ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಅತಿ ಹೆಚ್ಚು ಸಾಲ ಮಾಡಿ ‘ಬಿಟ್ಟಿ ಭಾಗ್ಯಗಳನ್ನು’ ನೀಡಿದ್ದಾರೆ ಎಂಬ ಫೇಕ್ ನ್ಯೂಸ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಹೊಸದುರ್ಗ ತಾಲೂಕಿನ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ಎಂಬ ಬರಹವನ್ನು ಫೇಸ್ಬುಕ್ ಮತ್ತು ವಾಟ್ಸಾಪ್ಗಳಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಹೊಸದುರ್ಗ ತಾಲೂಕಿನ ಕಾನುಬೇನಹಳ್ಳಿಯ ಶಿಕ್ಷಕ ಎಂ ಜಿ ಶಾಂತಮೂರ್ತಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ ಜಯಪ್ಪ ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ.
ಸಿದ್ದರಾಮಯ್ಯ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ “ಎಸ್ ಎಂ ಕೃಷ್ಣ ಅವಧಿಯಲ್ಲಿ ₹3,590 ಕೋಟಿ, ಧರ್ಮಸಿಂಗ್ ₹15,635 ಕೋಟಿ, ಎಚ್ ಡಿ ಕುಮಾರಸ್ವಾಮಿ ₹3,545 ಕೋಟಿ, ಬಿ ಎಸ್ ಯಡಿಯೂರಪ್ಪ ₹25,653 ಕೋಟಿ, ಸದಾನಂದಗೌಡ ₹9,464 ಕೋಟಿ, ಜಗದೀಶ್ ಶೆಟ್ಟರ್ ₹13,464 ಕೋಟಿ, ಸಿದ್ದರಾಮಯ್ಯ ₹2,42,000 ಕೋಟಿ ಸಾಲ ಮಾಡಿದ್ದರು. ಎಸ್ಎಂ ಕೃಷ್ಣ ಅವಧಿಯಿಂದ ಶೆಟ್ಟರ್ವರೆಗೆ ಮಾಡಿದ ಒಟ್ಟು ಸಾಲ ₹71,331 ಕೋಟಿ, ಸಿದ್ದರಾಮಯ್ಯ ಅವರು ಮಾಡಿದ ಸಾಲ ₹2,42,000 ಕೋಟಿ. ಹೀಗಿರುವಾಗ ‘ಬಿಟ್ಟಿ ಭಾಗ್ಯ’ ಕೊಡದೆ ಇನ್ನೇನು” ಎಂಬ ಬರಹವನ್ನು ಫೇಸ್ಬುಕ್ನಲ್ಲಿ ಶಿಕ್ಷಕ ಶಾಂತಮೂರ್ತಿ ಹಂಚಿಕೊಂಡಿದ್ದರು. ಈ ಮಾಹಿತಿಯನ್ನು ವಾಟ್ಸಾಪ್ ಗ್ರೂಪ್ಗಳಿಗೂ ಶೇರ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ ನಡತೆ ನಿಯಮ 1996 ಮತ್ತು 2021ರ ಉಲ್ಲಂಘನೆ ಆರೋಪದಲ್ಲಿ ಶಾಂತಮೂರ್ತಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ.
