Homeಮುಖಪುಟತಮಿಳುನಾಡು: ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸೆಂಥಿಲ್ ಬಾಲಾಜಿ

ತಮಿಳುನಾಡು: ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸೆಂಥಿಲ್ ಬಾಲಾಜಿ

- Advertisement -
- Advertisement -

ಎಐಎಡಿಎಂಕೆ ಸರ್ಕಾರದಲ್ಲಿನ ಉದ್ಯೋಗಕ್ಕಾಗಿ ನಗದು ಹಗರಣದಲ್ಲಿ ಆರೋಪಿಯಾಗಿರುವ ಮಾಜಿ ಕ್ಯಾಬಿನೆಟ್ ಸಚಿವ ವಿ. ಸೆಂಥಿಲ್ ಬಾಲಾಜಿ ಫೆಬ್ರವರಿ 12ರಂದು ತಮ್ಮ ಡಿಎಂಕೆ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ತನ್ನ ಬಂಧನದಿಂದ ಸುಮಾರು ಒಂಬತ್ತು ತಿಂಗಳ ನಂತರ ಕೊನೆಗೂ ಸೆಂಥಿಲ್ ಬಾಲಾಜಿ ರಾಜೀನಾಮೆ ಸಲ್ಲಿಸಿದ್ದು, ಸ್ಟಾಲಿನ್ ಸಂಪುಟದಲ್ಲಿ ವಿದ್ಯುತ್, ಅಸಾಂಪ್ರದಾಯಿಕ ಇಂಧನ ನಿಷೇಧದ ಉಸ್ತುವಾರಿ ವಹಿಸಿದ್ದ ಅವರನ್ನು ಜೂನ್ 14, 2023 ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ನಂತರವೂ ಅವರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಸಂಪುಟದಲ್ಲಿ ಖಾತೆಯಿಲ್ಲದ ಸಚಿವರಾಗಿ ಮುಂದುವರಿದಿದ್ದರು.

ಹಿಂದಿನ ಎಐಎಡಿಎಂಕೆ ಸರ್ಕಾರದಲ್ಲಿ ರಾಜ್ಯ ಸಾರಿಗೆ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಉದ್ಯೋಗಕ್ಕಾಗಿ ನಗದು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಲಾಗಿತ್ತು. ಇದಕ್ಕೂ ಮುನ್ನ ಜನವರಿ 30 ರಂದು ಮದ್ರಾಸ್ ಹೈಕೋರ್ಟ್ ಸೆಂಥಿಲ್ ಬಾಲಾಜಿ 230 ದಿನಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿದ್ದರೂ ಸಚಿವ ಸ್ಥಾನವನ್ನು ಏಕೆ ಮುಂದುವರಿಸಿದ್ದಾರೆ ಎಂದು ಪ್ರಶ್ನಿಸಿತ್ತು.

ಉದ್ಯೋಗಕ್ಕಾಗಿ ನಗದು ಹಗರಣದಲ್ಲಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸೆಂಥಿಲ್ ಬಾಲಾಜಿ ಅವರನ್ನು ಜೂನ್ 2023 ರಲ್ಲಿ ಇಡಿ ಬಂಧಿಸಿತ್ತು. ಚೆನ್ನೈ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮಾಜಿ ಸಚಿವರ ಜಾಮೀನು ಅರ್ಜಿಯನ್ನು ಜನವರಿ 12 ರಂದು ಮೂರನೇ ಬಾರಿಗೆ ತಿರಸ್ಕರಿಸಿತು. ಅವರ ಜಾಮೀನು ಅರ್ಜಿಯನ್ನು ಈ ಹಿಂದೆ ಎರಡು ಬಾರಿ ವಜಾಗೊಳಿಸಲಾಗಿತ್ತು. ಸೆಪ್ಟೆಂಬರ್ 2023 ಮತ್ತು ಜೂನ್ 2023 ರಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು, ಅವರ ವಿರುದ್ಧದ ಆರೋಪಗಳು ವರ್ಗಬದ್ಧ ಎಂದು ಹೇಳಿ, ಬಾಲಾಜಿ ವಿರುದ್ಧದ ಅಪರಾಧದ ಆರೋಪದಲ್ಲಿ ಅವರು “ನಿರ್ದಿಷ್ಟ ಪಾತ್ರವನ್ನು” ಹೊಂದಿದ್ದಾರೆ ಎಂದು ಹೇಳಿತ್ತು. ಮದ್ರಾಸ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತಲಾ ಒಂದು ಬಾರಿ ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ನಿರಾಕರಿಸಿತು.

ಸೆಂಥಿಲ್ ಬಾಲಾಜಿ ಮನೆ ಮೇಲೆ ಇಡಿ ದಾಳಿ ನಡೆಸಿದ ನಂತರ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆ ನಂತರ ಜೂನ್‌ನಲ್ಲಿ ಅವರನ್ನು ಬಂಧಿಸಿದ್ದರು. ಚೆನ್ನೈನ ಓಮಂಡೂರ್ ಸರ್ಕಾರಿ ಆಸ್ಪತ್ರೆಯಲ್ಲಿ ಅವರ ಹೃದಯದಲ್ಲಿ ಮೂರು ಬ್ಲಾಕ್‌ಗಳನ್ನು ಪತ್ತೆಹಚ್ಚಿದ ವೈದ್ಯರು, ಆಂಜಿಯೋಗ್ರಾಮ್ ಅನ್ನು ನಡೆಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿತ್ತು. ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ನಂತರ ಅವರನ್ನು ಪುಝಲ್ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು.

ಸಿಎಂ ಸ್ಟಾಲಿನ್ ಸೇರಿದಂತೆ ಹಲವಾರು ಡಿಎಂಕೆ ಪಕ್ಷದ ಕಾರ್ಯಕರ್ತರು ಇಡಿ ಕ್ರಮಗಳು ರಾಜಕೀಯ ಕಿರುಕುಳಕ್ಕೆ ಸಮಾನವಾಗಿದೆ ಎಂದು ಆರೋಪ ಮಾಡಿದ್ದಾರೆ. ತಮಿಳುನಾಡಿನ ಡಿಎಂಕೆಯಂತಹ ಎದುರಾಳಿ ಪಕ್ಷಗಳ ವಿರುದ್ಧ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸೇಡು ತೀರಿಸಿಕೊಳ್ಳಲಾಗಿದೆ ಎಂದು ಖಂಡಿಸಿದರು.

ಇದನ್ನೂ ಓದಿ; ರೈತರನ್ನು ಬಂಧಿಸಿಡಲು ಕ್ರೀಡಾಂಗಣಕ್ಕೆ ಬೇಡಿಕೆ ಇಟ್ಟ ಕೇಂದ್ರ; ನಿರಾಕರಿಸಿದ ಆಪ್ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read