ದಲಿತ ಮಹಿಳೆ ಅಡುಗೆ ತಯಾರಿಸಿದ್ದಕ್ಕೆ ತಮಿಳುನಾಡಿನ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಸರಕಾರದ ಉಚಿತ ಉಪಹಾರ ಯೋಜನೆಯ ಊಟ ನಿರಾಕರಿಸಿರುವ ಘಟನೆ ನಡೆದಿದೆ.
ತಮಿಳುನಾಡಿನ ಕರೂರು ಜಿಲ್ಲೆಯ ಅರವಾಕುರಿಚಿ ಬಳಿಯ ವೆಲಾಂಚೆಟ್ಟಿಯೂರ್ ಪಂಚಾಯತ್ನ ಶಾಲೆಯೊಂದರಲ್ಲಿ ಘಟನೆ ನಡೆದಿದೆ. 30 ಮಕ್ಕಳಲ್ಲಿ 15 ಮಕ್ಕಳು ದಲಿತ ಮಹಿಳೆ ಅಡುಗೆ ತಯಾರಿಸಿದ್ದಾರೆಂದು ಊಟ ಮಾಡಲು ನಿರಾಕರಿಸಿದ್ದಾರೆ.
ಮಂಗಳವಾರ ಶಾಲೆಗೆ ಭೇಟಿ ನೀಡಿ ಉಪಹಾರ ಯೋಜನೆ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಈ ಕುರಿತು ವಿದ್ಯಾರ್ಥಿಗಳ ಪೋಷಕರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಕ್ಕಳ ಪೋಷಕರು ದಲಿತ ಮಹಿಳೆ ಸುಮತಿ ಅವರು ಆಹಾರವನ್ನು ತಯಾರಿಸುತ್ತಿದ್ದಾರೆ. ದಲಿತ ಮಹಿಳೆ ಆಹಾರ ತಯಾರಿಸಿದ ಕಾರಣಕ್ಕೆ ನಮ್ಮ ಮಕ್ಕಳು ಶಾಲೆಯಲ್ಲಿ ಊಟ ಮಾಡುವುದಿಲ್ಲ ಎಂದು ಹೇಳಿದ್ದಾರೆ. ದಲಿತ ಮಹಿಳೆ ಶಾಲೆಯಲ್ಲಿ ಅಡುಗೆ ಮಾಡುವುದನ್ನು ನಿಲ್ಲಿಸುವವರೆಗೆ ಇದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಇದಲ್ಲದೆ ತಮ್ಮ ಮಕ್ಕಳಿಗೆ ಊಟ ಮಾಡುವಂತೆ ಒತ್ತಾಯಿಸಿದರೆ ಮಕ್ಕಳನ್ನು ಶಾಲೆಯಿಂದ ಬಿಡಿಸುವುದಾಗಿ ಪೋಷಕರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಟಿ. ಪ್ರಭುಶಂಕರ್, ದಲಿತ ಮಹಿಳೆ ಎಂಬ ಕಾರಣಕ್ಕೆ ಅವಮಾನ ಮಾಡಿದರೆ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸುವುದಾಗಿ ವಿದ್ಯಾರ್ಥಿಗಳ ಪೋಷಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಇದಲ್ಲದೆ ತಮ್ಮ ಮಕ್ಕಳಿಗೆ ಆಹಾರ ಸೇವನೆಗೆ ಅವಕಾಶ ನೀಡುವಂತೆ ಪೋಷಕರಿಗೆ ಆಗ್ರಹಿಸಿದ್ದಾರೆ.
ಇದಲ್ಲದೆ ಶಾಲೆಯಲ್ಲಿ ದಲಿತ ಮಹಿಳೆ ಸುಮತಿ ಎಂಬವರು ಸಿದ್ಧಪಡಿಸಿದ್ದ ಭೋಜನವನ್ನು ಒಗ್ಗಟ್ಟಿನ ಪ್ರದರ್ಶನದ ಭಾಗವಾಗಿ ಜಿಲ್ಲಾಧಿಕಾರಿ ಮಕ್ಕಳ ಜೊತೆ ಸೇವಿಸಿದ್ದಾರೆ.
30 ಮಕ್ಕಳಲ್ಲಿ 15 ಮಕ್ಕಳು ಊಟವನ್ನು ಮಾಡಲು ನಿರಾಕರಿಸಿದ್ದಾರೆ. ಈ ವಿಚಾರವನ್ನು ಉನ್ನತ ಧಿಕಾರಿಗಳ ಗಮನಕ್ಕೆ ತರಲಾಗಿದೆ. ವಿದ್ಯಾರ್ಥಿಗಳ ಪೋಷಕರ ಜೊತೆ ಮಾತುಕತೆ ನಡೆಸಲಾಗಿದೆ. ಆದರೆ ಆ ಬಳಿಕ ಇಬ್ಬರು ವಿದ್ಯಾರ್ಥಿಗಳು ಮಾತ್ರ ತಮ್ಮ ನಿಲುವನ್ನು ಬದಲಿಸಿದ್ದಾರೆ ಹೊರತು ಇತರ ವಿದ್ಯಾರ್ಥಿಗಳು ಊಟ ಮಾಡಿಲ್ಲ ಎಂದು ತಿಳಿದು ಬಂದಿದೆ.
ಇದನ್ನು ಓದಿ: ಸಂವಿಧಾನವೇ ನನ್ನ ಧರ್ಮ, ಹೇಳಿಕೆಗೆ ಬದ್ಧನಾಗಿದ್ದೇನೆ: ಎಫ್ಐಆರ್ ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