ಗುರುನಾನಕ್ ದೇವ್ ಅವರ 550 ನೇ ಜನ್ಮ ದಿನಾಚರಣೆಯ ಶುಭ ತಿಂಗಳಲ್ಲಿ 70 ವರ್ಷದ ಸಿಖ್ ವ್ಯಕ್ತಿಯೊಬ್ಬರು ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯ ಮಸೀದಿಗೆ ತನ್ನ ಭೂಮಿಯನ್ನು ದಾನ ಮಾಡಿದ್ದಾರೆ.
ನವೆಂಬರ್ 24 ರ ಭಾನುವಾರ ಮುಜಾಫರ್ನಗರ ಜಿಲ್ಲೆಯ ಪುರ್ಕಾಜಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾಮಾಜಿಕ ಕಾರ್ಯಕರ್ತ ಸುಖ್ಪಾಲ್ ಸಿಂಗ್ ಬೇಡಿ ಈ ಘೋಷಣೆ ಮಾಡಿದ್ದಾರೆ.
900 ಚದರ ಅಡಿ ಜಾಗದ ಭೂ ದಾಖಲೆಗಳನ್ನು ಅವರು ನಗರ ಪಂಚಾಯತ್ ಅಧ್ಯಕ್ಷ ಜಹೀರ್ ಫಾರೂಕಿ ಅವರಿಗೆ ಹಸ್ತಾಂತರಿಸಿದರು.
ಎಲ್ಲ ಜನರನ್ನು ಸಮಾನವಾಗಿ ಮತ್ತು ಗೌರವದಿಂದ ನಡೆಸುವ ಗುರುನಾನಕ್ ಅವರ ಬೋಧನೆಗಳನ್ನು ಉಲ್ಲೇಖಿಸಿ ಶಾಂತಿ ಮತ್ತು ಕೋಮು ಸೌಹಾರ್ದತೆಯ ಸಂದೇಶವನ್ನು ಹರಡಲು ತಾನು ಬಯಸುತ್ತೇನೆ ಎಂದು ಸುಖ್ಪಾಲ್ ಸಿಂಗ್ ಬೇಡಿ ಹೇಳಿದ್ದಾರೆ.
ಎಲ್ಲಾ ಧರ್ಮಗಳ ನಡುವೆ ಸಹೋದರತ್ವವನ್ನು ಬೆಳೆಸುವ ಹೆಜ್ಜೆಯಾಗಿ ಎರಡೂ ಸಮುದಾಯಗಳ ಜನರು ಬೇಡಿಯವರ ಕ್ರಮವನ್ನು ಸ್ವಾಗತಿಸಿದ್ದಾರೆ.
ಕಳೆದು ಮೂರು ವರ್ಷದ ಹಿಂದೆ ಇದೇ ಮುಝಾಫರ್ ನಗರದಲ್ಲಿ ಕೋಮು ಘರ್ಷಣೆಗಳು ನಡೆದು ಹಲವಾರು ಕೋಮು ಬೆಂಕಿಯಲ್ಲಿ ನರಳಿದ್ದರು. ಆಸ್ತಿ ಪಾಸ್ತಿ ನಷ್ಟದೊಂದಿಗೆ ಧರ್ಮಗಳ ನಡುವೆ ಅನೈಕ್ಯತೆಗೆ ಅದು ಕಾರಣವಾಗಿತ್ತು. ಅಂತಹ ಸ್ಥಳದಲ್ಲಿ ಬೇಡಿ ತೆಗೆದುಕೊಂಡಿರುವ ನಿಲುವು ಸರ್ವಧರ್ಮ ಸಮಭಾವಗಳ ಪರಿಕಲ್ಪನೆಗೆ ಮಾದರಿಯಾಗಿದೆ.
ಕೃಪೆ: ದಿ ಕ್ವಿಂಟ್