ಮರಾಠ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಬೀಡ್ ಜಿಲ್ಲೆಯಲ್ಲಿ ಮಹಾರಾಷ್ಟ್ರ ಶಾಸಕ ಪ್ರಕಾಶ್ ಸೋಲಂಕೆ ಅವರ ಮನೆಗೆ ಬೆಂಕಿ ಹಚ್ಚಿ ಧ್ವಂಸ ಮಾಡಲಾಗಿದೆ.
ಅ.25 ರಿಂದ ಮೀಸಲಾತಿಗೆ ಆಗ್ರಹಿಸಿ ಮನೋಜ್ ಜಾರಂಗೆ ಪಾಟೀಲ್ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಸತ್ಯಾಗ್ರಹದ ವಿರುದ್ಧ ಅವಹೇಳನಾಕಾರಿ ಹೇಳಿಕೆಗಳನ್ನು ನೀಡಿದ್ದರಿಂದ ಶಾಸಕರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಹೇಳಲಾಗಿದೆ.
ಶರದ್ ಪವಾರ್ ಅವರ ನೇತೃತ್ವದ ಎನ್ಸಿಪಿಯಿಂದ ಬೇರ್ಪಟ್ಟ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯ ಶಾಸಕರಾಗಿರುವ ಸೋಲಂಕೆ ಅವರ ನಿವಾಸಕ್ಕೆ ಬೆಂಕಿ ಹಚ್ಚಲಾಗಿದೆ. ಶಾಸಕರ ಮನೆಯ ಹೊರಗೆ ನಿಲ್ಲಿಸಿದ್ದ ವಾಹನಕ್ಕೆ ಪ್ರತಿಭಟನಾಕಾರರು ಕಲ್ಲು ಎಸೆದು ಹಾನಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಸೋಲಂಕೆ, ದಾಳಿಯಾದಾಗ ನಾನು ನನ್ನ ಮನೆಯೊಳಗೆ ಇದ್ದೆ. ಅದೃಷ್ಟವಶಾತ್ ನನ್ನ ಕುಟುಂಬದ ಸದಸ್ಯರಿಗೆ ಅಥವಾ ಸಿಬ್ಬಂದಿಗೆ ಗಾಯವಾಗಿಲ್ಲ. ನಾವು ಸುರಕ್ಷಿತವಾಗಿದ್ದೇವೆ ಆದರೆ ಅಪಾರ ಆಸ್ತಿ ನಷ್ಟವಾಗಿದೆ ಎಂದು ಹೇಳಿದ್ದಾರೆ.
ವೈರಲ್ ವಿಡಿಯೋದಲ್ಲಿ ಶಾಸಕರ ಮನೆಗೆ ಸಂಪೂರ್ಣವಾಗಿ ಹೊಗೆ ಆವರಿಸಿರುವುದು ಮತ್ತು ಉರಿಯುತ್ತಿರುವ ಕಟ್ಟಡದಿಂದ ಕಪ್ಪು ಹೊಗೆ ಹೊರ ಬರುತ್ತಿರುವುದು ಕಂಡು ಬಂದಿದೆ.
ವ್ಯಾಪಕವಾಗಿ ಪ್ರಸಾರವಾದ ಆಡಿಯೊದಲ್ಲಿ ಮೀಸಲಾತಿಗಾಗಿ ಬೇಡಿಕೆ ಮತ್ತು ಅದನ್ನು ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ 40-ದಿನಗಳ ಗಡುವು ನೀಡುರುವುದನ್ನು ಮಕ್ಕಳ ಆಟವಾಗಿದೆ ಎಂದು ಸೋಲಂಕೆ ಹೇಳುವುದು ಹಾಗೂ ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಸ್ಪರ್ಧಿಸದ ವ್ಯಕ್ತಿ ಇಂದು ಬುದ್ಧಿವಂತ ವ್ಯಕ್ತಿಯಾಗಿದ್ದಾನೆ ಎಂದು ಮೀಸಲಾತಿ ಪರ ನಾಯಕನನ್ನು ಉಲ್ಲೇಖಿಸಿ ಸೋಲಂಕೆ ಹೇಳುವ ಆಡಿಯೋ ವೈರಲ್ ಆಗಿತ್ತು.
ಎನ್ಸಿಪಿ ಘಟನೆಯನ್ನು ಖಂಡಿಸಿದ್ದು, ಇದನ್ನು ಗೃಹ ಸಚಿವರ ಸಂಪೂರ್ಣ ವೈಫಲ್ಯ ಎಂದು ಕರೆದಿದೆ. ಇದು ಮಹಾರಾಷ್ಟ್ರದ ಟ್ರಿಪಲ್ ಇಂಜಿನ್ ಸರ್ಕಾರದ ವೈಫಲ್ಯ. ಇಂದು ಶಾಸಕರ ಮನೆಗೆ ಬೆಂಕಿ ಹಚ್ಚಲಾಗಿದೆ. ಗೃಹ ಸಚಿವರು ಏನು ಮಾಡುತ್ತಿದ್ದಾರೆ? ಇದು ಅವರ ಜವಾಬ್ದಾರಿ ಎಂದು ಶರದ್ ಪವಾರ್ ಪಕ್ಷದ ಸಂಸದ ಸುಪ್ರಿಯಾ ಸುಳೆ ಹೇಳಿದ್ದಾರೆ.
ಬೆಂಕಿ ಹಚ್ಚಿದ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಈ ಪ್ರತಿಭಟನೆ ಯಾವ ತಿರುವು ಪಡೆದುಕೊಳ್ಳುತ್ತಿದೆ? ಇದು ತಪ್ಪು ದಾರಿಯಲ್ಲಿ ಸಾಗುತ್ತಿದೆ ಎಂಬುದನ್ನು ಮನೋಜ್ ಪಾಟೀಲ್ ಗಮನಿಸಬೇಕು. ಸರ್ಕಾರವು ಈ ಕುರಿತು ಪರಿಶೀಲಿಸಲು ಮಂಡಳಿಯನ್ನು ರಚಿಸಿದೆ ಎಂದು ಹೇಳಿದ್ದಾರೆ.
#WATCH | Beed, Maharashtra: Maratha reservation agitators vandalised and set the residence of NCP MLA Prakash Solanke on fire. pic.twitter.com/8uAfmGbNCI
— ANI (@ANI) October 30, 2023
ಇದನ್ನು ಓದಿ: ಶಿವಸೇನೆ, NCP ಶಾಸಕರ ವಿರುದ್ಧದ ಅನರ್ಹತೆ ಅರ್ಜಿ; ಸ್ಪೀಕರ್ಗೆ ಗಡುವು ನೀಡಿದ ಸುಪ್ರೀಂಕೋರ್ಟ್