ದೇಶಾದ್ಯಂತ ಭಾರಿ ಕೋಲಾಹಲಕ್ಕೆ ಕಾರಣವಾದ ತಮಿಳುನಾಡಿನ ಜಯರಾಜ್ ಮತ್ತು ಅವರ ಪುತ್ರ ಬೆನಿಕ್ಸ್ ಅವರ ಲಾಕಪ್ ಡೆತ್ ಪ್ರಕರಣದಲ್ಲಿ ಒಂಬತ್ತು ಪೊಲೀಸರ ಮೇಲೆ ಕೊಲೆ, ಪಿತೂರಿ ಮತ್ತು ಇತರ ಅಪರಾಧಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಚಾರ್ಜ್ಶೀಟ್ ದಾಖಲಿಸಿದೆ.
ಕಳೆದ ಜೂನ್ನಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಮೊಬೈಲ್ ಫೋನ್ ಅಂಗಡಿಯೊಂದನ್ನು ನಡೆಸುತ್ತಿದ್ದ ತಂದೆ-ಮಗ ಜೋಡಿಯನ್ನು ಲಾಕ್ಡೌನ್ ನಿಯಮ ಉಲ್ಲಂಘನೆ ಎಂಬ ಆರೋಪದ ಮೇಲೆ ಸಾಥನ್ಕುಲಂ ಪೊಲೀಸರು ಬಂಧಿಸಿದ್ದರು. ಇಬ್ಬರಿಗೂ ಠಾಣೆಯಲ್ಲಿ ಚಿತ್ರಹಿಂಸೆ ನೀಡಲಾಗಿತ್ತು. ಲೈಂಗಿಕವಾಗಿ ಹಿಂಸಿಸಲಾಗಿತ್ತು. ಚಿತ್ರಹಿಂಸೆಯಿಂದ ಇಬ್ಬರ ಗುದನಾಳಗಳಿಂದ ರಕ್ತ ಹರಿಯುತ್ತಿತ್ತು. ನಂತರ ಅವರಿಬ್ಬರೂ ಕೋವಿಲ್ಪಟ್ಟಿ ಜೈಲಿನಲ್ಲಿ ಮೃತಪಟ್ಟಿದ್ದರು.
ಈ ಪ್ರಕರಣ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿ, ಬೃಹತ್ ಪ್ರತಿಭಟನೆಗಳು ನಡೆದಿದ್ದವು. ನಂತರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. 9 ಪೊಲೀಸರ ಮೇಲೆ ಚಾರ್ಜ್ಶೀಟ್ ಸಲ್ಲಿಸಿದ ಸಿಬಿಐ ಪೊಲೀಸರು ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿರುವ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಲಾಕಪ್ ಡೆತ್: ಪೊಲೀಸ್ ದೌರ್ಜನ್ಯಕ್ಕೆ ಕೊನೆಯೆಂದು? ಮಾತು ಸೋತ ಭಾರತ
ಸಿಬಿಐ ತನ್ನ ಚಾರ್ಜ್ಶೀಟ್ನಲ್ಲಿ ಅಂದಿನ ಇನ್ಸ್ಪೆಕ್ಟರ್ ಮತ್ತು ಎಸ್ಎಚ್ಒ ಎಸ್. ಶ್ರೀಧರ್, ಸಬ್ ಇನ್ಸ್ಪೆಕ್ಟರ್ಗಳಾದ ಕೆ.ಬಾಲಕೃಷ್ಣನ್, ಪಿ.ರಘುಗಣೇಶ್, ಹೆಡ್ ಕಾನ್ಸ್ಟೆಬಲ್ಗಳಾದ ಎಸ್.ಮುರುಗನ್, ಎ.ಸಮದುರೈ, ಮತ್ತು ಕಾನ್ಸ್ಟೆಬಲ್ಗಳಾದ ಎಂ.ಮುತ್ತುರಾಜ, ಎಸ್.ಚೆಲ್ಲದುರೈ, ಎಕ್ಸ್.ಫ್ರಾನ್ಸಿಸ್ ಮತ್ತು ಎಸ್.ವಿಲುಮುತ್ತು ಎಂಬ 9 ಮಂದಿ ಪೊಲೀಸರ ಹೆಸರುಗಳಿವೆ.
