ತಮಿಳುನಾಡು ರಾಜ್ಯದ ಕೊಯಮತ್ತೂರ್ ಸುಂದರಪುರಂ ಬಳಿಯ ಪೆರಿಯಾರ್ ಇ. ವಿ. ರಾಮಸಾಮಿ ಪ್ರತಿಮೆಗೆ ಶುಕ್ರವಾರ ಕೇಸರಿ ಬಣ್ಣ ಎರಚಿದ ಘಟನೆ ನಡೆದಿದೆ.
ಪ್ರತಿಮೆಗೆ ಬಣ್ಣ ಎರಚಿದ ಚೆಟ್ಟಿಪಾಲಯಂ ರಸ್ತೆಯ ಅಣ್ಣಾ ನಗರದ ನಿವಾಸಿ ಎಂ. ಅರುಣ್ ಕೃಷ್ಣನ್ ಎಂಬ 21 ವರ್ಷದ ಯುವಕನನ್ನು ಬಂಧಿಸಲಾಗಿದೆ.
“ಅರುಣ್ ಕೃಷ್ಣನ್ ಭಾರತ್ ಸೇನೆಯ ದಕ್ಷಿಣ ಜಿಲ್ಲೆ (ಕೊಯಮತ್ತೂರು) ಸಂಘಟಕರಾಗಿದ್ದು, ಭಾರತೀಯ ದಂಡ ಸಂಹಿತೆಯ 153-ಗಲಭೆಗೆ ಕಾರಣವಾಗುವ ಉದ್ದೇಶದಿಂದ ಪ್ರಚೋದನೆಯನ್ನು ನೀಡುವುದು-, 153 ಎ-ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು 504 -ಶಾಂತಿಯನ್ನು ಕದಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ- ಅಡಿಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ (ಕಾನೂನು ಮತ್ತು ಸುವ್ಯವಸ್ಥೆ) ಜಿ ಸ್ಟಾಲಿನ್ ಹೇಳಿದ್ದಾರೆ.
ಶುಕ್ರವಾರ ಬೆಳಿಗ್ಗೆ 5.30 ರ ಸುಮಾರಿಗೆ ಸುಂದರಪುರಂ ಸಮೀಪವಿರುವ ಅಯ್ಯರ್ ಆಸ್ಪತ್ರೆ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿ ದ್ರಾವಿಡರ್ ಕಳಗಮ್ ಮತ್ತು ತಂದೈ ಪೆರಿಯಾರ್ ದ್ರಾವಿಡರ್ ಕಳಗಮ್ ಸದಸ್ಯರ ಗುಂಪು ಸ್ಥಳದಲ್ಲೇ ಜಮಾಯಿಸಿ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತು.
ತಿರುಕೋವಿಲೂರ್ನಲ್ಲಿ ಮತ್ತೊಂದು ಪ್ರತಿಮೆಗೆ ಅವಮಾನ
ಇದೇ ರೀತಿಯ ಘಟನೆಯಲ್ಲಿ, ಶುಕ್ರವಾರ ಮಧ್ಯಾಹ್ನ ಕಲ್ಲಕುರಿಚಿ ಜಿಲ್ಲೆಯ ತಿರುಕೋವಿಲೂರ್ನ ಕೀಜಾಯೂರ್ ಗ್ರಾಮದಲ್ಲಿ ಪೆರಿಯಾರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಲಾಗಿದೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಡಿಎಂಕೆ ಮತ್ತು ವಿಸಿಕೆ ಪಕ್ಷಗಳು ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿವೆ. ಪೊಲೀಸರು ಅಪರಾಧಿಗಳನ್ನು ಹುಡುಕುತ್ತಿದ್ದಾರೆ ಎಂದು ತಿಳಿಸಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಐಪಿಸಿಯ ಸೆಕ್ಷನ್ 153 ಮತ್ತು 504 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿರುಕೋವಿಲೂರ್ ಇನ್ಸ್ಪೆಕ್ಟರ್ ಸೆಲ್ವಂ ತಿಳಿಸಿದ್ದಾರೆ.
ಓದಿ: ದಮನಿತರ ಸಿಟ್ಟಿನ ಏಕೀಕರಣ – ಅರುಣ್ ಜೋಳದಕೂಡ್ಲಿಗಿ