- Advertisement -
ಕೋಮು ಸೌಹಾರ್ದತೆ ಕದಡುವ, ಧರ್ಮಗಳ ಕುರಿತು ದ್ವೇಷ ಭಾವನೆ ಬಿತ್ತುವ ವರದಿಗಳಿಂದಾಗಿ ದೇಶಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ದೆಹಲಿಯಲ್ಲಿ ನಡೆದ ತಬ್ಲೀಗಿ ಜಮಾತ್ನಿಂದಾಗಿ ಕೋವಿಡ್ ಸೋಂಕು ಹರಡಿತು ಎಂದು ಹಬ್ಬಿಸಿದ ವರದಿಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯ, “ಪ್ರತಿಯೊಂದನ್ನೂ ಧರ್ಮದ ಆಯಾಮದಲ್ಲಿ ನೋಡುವ ಪ್ರವೃತ್ತಿ ಮಾಧ್ಯಮಗಳಲ್ಲಿ ಕಂಡುಬರುತ್ತಿದೆ. ಇದರ ಅಂತಿಮ ಫಲವಾಗಿ ದೇಶಕ್ಕೆ ಕೆಟ್ಟಹೆಸರು ಪ್ರಾಪ್ತವಾಗುತ್ತದೆ” ಎಂದು ಎಚ್ಚರಿಸಿದೆ.
ಫೇಸ್ಬುಕ್, ಟ್ಟಿಟ್ಟರ್, ಯೂಟ್ಯೂಬ್ಗಳನ್ನು ಉಲ್ಲೇಖಿಸಿರುವ ಸುಪ್ರೀಂಕೋರ್ಟ್, ವೆಬ್ ಪೋರ್ಟಲ್ಗಳ ಕುರಿತು ಬೇಸರ ವ್ಯಕ್ತಪಡಿಸಿದ್ದು, “ಸಂಸ್ಥೆಗಳ ಕುರಿತು, ನ್ಯಾಯಾಧೀಶರ ಕುರಿತು, ಯಾವುದೇ ವಿಚಾರವಾದರೂ ಮನಬಂದಂತೆ ವೆಬ್ ಪೋರ್ಟಲ್ಗಳು ಬರೆಯುತ್ತಿವೆ. ವೆಬ್ ಪೋರ್ಟಲ್ಗಳು ವಿಶ್ವಾಸಾರ್ಹವಲ್ಲ. ಸಾಮಾನ್ಯ ಜನರ ಬಗ್ಗೆ ಯಾವುದೇ ಕಾಳಜಿ ಅವುಗಳಿಗಿಲ್ಲ” ಎಂದು ಅಭಿಪ್ರಾಯಪಟ್ಟಿದೆ. ತಬ್ಲೀಗಿ ಜಮಾತ್ ಕುರಿತು ಹಬ್ಬಿಸಿದ ಸುಳ್ಳು ಸುದ್ದಿಗಳನ್ನು ಕೋರ್ಟ್ ಕಟುವಾಗಿ ಟೀಕಿಸಿದೆ.
ಸರ್ಕಾರವನ್ನು ಪ್ರತಿನಿಧಿಸಿ ಮಾತನಾಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಕೋಮು ಸೌಹಾರ್ದತೆ ಕದಡುವ ಸುದ್ದಿಗಳಷ್ಟೇ ಅಲ್ಲ, ಸುಳ್ಳು ಸುದ್ದಿಗಳನ್ನೂ ಪೋರ್ಟಲ್ ಗಳಲ್ಲಿ ಕಾಣಬಹುದು” ಎಂದಿದ್ದಾರೆ.
“ಯಾರು ಬೇಕಾದರೂ ಯೂಟ್ಯೂಬ್ ಚಾನೆಲ್ ತೆರೆಯಬಹುದಾಗಿದ್ದು, ಯೂಟ್ಯೂಬ್ಗೆ ಹೋಗಿ ನೋಡಿದರೆ ಎಷ್ಟೊಂದು ಸುಳ್ಳುಗಳನ್ನು ಬಿತ್ತಲಾಗುತ್ತಿದೆ ಎಂಬುದು ತಿಳಿಯುತ್ತಿದೆ. ಸುಳ್ಳು ಸುದ್ದಿಗಳು ಹಾಗೂ ವೆಬ್ ಪೋರ್ಟಲ್ಗಳಿಗೆ ಕಡಿವಾಣ ಹಾಕುವ ಪ್ರಯತ್ನಗಳು ನಡೆಯುತ್ತಿಲ್ಲ. ಕನಿಷ್ಟ ಪಕ್ಷ ನ್ಯಾಷನಲ್ ಬ್ರಾಡ್ ಕಾಸ್ಟಿಂಗ್ ಸ್ಟಾಂಡರ್ಡ್ ಅಥಾರಿಟಿಯಾದರೂ ಜನರ ಕುರಿತು ಕಾಳಜಿ ತೋರಬೇಕು” ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಸೂಚಿಸಿದ್ದಾರೆ.
- Advertisement -
ಇದನ್ನೂ ಓದಿ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಅಲಹಾಬಾದ್ ಹೈಕೋರ್ಟ್ ವಿವಾದಾತ್ಮಕ ನಿಲುವು