Homeದಲಿತ್ ಫೈಲ್ಸ್ಹತ್ತು ದಲಿತರ ಹತ್ಯೆ ಪ್ರಕರಣ; 42 ವರ್ಷಗಳ ಬಳಿಕ ಓರ್ವ ಅಪರಾಧಿಗೆ ಶಿಕ್ಷೆ

ಹತ್ತು ದಲಿತರ ಹತ್ಯೆ ಪ್ರಕರಣ; 42 ವರ್ಷಗಳ ಬಳಿಕ ಓರ್ವ ಅಪರಾಧಿಗೆ ಶಿಕ್ಷೆ

- Advertisement -
- Advertisement -

ಉತ್ತರಪ್ರದೇಶದ ಫಿರೋಜಾಬಾದ್‌ ಜಿಲ್ಲೆಯ ಸಾಧುಪುರ್‌‌ ಗ್ರಾಮದಲ್ಲಿ 1981 ಇಸವಿಯಲ್ಲಿ ನಡೆದ ಘಟನೆ ಇದು. ಏಕಾಏಕಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ದಲಿತರ ಜೀವಗಳು ಹಾರಿಹೋಗಿದ್ದವು. ಆದರೆ ಪ್ರಕರಣ ನಡೆದು 42 ವರ್ಷಗಳ ಬಳಿಕ ಓರ್ವ ಅಪರಾಧಿಗೆ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿದೆ.

ಪ್ರಕರಣ ಸವೆಸಿದ ಹಾದಿಯ ಕುರಿತು ‘ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ವಿಸ್ತೃತವಾಗಿ ವರದಿ ಮಾಡಿದೆ. ಪ್ರಕರಣದ ಏಳುಬೀಳಿನಲ್ಲಿ ನೊಂದ ದಲಿತರ ತ್ರಾಸದಾಯಕ ಪಯಣವನ್ನು ವರದಿ ತೆರೆದಿಟ್ಟಿದೆ.

1981ರ ಡಿಸೆಂಬರ್‌ 30ನೇ ತಾರೀಕು. ಮೈನ್‌ಪುರಿ ಜಿಲ್ಲೆಗೆ ಸೇರಿದ, ಈಗ ಫಿರೋಜಾಬಾದ್‌ಗೆ ಒಳಪಟ್ಟಿರುವ ಸಾಧುಪುರ್ ಗ್ರಾಮದಲ್ಲಿ ಅಂದು ಸಂಜೆ 6 ಗಂಟೆಯಲ್ಲಿ ಭೀಕರ ದಾಳಿ ನಡೆದಿತ್ತು. 30ರ ಹರೆಯದ ಪ್ರೇಮಾವತಿ, ತನ್ನ 14 ವರ್ಷದ ಮಗಳು ಸುಖದೇವಿ ಅವರೊಂದಿಗೆ ರೊಟ್ಟಿಗಳನ್ನು ತಟ್ಟುತ್ತಿದ್ದರು. ಪ್ರೇಮಾವತಿ ಅವರ ಮಕ್ಕಳಾದ  ಹರಿಶಂಕರ್ (12), ಕೈಲಾಶ್  8 ಅಡುಗೆ ಮನೆಯಲ್ಲಿ ಕುಳಿತ್ತಿದ್ದರು.

