ತಂದೆ ಹಾಗೂ ಮಗ ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ ಭೀಕರ ಸ್ಪೋಟ ಸಂಭವಿಸಿ ಮೃತಪಟ್ಟಿರುವ ಘಟನೆ ಗುರುವಾರ ಪುದುಚೇರಿ-ವಿಲ್ಲುಪುರಂ ಗಡಿಯಲ್ಲಿ ನಡೆದಿದೆ. ಅವರಿಬ್ಬರೂ ತಮ್ಮ ಸ್ಕೂಟರ್ನಲ್ಲಿ ಕೊಂಡೊಯ್ಯುತ್ತಿದ್ದ ಪಟಾಕಿಯೆ ಈ ಸ್ಪೋಟಕ್ಕೆ ಕಾರಣ ಎಂದು ಮಾಧ್ಯಮಗಳು ವರದಿ ಮಾಡಿವೆ.
ತಂದೆ ಕಲೈನೇಸನ್ ಮತ್ತು ಅವರ ಏಳು ವರ್ಷದ ಮಗ ಪ್ರದೀಪ್ ಗುರುವಾರ ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಪೂರ್ವ ಕರಾವಳಿ ರಸ್ತೆಯಲ್ಲಿರುವ ಕೂನಿಮೇಡು ಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪಟಾಕಿಗಳ ಕಟ್ಟುಗಳು ಅವರ ಸ್ಕೂಟರ್ನಲ್ಲಿ ಇದ್ದೂದರಿಂದ ಭಾರಿ ಸ್ಫೋಟ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ತಂದೆ-ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ದೀಪಾವಳಿ ಪಟಾಕಿ ಪರಿಣಾಮ: ತೀವ್ರ ಕಲುಷಿತಗೊಂಡ ದೆಹಲಿಯ ವಾತಾವರಣ
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಕೂಟರ್ ಓಡಿಸುತ್ತಾ ಇದ್ದಂತೆ ರಸ್ತೆಯ ಮಧ್ಯದಲ್ಲೇ ಇದು ನಡೆದಿರುವುದು ಕಂಡು ಬಂದಿದೆ. ಕಲೈನೇಸನ್ ಅವರ ಸ್ಕೂಟರ್ನ ಮುಂಬಾಗ ಅವರ ಮಗ ಇದ್ದಿದ್ದು ಸ್ಪಷ್ಟವಾಗಿ ಕಾಣುತ್ತದೆ. ಜೊತೆಗೆ ವಾಹನದ ಬಲಭಾಗದಲ್ಲಿ ಬಿಳಿ ಬಣ್ಣದ ಕಟ್ಟೊಂದು ಕೂಡಾ ವಿಡಿಯೊದಲ್ಲಿ ಕಾಣುತ್ತದೆ. ವಾಹನ ಮುಂದೆ ತೆರಳುತ್ತಿದ್ದಂತೆ ಭಾರಿ ಸ್ಪೋಟ ಸಂಭವಿಸಿದೆ. ಇದರಿಂದ ಅವರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತಂದೆ ಹಾಗೂ ಮಗ ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ ಭೀಕರ ಸ್ಪೋಟ ಸಂಭವಿಸಿ ಮೃತಪಟ್ಟಿರುವ ಘಟನೆ ಗುರುವಾರ ಪುದುಚೇರಿ-ವಿಲ್ಲುಪುರಂ ಗಡಿಯಲ್ಲಿ ನಡೆದಿದೆ. ಅವರಿಬ್ಬರೂ ತಮ್ಮ ಸ್ಕೂಟರ್ನಲ್ಲಿ ಕೊಂಡೊಯ್ಯುತ್ತಿದ್ದ ಪಟಾಕಿಯೆ ಈ ಸ್ಪೋಟಕ್ಕೆ ಕಾರಣ ಎಂದು ಮಾಧ್ಯಮಗಳು ವರದಿ ಮಾಡಿವೆ.#NaanuGauri #Puducherry #Deepavali pic.twitter.com/mloCUGgK2f
— Naanu Gauri (@naanugauri) November 5, 2021
ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಪುದುಚೇರಿಯ ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ಜಿಪ್ಮರ್) ಗೆ ಕರೆದೊಯ್ಯಲಾಗಿದೆ.
ಘಟನೆಯಲ್ಲಿ ಒಂದು ಲಾರಿ ಹಾಗೂ ಎರಡು ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ.
ಘಟನೆ ನಡೆದ ಕೂಡಲೇ ವಿಲ್ಲುಪುರಂ ಜಿಲ್ಲಾ ಡಿಐಜಿ ಪಾಂಡಿಯನ್ ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹರಿಯಾಣ: ದೆಹಲಿ ಸಮೀಪದ 14 ಜಿಲ್ಲೆಗಳಲ್ಲಿ ಪಟಾಕಿ ಮಾರಾಟ, ಬಳಕೆ ನಿಷೇಧ