ಶಿಕ್ಷಕ ಹಂಚಿಕೊಂಡಿರುವ ಪೋಸ್ಟ್ ಫೇಕ್ ನ್ಯೂಸ್ ಆಗಿದ್ದು, ಈ ಹಿಂದೆ ಸಾಕಷ್ಟು ಜನ ಅದನ್ನು ಹಂಚಿಕೊಂಡಿದ್ದರು. ಅದು ಸಂಪೂರ್ಣ ಸುಳ್ಳು ಸುದ್ದಿಯೆಂದು ನಾನುಗೌರಿ.ಕಾಂ ಸೇರಿದಂತೆ ಹಲವು ಮಾಧ್ಯಮಗಳು ಫ್ಯಾಕ್ಟ್ಚೆಕ್ ಮಾಡಿವೆ. ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡಾಗ 2013 ನೇ ಸಾಲಿನಲ್ಲಿ ರಾಜ್ಯದ ಒಟ್ಟು ಸಾಲ 1,12,666.6 ಕೋಟಿ ರೂಪಾಯಿ ಇತ್ತು. ಹಾಗೆಯೇ ಸಿದ್ದರಾಮಯ್ಯನವರ ಅಧಿಕಾರಾವಧಿ ಪೂರ್ಣಗೊಂಡಾಗ, ಅಂದರೆ 2018ನೇ ಇಸವಿಯ ಮಾರ್ಚ್ ಕೊನೆ ವೇಳೆಗೆ 2,45,950.6 ಕೋಟಿ ರೂಪಾಯಿ. ಅಂದರೆ 2018 ರಲ್ಲಿ ಇದ್ದ ಸಾಲದ ಮೊತ್ತವನ್ನು 2013ರಲ್ಲಿ ಇದ್ದ ಒಟ್ಟು ಸಾಲದೊಂದಿದೆ ಕಳೆದಾಗ ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿ ರಾಜ್ಯಕ್ಕಾಗಿ ಮಾಡಿದ ಸಾಲ 1,33,284 ಕೋಟಿ ರೂಪಾಯಿಯಷ್ಟು ಆಗುತ್ತದೆ.
ಹಾಗೆ ನೋಡಿದರೆ ಸಿದ್ದರಾಮಯ್ಯನವರಿಗಿಂತ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಸರ್ಕಾರ ಮಾಡಿದ ಸಾಲವೇ ಅಧಿಕವಾಗಿದೆ. 2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದ ಒಟ್ಟು ಸಾಲ 2,86,328.7 ಕೋಟಿ ರೂಪಾಯಿ ಇತ್ತು. ಈಗ 2023ರಲ್ಲಿ 5,35,156.7 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಲ್ಲಿಗೆ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಹೊಸದಾಗಿ 2,48, 828 ಕೋಟಿ ರೂಗಳ ಸಾಲ ಮಾಡಿದೆ. ಅದು ಸಿದ್ದರಾಮಯ್ಯನವರು 5 ವರ್ಷದ ಆಡಳಿತದಲ್ಲಿ ಮಾಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚಿದೆ. ಈ ಸರಳ ತಿಳಿವಳಿಕೆ ಅಥವಾ ಕನಿಷ್ಟ ಓದು ಸಂಶೋಧನೆ ಇಲ್ಲದೆ ಆ ಶಿಕ್ಷಕ ಪೋಸ್ಟ್ ಮಾಡಿ ಶಿಕ್ಷೆಗೆ ಗುರಿಯಾಗಿದ್ದಾರೆ.
ಈ ರೀತಿಯ ಕ್ರಮಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲವೇ? ಅಮಾನತಿನಂತಹ ಕಠಿಣ ಕ್ರಮ ಬೇಕಿತ್ತೆ ಎಂಬ ಪ್ರಶ್ನೆಗಳು ಸಹ ಎದ್ದಿವೆ.