ಇದ್ದಕ್ಕಿದ್ದಂತೆ, ಇಬ್ಬರು ಪುರುಷರು ಅಡುಗೆಮನೆಗೆ ಪ್ರವೇಶಿಸಿದರು. ಪೊಲೀಸ್‌ ಸಮವಸ್ತ್ರದಲ್ಲಿದ್ದ ಮೂರನೇ ವ್ಯಕ್ತಿ ಮುಖ್ಯ ಬಾಗಿಲಿನ ಹೊರಗೆ ಕವಾಲಾಗಿ ನಿಂತಿದ್ದ. ಐದು ನಿಮಿಷಗಳ ಕಾಲ ಇಬ್ಬರು ವ್ಯಕ್ತಿಗಳು ಮನಬಂದಂತೆ ಗುಂಡು ಹಾರಿಸಿದರು. ಸುಖದೇವಿ ಹೊಟ್ಟೆಗೆ, ಹರಿಶಂಕರ್ ಕುತ್ತಿಗೆಗೆ ಮತ್ತು ಕೈಲಾಶ್‌ನ ಎದೆ ಮತ್ತು ಹೊಟ್ಟೆಗೆ ಗುಂಡು ತಗುಲಿದವು. ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದರು.

ಹೇಗೋ ಪ್ರೇಮಾವತಿ ಬದುಕುಳಿದಿದ್ದಳು. ಕಾಲಿಗೆ ಗುಂಡು ತಗುಲಿದ್ದರಿಂದ ವಾಕಿಂಗ್ ಸ್ಟಿಕ್ ಅವರಿಗೆ ಕಾಯಂ ಆಯಿತು. ಡಕಾಯಿತ ಅನಾರ್ ಸಿಂಗ್ ಯಾದವ್ ನೇತೃತ್ವದ ಗ್ಯಾಂಗ್‌ಗೆ ಸೇರಿದ ಮಂದಿ ಪರಿಶಿಷ್ಟ ಜಾತಿಗೆ ಸೇರಿದ ಆರು ಮಹಿಳೆಯರೂ ಸೇರಿದಂತೆ 10 ಜನರನ್ನು ಈ ಸರಣಿಯಲ್ಲಿ ಕಗ್ಗೊಲೆ ಮಾಡಿದ್ದರು.

ಸುಮಾರು 42 ವರ್ಷಗಳ ಹಿಂದೆ ನಡೆದ ಪ್ರಕರಣವಿದು. 1989ರಲ್ಲಿ ಹೊಸ ಜಿಲ್ಲೆಯ ರಚನೆ ಆಯಿತು. ಹೊಸ ಜಿಲ್ಲೆಯಲ್ಲಿ ಸುಮಾರು 32 ವರ್ಷ ನ್ಯಾಯಕ್ಕಾಗಿ ಕಾಯಬೇಕಾಯಿತು. ಫಿರೋಜಾಬಾದ್ ನ್ಯಾಯಾಲಯವು ಕಳೆದ ಮೇ 31 ರಂದು ಸಾಧುಪುರ್‌ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪನ್ನು ಪ್ರಕಟಿಸಿದೆ. ವಿಚಾರಣೆ ನಡೆಯುವ ವೇಳೆಯಲ್ಲಿಯೇ ಇಬ್ಬರು ಆರೋಪಿಗಳು (ಅನಾರ್ ಮತ್ತು ಜಪಾನ್ ಸಿಂಗ್) ನಿಧನರಾಗಿದ್ದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 307 (ಕೊಲೆಗೆ ಯತ್ನ) ಅಡಿಯಲ್ಲಿ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ 90 ವರ್ಷದ ಗಂಗಾ ದಯಾಳ್‌ಗೆ ಜೀವಾವಧಿ ಶಿಕ್ಷೆ, 50,000 ರೂಪಾಯಿ ದಂಡ ವಿಧಿಸಲಾಗಿದೆ.

“ಇದು ನ್ಯಾಯವೆಂದು ಕಾಣುತ್ತಿದೆಯೇ? ನಾನು ನನ್ನ ಇಡೀ ಜೀವನವನ್ನು ನ್ಯಾಯಕ್ಕಾಗಿ ಸವೆಸಿದೆ. ನನಗೆ ಈಗ ನ್ಯಾಯ ಸಿಗುತ್ತದೆಯೇ?”- ಸುಮಾರು ನಾಲ್ಕು ದಶಕಗಳ ಹಿಂದೆ ತನ್ನ ಮಕ್ಕಳನ್ನು ಕಳೆದುಕೊಂಡ, ಈಗ 72 ವರ್ಷದವರಾಗಿರುವ ಪ್ರೇಮಾವತಿಯವರು ಪತಿ ರಾಮ್ ಭರೋಸ್ (82) ಪಕ್ಕದಲ್ಲಿ ಕುಳಿತು ಹೀಗೆ ಅಳಲು ತೋಡಿಕೊಂಡಿದ್ದಾರೆ.

