ದಿಢೀರ್ ಬಿಜೆಪಿ ಜೊತೆ ಗುರುತಿಸಿಕೊಂಡು ಉಪಮುಖ್ಯಮಂತ್ರಿಯಾಗಿ ರಾಜಿನಾಮೆ ನೀಡಿದ್ದ ಅಜಿತ್ ಪವಾರ್ ಬುಧವಾರ ಎನ್.ಸಿ.ಪಿ ಶಾಸಕರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಒಂದು ವಾರದಿಂದ ಎನ್.ಸಿ.ಪಿಯಿಂದ ದೂರ ಉಳಿದಿದ್ದ ಅಜಿತ್ ಪವಾರ್ ಇಂದು ಪಕ್ಷದ ತೆಕ್ಕೆಗೆ ಬಂದಿರುವುದು ಕುತೂಹಲ ಮೂಡಿಸಿದೆ.
ಅಲ್ಲದೆ ಅಜಿತ್ ಪವಾರ್ ಬಂದ ಕೂಡಲೇ ಎನ್ಸಿಪಿಯ ಸುಪ್ರಿಯ ಸುಳೆ ಅವರನ್ನು ಅಪ್ಪಿಕೊಂಡು ಸ್ವಾಗತಿಸಿದ್ದಾರೆ.
ಮಹಾರಾಷ್ಟ್ರ ರಾಜಧಾನಿ ಮುಂಬೈನ ವೈ.ಬಿ.ಚವಾಣ್ ಕೇಂದ್ರದಲ್ಲಿ ಉದ್ದವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದ ಕುರಿತು ಚರ್ಚಿಸಲು ಕರೆದಿದ್ದ ಸಭೆಗೆ ಆಗಮಿಸಿದ ಅಜಿತ್ ಪವಾರ್ ಹಿರಿಯ ಶಾಸಕರನ್ನು ಭೇಟಿ ಮಾಡಿದರು.
ಮಹಾರಾಷ್ಟ್ರ ಎನ್.ಸಿ.ಪಿ ಅಧ್ಯಕ್ಷ ಜಯಂತ್ ಪಾಟೀಲ್, ಪಕ್ಷದ ಹಿರಿಯ ನಾಯಕ ಛಗನ್ ಬುಜ್ಬಲ್, ದಿಲೀಪ್ ವಾಲ್ಸೆ ಪಾಟೀಲ್ ಅವರು ಅಜಿತ್ ಪವಾರ್ ಜೊತೆ ಕೆಲ ಕಾಲ ಚರ್ಚೆ ನಡೆಸಿದರು.
ಅಜಿತ್ ಪವಾರ್ ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಪಕ್ಷದ ಶಾಸಕಾಂಗ ನಾಯಕತ್ವದಿಂದ ಅವರನ್ನು ತೆಗೆದುಹಾಕಿದ್ದರೂ ಸಹ ಪಕ್ಷದಿಂದ ಉಚ್ಚಾಟಿಸಲಿರಲಿಲ್ಲ. ಬಹುಮತ ಸಿಗುವುದು ಸಾಧ್ಯವಿಲ್ಲವೆಂಬುದನ್ನು ಅರಿತ ಅಜಿತ್ ವೈಯಕ್ತಿಕ ಕಾರಣ ನೀಡಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಈ ನಡುವೆಯೂ ಅಜಿತ್ ಅವರನ್ನು ಪಕ್ಷದ ತೆಕ್ಕೆಗೆ ತರುವ ಪ್ರಯತ್ನಗಳು ನಡೆಯುತ್ತಲೇ ಇದ್ದವು. ಅಂದಿಗೂ, ಇಂದಿಗೂ, ಎಂದೆಂದಿಗೂ NCPಯಲ್ಲಿಯೇ ಇದ್ದೇನೆ ಎಂದು ಅಜಿತ್ ಕೂಡ ಹೇಳುತ್ತಿದ್ದರು. ಹೀಗಾಗಿ ಇಂದು ವೈ.ಬಿ.ಚವಾಣ್ ಕೇಂದ್ರಕ್ಕೆ ಭೇಟಿ ನೀಡಿದ ಅಜಿತ್ ಶಾಸಕರನ್ನು ಭೇಟಿಯಾಗಿ ಮಾತನಾಡಿದರು. ಅಜಿತ್ ಪವಾರ್ಗೆ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವುದರ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ಆದರೆ ಅದನ್ನು ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ನಿರ್ಧರಿಸಲಿದ್ದಾರೆ ಎನ್ನಲಾಗುತ್ತಿದೆ.
ಇನ್ನೊಂದು ಕಡೆ ಕಾಂಗ್ರೆಸ್ ನಾಯಕರಾದ ಅಹಮದ್ ಪಟೇಲ್, ಕೆ.ಸಿ.ವೇಣುಗೋಪಾಲ್ ಅವರು ಎನ್.ಸಿ.ಪಿ ಮುಖ್ಯಸ್ಥ ಶರದ್ ಪವಾರ್ ನೀವಾಸಕ್ಕೆ ಭೇಟಿ ನೀಡಿದ್ದು ನಾಳೆಯೇ ಪ್ರಮಾಣ ವಚನ ಸ್ವೀಕಾರ ಮತ್ತು ಖಾತೆ ಹಂಚಿಕೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.