್ಧ ಪ್ರತಿಭಟಿಸುವಂತೆ ಕರೆ ನೀಡಿದೆ.
ಇದನ್ನು ಓದಿ: ಬೈಬಲ್ ಹಂಚುವುದು ಧಾರ್ಮಿಕ ಮತಾಂತರದ ಆಮಿಷವಲ್ಲ: ಅಲಹಾಬಾದ್ ಹೈಕೋರ್ಟ್