ಸಂತ್ರಸ್ತರ ಪರ ವಾದ ಮಂಡಿಸಿದ ಫಿರೋಜಾಬಾದ್ ಜಿಲ್ಲಾ ಪ್ರಧಾನ ವಕೀಲ ರಾಜೀವ್ ಉಪಾಧ್ಯಾಯ ಪ್ರತಿಕ್ರಿಯಿಸಿ, “1989ರಲ್ಲಿ ಹೊಸ ಜಿಲ್ಲೆ ರಚನೆಯಾದ ಕಾರಣ ವಿಚಾರಣೆ ಎಲ್ಲಿ ನಡೆಯಬೇಕು ಎಂದು ನಿರ್ಧರಿಸಲು ಸಾಕಷ್ಟು ಸಮಯ ವ್ಯಯಿಸಿದ್ದರಿಂದ ತೀರ್ಪು ವಿಳಂಬವಾಯಿತು” ಎಂದಿದ್ದಾರೆ.

“ಈ ಘಟನೆ ಸಂಭವಿಸಿದಾಗ, ಶಿಕೋಹಾಬಾದ್ ಪೊಲೀಸ್ ಠಾಣೆ (ಸಾಧುಪುರ್‌ ಗ್ರಾಮ ಈ ಠಾಣೆ ವ್ಯಾಪ್ತಿಗೆ ಸೇರಿದೆ) ಮೈನ್‌ಪುರಿ ಜಿಲ್ಲೆಯಲ್ಲಿತ್ತು. 1989ರಲ್ಲಿ, ಫಿರೋಜಾಬಾದ್ ಜಿಲ್ಲೆಯನ್ನು ರಚಿಸಲಾಯಿತು. ಶಿಕೋಹಾಬಾದ್ ಹೊಸ ಜಿಲ್ಲೆಯ ಭಾಗವಾಯಿತು. ಪ್ರಕರಣವು ಈಗಾಗಲೇ ಮೈನ್‌ಪುರಿ ಜಿಲ್ಲೆಯಲ್ಲಿ ಪ್ರಾರಂಭವಾಗಿರುವುದರಿಂದ, ಯಾವ ಜಿಲ್ಲಾ ನ್ಯಾಯಾಲಯವು ಈ ವಿಷಯವನ್ನು ಆಲಿಸಬೇಕು ಎಂಬುದರ ಕುರಿತು ವಾದಗಳು ಇದ್ದವು” ಎನ್ನುತ್ತಾರೆ ಉಪಾಧ್ಯಾಯ.

“(ಅಲಹಾಬಾದ್) ಹೈಕೋರ್ಟ್ ಫಿರೋಜಾಬಾದ್ ನ್ಯಾಯಾಲಯವನ್ನು ಆಯ್ಕೆ ಮಾಡುವ ಮೊದಲು ಸ್ವಲ್ಪ ಸಮಯವಾಗಿತ್ತು. ಆ ನಂತರವೂ ಆರೋಪಿಗಳು ಕಾಲಾವಕಾಶ ಕೋರುತ್ತಲೇ ಇದ್ದರು. ಇದು ಪ್ರಕರಣವನ್ನು ಮತ್ತಷ್ಟು ವಿಳಂಬಗೊಳಿಸಿತು” ಎಂದಿದ್ದಾರೆ.

