ಒಂದು ಸಮುದಾಯದ ಅಲ್ಪಸಂಖ್ಯಾತ ಸ್ಥಾನವನ್ನು ರಾಜ್ಯಮಟ್ಟದಲ್ಲಿ ನಿರ್ಧಾರವಾಗಬೇಕೇ ಹೊರತು ರಾಷ್ಟ್ರಮಟ್ಟದಲ್ಲಿ ಅಲ್ಲ ಎಂದು ಕೋರಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಯಾವುದೇ ನಿಲುವು ಪ್ರಕಟಿಸದ ಒಕ್ಕೂಟ ಸರ್ಕಾರಕ್ಕೆ ನ್ಯಾಯಾಲಯವು ದಂಡ ವಿಧಿಸಲಾಗಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ. ಸುಂದ್ರೇಶ್ ಪೀಠವು ಜನವರಿ 7ರೊಳಗೆ ಅಫಿದಾವಿತ್ ಸಲ್ಲಿಸಲು ಒಕ್ಕೂಟ ಸರ್ಕಾರಕ್ಕೆ ಕೊನೆಯ ಅವಕಾಶ ನೀಡಿತ್ತು. ಆದರೂ, ಸರ್ಕಾರ ತನ್ನ ನಿಲುವು ಪ್ರಕಟಿಸಿ ಅಫಿದಾವಿತ್ ಸಲ್ಲಿಸದೆ ಇರುವುದಕ್ಕೆ ರೂ. 7,500 ದಂಡ ವಿಧಿಸಲಾಗಿದೆ.
ಇದನ್ನೂ ಓದಿ: ಬಿಜೆಪಿಯನ್ನು ಬಂಗಾಳಕೊಲ್ಲಿಗೆ ಎಸೆಯಿರಿ: ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಕರೆ
ಈಗಾಗಲೇ ಅಫಿದಾವಿತ್ ಕರಡು ಸಿದ್ಧವಾಗಿದ್ದು, ಕೊರೊನಾ ಕಾರಣ ನ್ಯಾಯಾಲಯಕ್ಕೆ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ತಿಳಿಸಿದ್ದನ್ನು ಒಪ್ಪಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದೆ. “ನಮಗೆ ಒಪ್ಪಿಕೊಳ್ಳಲು ಕಷ್ಟವಾಗುವಂಥ ನೆಪಗಳನ್ನು ಹೇಳಬೇಡಿ” ಎಂದು ನ್ಯಾಯಾಲಯ ಒಕ್ಕೂಟ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಈ ವಿಚಾರವಾಗಿ ಸರ್ಕಾರಕ್ಕೆ ತಮ್ಮ ಅಭಿಪ್ರಾಯ ತಿಳಿಸಲು ಅಫಿದಾವತ್ ಸಲ್ಲಿಸಲು 4 ವಾರಗಳ ಅಂತಿಮ ಗಡುವು ನೀಡಿದೆ.
ಈ ವಿಚಾರವಾಗಿ ಬಿಜೆಪಿ ಸದಸ್ಯೆ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಅರ್ಜಿಯನ್ನೇ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದ್ದು ಕುತೂಹಲದ ವಿಚಾರ. ಸಂಸ್ಥೆಗಳನ್ನು ನಡೆಸಲು ಸಾಧ್ಯವಾಗುವಂತೆ, ರಾಜ್ಯವೊಂದರಲ್ಲಿ ಇರುವ ಒಂದು ಸಮುದಾಯದ ಜನಸಂಖ್ಯಾ ಆಧಾರದ ಮೇಲೆ ಧಾರ್ಮಿಕ ಮತ್ತು ಹಿಂದುಳಿದ ಭಾಷಿಕರು ಎಂದು ಘೋಷಿಸಬೇಕು ಎಂದು ಅವರು ಅರ್ಜಿಯಲ್ಲಿ ಹೇಳಿದ್ದರು.
ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಕಾಯ್ದೆಯ ಸೆಕ್ಷನ್ 2 (ಎಫ್) ಪ್ರಕಾರ ರಾಷ್ಟ್ರವ್ಯಾಪಿ ಜನಸಂಖ್ಯೆ ಆಧರಿಸಿ ಅಲ್ಪಸಂಖ್ಯಾತ ಸಮುದಾಯವನ್ನು ಘೋಷಿಸುವ ಅಧಿಕಾರ ಒಕ್ಕೂಟ ಸರ್ಕಾರಕ್ಕೆ ಇದೆ. ರಾಷ್ಟ್ರವ್ಯಾಪಿ ಜನಸಂಖ್ಯೆ ಆಧಾರದ ಮೇರೆಗೆ ಅಲ್ಪಸಂಖ್ಯಾತರ ಸ್ಥಾನಮಾನ ನಿರ್ಧರಿಸುವುದು ಹಿಂದುಗಳು ಕಡಿಮೆ ಇರುವ ರಾಜ್ಯಗಳ ಹಿತಾಸಕ್ತಿಗೆ ಮಾರಕವಾಗಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: BJP ಸದಸ್ಯರನ್ನೆ ‘ಬಿಜೆಪಿ ಬೆಂಬಲಿಸುವ ಸಾಮಾನ್ಯ ಮುಸ್ಲಿಮರು’ ಎಂದು ಚಿತ್ರಿಸಿದ ‘ಟಿವಿ9 ಭಾರತವರ್ಷ’