ಕಳೆದ ಜನವರಿ 31ರಂದು ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಯಲಾಲ್ನಲ್ಲಿ 26 ವರ್ಷದ ದಲಿತ ವ್ಯಕ್ತಿಯ ಮೇಲೆ ಶಿವ ಮಾಲೆ ಧರಿಸಿದ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಸಂತ್ರಸ್ತರಾಗಿರುವ ಯಲಾಲ್ ಮಂಡಲದ ದೇವನೂರು ಗ್ರಾಮದ ನಿವಾಸಿ ಮೆಟ್ಲಿ ನರೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇದುವರೆಗೆ ದಾಳಿಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಎಂದು ‘ನ್ಯೂಸ್ ಮಿನಿಟ್’ ವರದಿ ಮಾಡಿದೆ.
ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವುದು ವಿಡಿಯೊದಲ್ಲಿ ದಾಖಲಾಗಿದೆ. ದೊಡ್ಡ ಗುಂಪಿನ ಹೆಚ್ಚಿನವರು ಶಿವ ಮಾಲೆ ಧರಿಸಿದ್ದರು. ನರೇಶ್ ಮತ್ತು ಇನ್ನೊಬ್ಬ ವ್ಯಕ್ತಿಯ ಮೇಲೆ ಕಲ್ಲುಗಳು, ಪೊರಕೆಗಳು, ಚಪ್ಪಲಿಗಳು ಮತ್ತು ಮಡಕೆಗಳಿಂದ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ಮೂವರು ಪೊಲೀಸ್ ಅಧಿಕಾರಿಗಳು ಇಬ್ಬರನ್ನು ತಡೆದು ರಕ್ಷಿಸಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಆದರೆ ಕೋಪಗೊಂಡ ಗುಂಪು ಪೊಲೀಸರನ್ನು ನಿರ್ಲಕ್ಷಿಸಿ ದಾಳಿ ನಡೆಸಿವೆ.
ದೇವನೂರು ಗ್ರಾಮದಲ್ಲಿ ದಲಿತರು ಗ್ರಾಮ ಮಧ್ಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ನಿರ್ಧರಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಬಲಪಂಥೀಯ ಗುಂಪು ಹಿಂದೂ ವಾಹಿನಿ ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದು, ಛತ್ರಪತಿ ಶಿವಾಜಿಯ ಪ್ರತಿಮೆಯನ್ನು ಸ್ಥಾಪಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ವೈಯಕ್ತಿಕ ದ್ವೇಷದಿಂದ ಈ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದರೆ, ಜಾತಿ ವಿರೋಧಿ ಸಂಘಟನೆ ಕುಲ ನಿರ್ಮೂಲನಾ ಹೋರಾಟ ಸಮಿತಿಯ ಮುಖಂಡ ಅಭಿನವ್ ಬುರಾಮ್, “ಇದು ಉದ್ದೇಶಪೂರ್ವಕ ದಾಳಿಯಾಗಿದ್ದು, ಗ್ರಾಮದಲ್ಲಿ ದಲಿತರು ಹಿಂಸೆ ಮತ್ತು ತಾರತಮ್ಯಕ್ಕೆ ಒಳಗಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
“ಗ್ರಾಮದಲ್ಲಿ ಸಾಕಷ್ಟು ಸಲ ದೌರ್ಜನ್ಯಗಳು ನಡೆದಿವೆ. ಹತ್ತು ವರ್ಷಗಳ ಹಿಂದೆ, ದಲಿತರು ಗೋರಕ್ಷಕರಿಂದ ದಾಳಿಗೊಳಗಾಗಿದ್ದರು. ಹಾಗಾಗಿ ಸ್ಥಳೀಯ ದೇವರಿಗೆ ಹಸುಗಳನ್ನು ಬಲಿ ನೀಡುವ ಸಾಂಪ್ರದಾಯಿಕ ಪದ್ಧತಿಯನ್ನು ಮುಂದುವರಿಸಲು ನಿರಾಕರಿಸಿದರು. ಅವರು ಹಳ್ಳಿ ಸಂಪ್ರದಾಯವನ್ನು ಮುಂದುವರಿಸಲು ನಿರಾಕರಿಸಿದ್ದರಿಂದ, ಯಾವುದೇ ಗ್ರಾಮದ ಸಮಾರಂಭಗಳಲ್ಲಿ ಡ್ರಮ್ ಬಾರಿಸುವುದನ್ನು ನಿಲ್ಲಿಸಲಾಯಿತು. ಇದು ಅವರ ಆದಾಯದ ಮೂಲವನ್ನು ಕಸಿದುಕೊಂಡಿದೆ ಎಂದು ಅವರು ಹೇಳಿದರು.
ಯಲಾಲ್ ಸಬ್ ಇನ್ಸ್ ಪೆಕ್ಟರ್ ಎ ಅರವಿಂದ್ ಪ್ರಕಾರ, ಸಂತ್ರಸ್ತ ನರೇಶ್ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಈ ದಾಳಿಯು ಜನವರಿ 30 ರ ಸಂಜೆ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಜಾತಿ ವಿರೋಧಿ ಸಂಘಟನೆಗಳು ಗುರುವಾರ ಮಂಡಲ ಕಂದಾಯ ಅಧಿಕಾರಿ (ಎಂಆರ್ಒ) ಅವರಿಗೆ ಮನವಿ ಪತ್ರ ಸಲ್ಲಿಸಿ ಧರಣಿ ಸತ್ಯಾಗ್ರಹ ನಡೆಸಿದರು. ಕ್ರಮ ಕೈಗೊಳ್ಳದಿದ್ದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಬೃಹತ್ ಧರಣಿ ನಡೆಸುವುದಾಗಿ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ‘ಗೌರಿ’ ಸಾಕ್ಷ್ಯಚಿತ್ರ: “ದಡ ದಡ, ಒಂದಲ್ಲ ಎರಡಲ್ಲ… ಸಾಲಾಗಿ ಏಳು, ತೂರಿದ್ದು ಗೌರಿಗೆ, ತಾಕಿದ್ದು…