ಇದನ್ನೂ ಓದಿರಿ: ಮಾಯಾವತಿ, ಮಾಂಝಿ ವಿರೋಧ ಪಕ್ಷಗಳ ಮೈತ್ರಿಯಿಂದ ದೂರ ಉಳಿಯುವರೇ?

ಅಂದಿನ ಘಟನೆಯನ್ನು ನೆನಪಿಸಿಕೊಂಡಿರುವ ಪ್ರೇಮಾವತಿ, “ಎಲ್ಲವೂ ತುಂಬಾ ವೇಗವಾಗಿ ನಡೆಯಿತು. ಒಂದು ಕ್ಷಣ, ಏನಾಗುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ. ನಾನು ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡಿದ್ದೆ. ಕಾಲಿಗೆ ಗುಂಡು ತಗುಲಿದ್ದರೂ ನನಗೆ ಯಾವುದೇ ನೋವು ಆಗಲಿಲ್ಲ. ಆಗಷ್ಟೇ ಗುಂಡಿನ ದಾಳಿ ಆರಂಭಿಸಿದ್ದರು. ಅವರು ನಮ್ಮನ್ನು ಯಾವುದೇ ವಿಚಾರ ಕೇಳಲಿಲ್ಲ. ಅವರು ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ” ಎಂದು ನೆನೆದಿದ್ದಾರೆ.

ಅಂದು ಪ್ರೇಮಾವತಿಯವರ ಅರ್ಧದಷ್ಟು ಕುಟುಂಬ ಬಲಿಯಾಗಿತ್ತು. ಬದುಕುಳಿದವರು ರಾಮ್ ಭರೋಸ್, ಪ್ರೇಮಾವತಿ ಮತ್ತು ಅವರ ಮಗ ಮಹೇಂದ್ರ ಸಿಂಗ್ (ಆಗ ಕೇವಲ 2 ವರ್ಷದ ಮಗು). ಈಗ 44 ವರ್ಷ ವಯಸ್ಸಿನವರಾದ ಮಹೇಂದ್ರ ಅವರು ಆ ಸಂಜೆ ಮತ್ತೊಂದು ಕೋಣೆಯಲ್ಲಿ ಮಲಗಿದ್ದರಿಂದ ಮಾತ್ರ ಬದುಕುಳಿದ್ದರು. ರಾಮ್ ಭರೋಸ್ ಅವರು ನೆರೆಯ ಮನೆಯಲ್ಲಿದ್ದ ಕಾರಣ ಜೀವ ಉಳಿಸಿಕೊಂಡಿದ್ದರು.

ತನ್ನ ಏಳು ಮಂದಿಯ ಕುಟುಂಬವನ್ನು ಪೋಷಿಸಲು ಕೂಲಿ ಕೆಲಸ ಮಾಡುವ ಮಹೇಂದ್ರ ಅವರು, “ಸರ್ಕಾರವು ಪ್ರತಿ ಸಂತ್ರಸ್ತ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಭರವಸೆ ನೀಡಿತು. ನಾನು 18 ನೇ ವರ್ಷಕ್ಕೆ ಕಾಲಿಟ್ಟಾಗಿನಿಂದ ಆ ಕೆಲಸವನ್ನು ಪಡೆಯಲು ಪ್ರಯತ್ನಿಸುತ್ತಿದ್ದೇನೆ. ನಾನು ಸರ್ಕಾರಕ್ಕೆ ಅನೇಕ ಪತ್ರಗಳನ್ನು ಬರೆದಿದ್ದೇನೆ. ನನ್ನನ್ನು ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಅಲೆಸಲಾಯಿತು” ಎಂದು ಅಳಲು ತೋಡಿಕೊಂಡಿದ್ದಾರೆ.

(ಪೂರ್ಣ ವರದಿಗಾಗಿ ‘ಇಲ್ಲಿ’ ಕ್ಲಿಕ್ ಮಾಡಿರಿ)

ವರದಿ ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...