ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆ ಪ್ರಚಾರದಲ್ಲಿ ತೊಡಗಿದ್ದ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಅಭ್ಯರ್ಥಿಗೆ ಚಾಕು ಇರಿಯಲಾಗಿದೆ. ಈ ಘಟಣೆಯು ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ದೌಲತಾಬಾದ್ ತಾಲ್ಲೂಕಿನ ಸೂರಂಪಲ್ಲಿ ಗ್ರಾಮದಲ್ಲಿ ನಡೆದಿದೆ.
ಬಿಆರ್ಎಸ್ ಅಭ್ಯರ್ಥಿ ಹಾಗೂ ಮೇದಕ್ನ ಲೋಕಸಭಾ ಸಂಸದ ಕೋತ ಪ್ರಭಾಕರ್ ರೆಡ್ಡಿ ಮೇಲೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ. ದುಬ್ಬಾಕದಿಂದ ಬಿಆರ್ಎಸ್ ಅಭ್ಯರ್ಥಿಯಾಗಿದ್ದ ಅವರು ಸೋಮವಾರ (ಅಕ್ಟೋಬರ್ 30) ಪ್ರಚಾರ ಮಾಡುವಾಗ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
BRS MP Kotha Prabhakar Reddy was attacked with a knife by unidentified person during election campaign in Surampalli village of Daultabad mandal of Siddipet district.
MP was taken to hospital with stomach injuries pic.twitter.com/pXcjPgOb9O
— Naveena (@TheNaveena) October 30, 2023
ದಾಳಿಯಲ್ಲಿ ಕೋತಾ ಪ್ರಭಾಕರ ರೆಡ್ಡಿ ಅವರ ಹೊಟ್ಟೆಗೆ ಗಂಭೀರ ಗಾಯಗಳಾಗಿವೆ. ಭದ್ರತಾ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಸಿದ್ದಿಪೇಟ್ ಜಿಲ್ಲೆಯ ದೌಲ್ತಾಬಾದ್ ಮಂಡಲದ ಸೂರಂಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಆರೋಪಿಯನ್ನು ದುಬ್ಬಾಕ ಕ್ಷೇತ್ರದ ಚೆಪ್ಯಾಳಕು ಗ್ರಾಮದ ರಾಜು ಎಂದು ಪೊಲೀಸರು ಗುರುತಿಸಿದ್ದಾರೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಕುಡಿತದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾನೆ. ಆತನಿಗೆ ಕೌಟುಂಬಿಕ ಸಮಸ್ಯೆಗಳಿದ್ದವು ಎಂದು ಸಿದ್ದಿಪೇಟೆ ಸಿಪಿ ಶ್ವೇತಾ ತಿಳಿಸಿದ್ದಾರೆ.
ದಾಳಿಯ ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಯೂಟ್ಯೂಬ್ ಚಾನೆಲ್ವೊಂದರಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದನು. ಆತ ಇತ್ತೀಚೆಗೆ ಬಿಜೆಪಿ ಸೇರಿದ್ದನೆಂಬ ಮಾಹಿತಿ ಲಭ್ಯವಾಗಿದೆ. ಘಟನೆ ನಡೆದ ತಕ್ಷಣ ಪ್ರಭಾಕರ ರೆಡ್ಡಿ ಅವರನ್ನು ಗಜ್ವೇಲ್ನ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತು. ಹೆಚ್ಚಿನ ಚಿಕಿತ್ಸೆಗಾಗಿ ಸಿಕಂದರಾಬಾದ್ನ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಚುನಾವಣೆಯಲ್ಲಿ ಮೇದಕ್ನಿಂದ ಸಂಸದರಾಗಿ ಗೆದ್ದಿದ್ದ ರೆಡ್ಡಿ, ಪ್ರಸ್ತುತ ದುಬ್ಬಾಕದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಬಿಫಾರ್ಮ್ ಪಡೆದಿರುವ ಅವರು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ, ಇಂದು ಬೆಳಗ್ಗೆ ಪಾದ್ರಿಯೊಬ್ಬರ ಕುಟುಂಬವನ್ನು ಭೇಟಿ ಮಾಡಲು ತೆರಳಿದ್ದ ವೇಳೆ ರೆಡ್ಡಿ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿದ್ದಾನೆ.
ಕಾರ್ಯಕರ್ತನ ವೇಷಧಾರಿ ವ್ಯಕ್ತಿಯೊಬ್ಬ ಪ್ರಭಾಕರ ರೆಡ್ಡಿ ಅವರ ಹತ್ತಿರ ಬಂದು ಕೈ ಕುಲುಕುವಂತೆ ನಟಿಸಿದ್ದಾನೆ. ಕೂಡಲೇ ಜೇಬಿನಿಂದ ಚಾಕು ಹೊರತೆಗೆದು ಸಂಸದರ ಹೊಟ್ಟೆಗೆ ಇರಿದಿದ್ದಾನೆ. ದಾಳಿಕೋರನನ್ನು ಬಿಆರ್ಎಸ್ ಕಾರ್ಯಕರ್ತರು ಹಿಡಿದು ಥಳಿಸಿದ್ದಾರೆ. ಘಟನೆ ನಡೆದ ತಕ್ಷಣ ರೆಡ್ಡಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಅವರನ್ನು ಸಿಕಂದರಾಬಾದ್ನ ಯಶೋದಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಇದನ್ನೂ ಓದಿ: ಕೇರಳ ಸ್ಪೋಟ: ನಾಗರಿಕ ಸಮಾಜದಲ್ಲಿ ದ್ವೇಷ, ಹಿಂಸೆಗೆ ಜಾಗವಿಲ್ಲ- ರಾಹುಲ್ ಖಂಡನೆ