ಈ ಕುರಿತು ಪ್ರತಿಕ್ರಿಯಿಸಿದ ಶಿಕ್ಷಣ ತಜ್ಞ ನಿರಂಜನಾರಾಧ್ಯರವರು, “ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಅದನ್ನು ನಾವೆಲ್ಲರೂ ಗೌರವಿಸಬೇಕು. ಆದರೆ ಮಾತನಾಡುವವರಿಗೆ ಕನಿಷ್ಟ ತಿಳಿವಳಿಕೆಯಿರಬೇಕು. ಅವರು ಹೇಳುವ ವಿಚಾರಗಳಿಗೆ ತಾರ್ಕಿಕತೆ ಇದ್ದಲ್ಲಿ, ಕಾರಣಗಳಿದ್ದರೆ ಒಪ್ಪೋಣ. ಆದರೆ ಈ ಶಿಕ್ಷಕ ಪೂರ್ವಾಗ್ರಹ ಪ್ರೇರಿತವಾಗಿ ಸುಳ್ಳು ಸುದ್ದಿ ಹರಡಿದ್ದಾರೆ. ಬಿಟ್ಟಿ ಭಾಗ್ಯಗಳು ಎಂದು ಕರೆಯುವುದೇ ತಪ್ಪು. ಜನರ ದುಡ್ಡನ್ನು ಜನರಿಗೆ ಖರ್ಚು ಮಾಡಬೇಕಿರುವುದು ಸರ್ಕಾರದ ಕರ್ತವ್ಯ. ಪ್ರತಿಯೊಬ್ಬರು ತೆರಿಗೆ ಕಟ್ಟುತ್ತಾರೆ ಎನ್ನುವುದನ್ನು ಮರೆಯಬಾರದು. ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ಟೀಕಿಸುವವರು ದೊಡ್ಡ ಬಂಡವಾಳಿಗರ ಲಕ್ಷಾಂತರ ಕೋಟಿ ತೆರಿಗೆ ಮನ್ನಾದ ಬಗ್ಗೆ ಏಕೆ ಮಾತನಾಡುವುದಿಲ್ಲ? ಬೇರೆಯವರು ಹೋಗಲಿ, ಶಿಕ್ಷಕರಿಗೆ ಈ ಕನಿಷ್ಟ ತಿಳುವಳಿಕೆ ಇರಬಾರದೇ” ಎಂದರು.
ಈ ಹಿಂದೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಶಿಕ್ಷಕ ವೀರಣ್ಣ ಮಡಿವಾಳರು ಸರ್ಕಾರಿ ಶಾಲೆ ಮುಚ್ಚುವುದರ ವಿರುದ್ಧ ಪೋಸ್ಟ್ ಹಾಕಿದ್ದಕ್ಕೆ ಅವರ ಮೇಲೆಯೂ ಇದೇ ರೀತಿಯ ಕ್ರಮಕ್ಕೆ ಶಿಕ್ಷಣ ಇಲಾಖೆ ಮುಂದಾಗಿತ್ತು. ಆಗ ನಾವು ಅವರ ಬೆಂಬಲಕ್ಕೆ ನಿಂತಿದ್ದೆವು. ಶಾಲೆಗಳ ಬಗ್ಗೆ ಶಿಕ್ಷಕರು ಮಾತನಾಡದೇ ಇನ್ಯಾರು ಮಾತನಾಡಬೇಕು ಎಂದಿದ್ದೇವೆ. ಆದರೆ ಈ ಪ್ರಕರಣದಲ್ಲಿ ಶಿಕ್ಷಕ ಶಾಂತಮೂರ್ತಿ ಸರ್ಕಾರದ ಮೇಲಿನ ದ್ವೇಷಕ್ಕೆ ಪರಿಶೀಲಿಸದೆ ಸುಳ್ಳು ಸುದ್ದಿ ಹರಡಿದ್ದಾರೆ. ಶಿಕ್ಷಕರಾದವರೆ ಹೀಗೆ ಮಾಡಿದರೆ ಬೇರೆಯವರ ಕಥೆಯೇನು? ವೈಜ್ಞಾನಿಕತೆ, ವೈಚಾರಿಕತೆ ಬಿತ್ತಬೇಕಾದವರು ಹೀಗೆ ಮಾಡುವುದು ಸರಿಯಲ್ಲ. ಈ ಕುರಿತು ಆ ಶಿಕ್ಷಕರಿಂದ ಸ್ಪಷ್ಟೀಕರಣ ಪಡೆಯಬೇಕು. ಉಳಿದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮುನ್ನ ಪರೀಶಿಲಿಸಬೇಕು ಎಂದರು.
ಇದನ್ನೂ ಓದಿ; ಸಿದ್ದರಾಮಯ್ಯನವರ ಸಿಎಂ ಅವಧಿಯಲ್ಲಿ ರಾಜ್ಯದ ಸಾಲ ಅತಿ ಹೆಚ್ಚು ಎಂಬುದು ಸುಳ್ಳು; ಇಲ್ಲಿದೆ ವಿವರ