ಸೆಪ್ಟೆಂಬರ್ 30 ರಂದು ಆರೋಪಿಗಳ ಮೂರು ತಿಂಗಳ ಕಸ್ಟಡಿ ಮುಗಿಯುತ್ತಿರುವುದರಿಂದ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದೆ. ಪೊಲೀಸರ ಚಿತ್ರಹಿಂಸೆ ನಂತರ, ಪೊಲೀಸ್ ಅಧಿಕಾರಿಗಳು ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ ಮತ್ತು ಮೃತರ ಮೇಲೆ “ನಕಲಿ” ಆರೋಪಗಳನ್ನು ದಾಖಲಿಸಿದ್ದಾರೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ತನಿಖೆಯ ಸಮಯದಲ್ಲಿ, ಈ ಆರೋಪಿಗಳಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಅದರಲ್ಲಿ ಒಬ್ಬ ಆರೋಪಿ ಸಬ್ ಇನ್ಸ್ಪೆಕ್ಟರ್ಗೆ ಕೊರೊನಾ ಪಾಸಿಟಿವ್ ಆಗಿ, ಮೃತಪಟ್ಟರು. ಉಳಿದ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ಕೊರೊನಾ ಸಾಂಕ್ರಾಮಿಕ ನಡುವೆಯೂ ಸಿಬಿಐ ತಂಡವು ಮಧುರೈನಲ್ಲಿ ನಿರಂತರವಾಗಿ ಬೀಡುಬಿಟ್ಟು ಪ್ರಕರಣದ ಕುರಿತು ಅವಿರತವಾಗಿ ಕೆಲಸ ಮಾಡಿದೆ ಎಂದು ಸಿಬಿಐ ವಕ್ತಾರ ಆರ್.ಕೆ.ಗೌರ್ ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಲಾಕಪ್ ಡೆತ್ ಪ್ರಕರಣ: ಆರೋಪಿ ಎಸ್ಐ ಪಾಲ್ದೊರೈ ಕೊರೊನಾದಿಂದ ನಿಧನ
ತಂದೆ-ಮಗನನ್ನು 19.06.2020 ರ ಸಂಜೆ ಬಂಧಿಸಲಾಗಿದೆ ಮತ್ತು ಸಾಥನ್ಕುಲಂ ಪೊಲೀಸ್ ಠಾಣೆಯಲ್ಲಿ ಆರೋಪಿಗಳು ಸಂಜೆ ಮತ್ತು ಮಧ್ಯರಾತ್ರಿಯಲ್ಲಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಸಿಬಿಐ ತನಿಖೆಯಲ್ಲಿ ತಿಳಿದುಬಂದಿದೆ. ಹಿಂಸೆಯ ಪರಿಣಾಮವಾಗಿ ಜೂನ್ 22 ಮತ್ತು ಜೂನ್ 23ರ ಮಧ್ಯರಾತ್ರಿಯಲ್ಲಿ ಇಬ್ಬರೂ ಸಾವನ್ನಪ್ಪಿದರು.
ತನಿಖೆಯ ನಂತರ, ಎರಡೂ ಪ್ರಕರಣಗಳಲ್ಲಿ ಸಂಯೋಜಿತ ಚಾರ್ಜ್ಶೀಟ್ ದಾಖಲಿಸಲಾಗಿದೆ ಎಂದು ಗೌರ್ ಹೇಳಿದ್ದಾರೆ. ಈ ಪ್ರಕರಣದಲ್ಲಿ ಇತರ ವ್ಯಕ್ತಿಗಳ ಪಾತ್ರದ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.
ಆರೋಪಿಗಳನ್ನು ಹಿಂಸಿಸಲು ಲಾಠಿಗಳ ಬಳಕೆ ಮತ್ತು ರಕ್ತದ ಕಲೆಗಳನ್ನು ಹೊತ್ತ ಟೇಬಲ್ ಭೀಕರ ಅಪರಾಧಕ್ಕೆ ಸಾಕ್ಷಿಯಾಗಿದೆ. ಅಪರಾಧ ನಡೆದ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಯ ಹೇಳಿಕೆಯನ್ನು ಆಧರಿಸಿ ಈ ತನಿಖೆ ನಡೆದಿವೆ.