ವೇತನ ಪರಿಷ್ಕರಣೆ, ಸೇವಾಭದ್ರತೆ, ಖಾಲಿ ಇರುವ ಹುದ್ದೆಗಳ ಭರ್ತಿ ಮತ್ತು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಸರ್ಕಾರದೊಂದಿಗೆ ವಿಲೀನಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ
ಟಿ.ಎಸ್ಆರ್ಟಿಸಿ ನೌಕರರು ಅನಿರ್ದಿಷ್ಟವಧಿ ಮುಷ್ಕರ ಮುಂದುವರಿಸಿದ್ದಾರೆ. ಇದರ ಬಿಸಿ ರಾಜ್ಯದ ಪ್ರಯಾಣಿಕರಿಗೂ ತಟ್ಟಿದ್ದು ದಸರಾ ಹಬ್ಬಕ್ಕೆ ಊರಿಗೆ ತರಳಲು ಪ್ರಯಾಣಿಕರು ಪ್ರಯಾಸಪಟ್ಟಿದ್ದಾರೆ.
ಶುಕ್ರವಾರ ಮಧ್ಯರಾತ್ರಿಯಿಂದ ಮುಷ್ಕರ ನಡೆಸುತ್ತಿರುವ ಟಿ.ಎಸ್.ಆರ್.ಟಿ.ಸಿ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಷ್ಕರ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯಾದ್ಯಂತ ಸಾರಿಗೆ ನಿಗಮ ಬಸ್ಗಳ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ದಸರ ಹಬ್ಬ ಮತ್ತು ಬತುಕಮ್ಮ ಹಬ್ಬಕ್ಕೆ ಊರುಗಳಿಗೆ ತೆರಳಲು ಪ್ರಯಾಣಿಕರು ಪರದಾಡುವಂತಾಗಿದೆ.
ರಾಜ್ಯದ ಎಲ್ಲಾ ಟಿ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಬಸ್ ಗಳಿಗಾಗಿ ಕಾದು ಕುಳಿತಿದ್ದಾರೆ. ಸುಮಾರು 10 ಸಾವಿರ ಬಸ್ ಗಳನ್ನು ಡಿಪೋದಲ್ಲಿ ನಿಲ್ಲಿಸಲಾಗಿದ್ದು 50 ಸಾವಿರಕ್ಕೂ ಹೆಚ್ಚು ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಎರಡು ದಿನಗಳಿಂದ ನೌಕರರು ಮುಷ್ಕರ ಕೈಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ಶಾಲಾ ವಾಹನಗಳು ಸೇರಿದಂತೆ 1200 ವಾಹನಗಳನ್ನು ಬಾಡಿಗೆ ಪಡೆದು ಪ್ರಯಾಣಿಕರನ್ನು ಅವರ ಗ್ರಾಮಗಳಿಗೆ ಬಿಡುವ ವ್ಯವಸ್ಥೆ ಮಾಡಿದೆ. ತಾತ್ಕಾಲಿಕವಾಗಿ ಚಾಲಕರು ಮತ್ತು ಇತರೆ ಕಾರ್ಮಿಕರನ್ನು ತೆಗೆದುಕೊಂಡು ಪ್ರಯಾಣಿಕರ ನೆರವಿಗೆ ಬರಲಾಗಿದೆ.
ಮೂರು ದಿನಗಳಿಂದ ಮುಷ್ಕರ ನಡೆಸುತ್ತಿರುವ ಟಿ.ಎಸ್.ಆರ್.ಟಿ.ಸಿ ನೌಕರರು ಕೂಡಲೇ ಮುಷ್ಕರ ಕೈಬಿಡುವಂತೆ ಸರ್ಕಾರ ಮನವಿ ಮಾಡಿದೆ. ಅಕ್ಟೋಬರ್ 7 ರಂದು ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಹಾಜರಾಗದಿದ್ದರೆ ಎಸ್ಮಾ ಜಾರಿಗೊಳಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ ಮಾಧ್ಯಮಗಳ ಜೊತೆ ಮಾತನಾಡಿರುವ ಜಂಟಿ ಕ್ರಿಯಾ ಸಮಿತಿ ಮುಖಂಡರು ಸರ್ಕಾರ ನಮ್ಮ ಮೇಲೆ ಎಸ್ಮಾ ಅಸ್ತ್ರ ಪ್ರಯೋಗಿಸಿ ಸೇವೆಯಿಂದ ವಜಾಗೊಳಿಸಿದರೂ ಮುಷ್ಕರ ಕೈಬಿಡುವುದಿಲ್ಲ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಚುನಾವಣೆ ಸಮಯದಲ್ಲಿ ನೀಡಿರುವ ಭರವಸೆ ಎ.ಪಿ.ಎಸ್.ಆರ್.ಟಿ.ಸಿ ನಿಗಮವನ್ನು ಸರ್ಕಾರದೊಂದಿಗೆ ವಿಲೀನಗೊಳಿಸುವ ಕ್ರಮದಂತೆ ತೆಲಂಗಾಣ ಸರ್ಕಾರವೂ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಾರಿಗೆ ರಸ್ತೆ ನಿಗಮದಲ್ಲಿ ಒಂದು ಲಕ್ಷ ಮಂದಿ ಚಾಲಕರು, ನಿರ್ವಾಹಕರು ಮತ್ತು ಇತರರು ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದು ಅವರಿಗೆ ಯಾವುದೇ ಭದ್ರತೆ ಇಲ್ಲವಾಗಿದೆ. ಹಾಗಾಗಿ ಸೇವಾ ಭದ್ರತೆ ಒದಗಿಸಬೇಕು ಎಂದು ಮುಷ್ಕರ ನಿರತ ಜಂಟಿ ಕ್ರಿಯಾ ಸಮಿತಿ ಒತ್ತಾಯಿಸಿದೆ.